varthabharthi


ರಾಷ್ಟ್ರೀಯ

ಜಂತರ್‌ ಮಂತರ್‌ ನಲ್ಲಿ ಪ್ರಚೋದನಕಾರಿ ಘೋಷಣೆ: ವೀಡಿಯೋದಲ್ಲಿ ಆರೋಪಿಗಳ ಮುಖವಿದ್ದರೂ, ಅಪರಿಚಿತರ ಮೇಲೆ ಕೇಸು ದಾಖಲು

ವಾರ್ತಾ ಭಾರತಿ : 9 Aug, 2021

Photo: Twitter/Ashwini Upadhyaya

ಹೊಸದಿಲ್ಲಿ: ರಾಜಧಾನಿಯ ಜಂತರ್ ಮಂತರ್ ನಲ್ಲಿ ರವಿವಾರ ನಡೆದ ರ್ಯಾಲಿಯೊಂದರಲ್ಲಿ ಮುಸ್ಲಿಮರ ವಿರುದ್ಧ ಹಿಂಸೆಗೆ ಕರೆ ನೀಡಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಪೊಲೀಸರು ಸೋಮವಾರ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ರ್ಯಾಲಿಯ ಹಲವಾರು ವೀಡಿಯೋಗಳಲ್ಲಿ ಭಾಗವಹಿಸಿದವರ ಗುರುತು ಸ್ಪಷ್ಟವಾಗಿ ಕಾಣುತ್ತಿದ್ದರೂ ಪೊಲೀಸರು ಮಾತ್ರ ತಮ್ಮ ಎಫ್‍ಐಆರ್ ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ ಎಂದು scroll.in ವರದಿ ಮಾಡಿದೆ.

ಸುಪ್ರೀಂ ಕೋರ್ಟ್ ವಕೀಲ ಹಾಗೂ ಬಿಜೆಪಿ ದಿಲ್ಲಿ ಘಟಕದ ಮಾಜಿ ವಕ್ತಾರ ಅಶ್ವಿನಿ ಉಪಾಧ್ಯಾಯ ತಮ್ಮ ʼಭಾರತ್ ಜೋಡೋʼ ಆಂದೋಲನದ ಅಂಗವಾಗಿ ರವಿವಾರ ಸಂಜೆ ಜಂತರ್ ಮಂತರ್ ನಲ್ಲಿ ರ್ಯಾಲಿ ಆಯೋಜಿಸಿದ್ದರು. ಪುರೋಗಾಮಿ ಕಾನೂನುಗಳಿಗೆ ಅಂತ್ಯ ಹಾಡಬೇಕು ಹಾಗೂ ಸಮಾನ ನೀತಿ ಸಂಹಿತೆ ಜಾರಿಗೊಳಿಸಬೇಕೆಂಬ ಆಗ್ರಹ ಮುಂದಿಟ್ಟು ರ್ಯಾಲಿ ಆಯೋಜಿಸಲಾಗಿತ್ತು, ಆದರೆ ಅದಕ್ಕೆ ಪೊಲೀಸ್ ಅನುಮತಿ ಪಡೆದಿರಲಿಲ್ಲ.

"ಜಬ್ ಮುಲ್ಲೇ ಕಾಟ್ ಜಾಯೇಂಗೆ, ರಾಮ್ ರಾಮ್ ಚಿಲ್ಲಾಯೇಂಗೆ" ಎಂಬಂತಹ ಘೋಷಣೆಗಳನ್ನು ಕೂಗಿರುವುದು ವೀಡಿಯೋಗಳಲ್ಲಿ ಕಾಣಿಸುತ್ತದೆ. ಅಷ್ಟೇ ಅಲ್ಲದೆ ಮಾಸ್ಕ್ ಕೂಡ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಲಾಗಿತ್ತು.

ಅಲ್ಲಿಗೆ ವರದಿ ಮಾಡಲೆಂದು ತೆರಳಿದ್ದ ನ್ಯಾಷನಲ್ ದಸ್ತಕ್ ಪತ್ರಕರ್ತ ಅನ್ಮೋಲ್ ಪ್ರೀತಮ್ ಎಂಬವರ ಮೇಲೆ ಹಲ್ಲೆಗೈದು ಜೈ ಶ್ರೀ ರಾಮ್ ಹೇಳುವಂತೆ ಬಲವಂತಪಡಿಸಲಾದ ಘಟನೆಯೂ ಈ ಸಂದರ್ಭ ನಡೆದಿದೆ ಎಂದು ವರದಿ ಉಲ್ಲೇಖಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)