ಕೋವಿಡ್ ಮೂರನೇ ಅಲೆಯ ಭೀತಿ: ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ `ನೈಟ್ ಕರ್ಫ್ಯೂ'
ಫೈಲ್ ಚಿತ್ರ
ಬೆಂಗಳೂರು, ಆ.3: ಕೋವಿಡ್ ಮೂರನೇ ಅಲೆಯ ಭೀತಿ ಹಿನ್ನೆಲೆ ಬಿಬಿಎಂಪಿ, ಮಂಗಳವಾರದಿಂದ ಕಟ್ಟುನಿಟ್ಟಾಗಿ ರಾತ್ರಿ ಕಫ್ರ್ಯೂ ಜಾರಿಗೊಳಿಸಿ, ಕಟ್ಟೆಚ್ಚರ ವಹಿಸಿದೆ.
ಈಗಾಗಲೇ ರಾತ್ರಿ ಕರ್ಫ್ಯೂ ಜಾರಿಯಿದ್ದರೂ, ಸೂಕ್ತ ರೀತಿಯ ಕಾರ್ಯಾಚರಣೆ ಕೈಗೊಂಡಿರಲಿಲ್ಲ. ಹೀಗಾಗಿ, ಮಂಗಳವಾರ ರಾತ್ರಿ 10ರಿಂದ ಮುಂಜಾನೆ 5 ಗಂಟೆವರೆಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಪೊಲೀಸ್ ಸಿಬ್ಬಂದಿಗಳು ಇನ್ನು ಮುಂದೆ ಕಾರ್ಯಾಚರಣೆ ನಡೆಸಲಿದ್ದಾರೆ.
ರಾತ್ರಿ ಕಫ್ರ್ಯೂ ಸಮಯದಲ್ಲಿ ಅನಗತ್ಯವಾಗಿ ಓಡಾಟ, ಕೋವಿಡ್ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಮುಂದಾಗಿದೆ. ಇನ್ನು, ಕರ್ಫ್ಯೂ ವೇಳೆಯಲ್ಲಿ ಸೂಕ್ತ ದಾಖಲೆ, ಕಾರಣಗಳನ್ನು ನೀಡದೆ ಓಡಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಪಾಲಿಕೆ ಎಚ್ಚರಿಸಿದೆ.
ಮಂಗಳವಾರ ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಕಫ್ರ್ಯೂ ಸಮಯದಲ್ಲಿ ಆಟೊ, ಟಾಕ್ಸಿ, ಇನ್ನಿತರೆ ವಾಹನಗಳು ಸಂಚರಿಸಲು ಯಾವುದೇ ನಿಬರ್ಂಧವಿಲ್ಲ. ಆದರೆ, ಕೊರೋನ ಮಾರ್ಗಸೂಚಿ ಅನ್ವಯವೇ ಸಾರ್ವಜನಿಕರು ನಡೆದುಕೊಳ್ಳಬೇಕು ಎಂದರು.
ಕೋವಿಡ್ ನಿಯಮ ಪಾಲನೆ ಸಂಬಂಧ ಸಮನ್ವಯ ಸಭೆ ನಡೆಸಲಾಗಿದ್ದು, ಪೊಲೀಸ್ ಇಲಾಖೆಯೂ ನಮ್ಮೊಂದಿಗೆ ಕೈಜೋಡಿಸಿದೆ. ನಗರದ ಮಾರುಕಟ್ಟೆ, ಮಾಲ್, ಹೊಟೇಲ್, ಪಬ್, ದೇವಸ್ಥಾನ, ರೆಸ್ಟೋರೆಂಟ್ ಸೇರಿದಂತೆ ಇನ್ನಿತರೆ ಕಡೆ ಹೆಚ್ಚು ಜನಸಂದಣಿಯಾಗುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು.
ನಿಯಮ ಉಲ್ಲಂಘಟನೆಯಾದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ನಿಯಮಗಳನ್ನು ಪಾಲಿಸದಿರುವ ಕಡೆ ಪಾಲಿಕೆಯ ಅಧಿಕಾರಿಗಳ ತಂಡ ಪೊಲೀಸ್ ಸಿಬ್ಬಂದಿಯ ಸಹಕಾರದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ದಂಡ ವಿಧಿಸಲಿದೆ ಎಂದರು.
ಯಾರಿಗೆ ಯಾವುದಕ್ಕೆ ವಿನಾಯಿತಿ?
► ರೋಗಿಗಳನ್ನು ಕರೆದೊಯ್ಯುವಾಗ ಸಂಬಂಧಪಟ್ಟವರಿಗೆ ಮಾತ್ರ ಅವಕಾಶ
►ವಿಮಾನ ನಿಲ್ದಾಣ, ರೈಲ್ವೆ ಸೇರಿದಂತೆ ಓಡಾಟಕ್ಕೆ ಸೂಕ್ತ ಮಾಹಿತಿ ಒದಗಿಸಬೇಕು.
►ಟೆಲಿಕಾಂ ಹಾಗೂ ಇಂಟರ್ನೆಟ್ ಸೇವೆ ಉದ್ಯೋಗಿಗಳು, ಐಡಿಕಾರ್ಡ್ ಹೊಂದಿರಬೇಕು
►ಯಾವುದೇ ಕಂಪೆನಿ ಹಾಗೂ ಕೈಗಾರಿಕಾ ಉದ್ಯೋಗಿಗಳು ಪಾಸ್ ಅಥವಾ ಗುರುತಿನ ಚೀಟಿ ಹೊಂದಿರಬೇಕು
►ಅಗತ್ಯ ಸರಕು ಸಾಗಾಟ ವಾಹನಗಳಿಗೆ ಅವಕಾಶ