ಬೆಂಗಳೂರು: ಗಂಡ ಹೆಂಡತಿ ಜಗಳದಲ್ಲಿ ಸೂಟ್ಕೇಸ್ ತಂದ ಆತಂಕ..!
ಬೆಂಗಳೂರು, ಸೆ.5: ರಾಜಧಾನಿ ಬೆಂಗಳೂರಿನ ಸಿಟಿಯ ಬೈಯ್ಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಪತ್ತೆಯಾದ ಶಂಕಾಸ್ಪದ ಸೂಟ್ಕೇಸ್ ಪ್ರಕರಣಕ್ಕೆ ತನಿಖಾಧಿಕಾರಿಗಳು ಇತಿಶ್ರೀ ಹಾಡಿದ್ದು, ಗಂಡ-ಹೆಂಡತಿ ಜಗಳವನ್ನಾಡಿಕೊಂಡು ಈ ಸೂಟ್ಕೇಸ್ ಬಿಟ್ಟು ಹೋಗಿದ್ದಾರೆ ಎನ್ನುವ ಮಾಹಿತಿ ಗೊತ್ತಾಗಿದೆ.
ರವಿವಾರ ಮೆಟ್ರೊ ನಿಲ್ದಾಣದ ಹೊರಭಾಗಕ್ಕೆ ತೆರಳುವ ಸ್ಥಳದಲ್ಲಿ ಸಂಶಯ ಮೂಡಿಸುವ ಸೂಟ್ಕೇಸ್ವೊಂದು ಬಿಎಂಆರ್ಸಿಎಲ್ ನ ಭದ್ರತಾ ಸಿಬ್ಬಂದಿ ಪತ್ತೆಹಚ್ಚಿದ್ದು, ಕೆಲಕಾಲ ಆಂತಕ ವ್ಯಕ್ತವಾಗಿತ್ತು. ಇನ್ನು, ಇದನ್ನು ಮೆಟಲ್ ಡಿಟೆಕ್ಟರ್ ಮೂಲಕ ಪರೀಕ್ಷಿಸಿದಾಗ, ಶಬ್ದ ಬಂದಿದ್ದು, ಇದರಿಂದ ಗಾಬರಿಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ ಪೊಲೀಸರು, ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರೀಯ ದಳ ಸಿಬ್ಬಂದಿ ಪರಿಶೀಲಿಸಿದಾಗ ಇದು ಬಾಂಬ್ ಸೂಟ್ಕೇಸ್ ಅಲ್ಲ, ಬಟ್ಟೆಗಳಿದ್ದ ಪೆಟ್ಟಿಗೆ ಎಂದು ಗೊತ್ತಾಗಿದೆ.
ಒಡಿಶಾ ಮೂಲದ ದಂಪತಿ ಬೈಯ್ಯಪ್ಪನಹಳ್ಳಿ ಬಳಿಯ ಕೃಷ್ಣಯ್ಯ ಪಾಳ್ಯದಲ್ಲಿ ವಾಸವಿದ್ದರು.ಇತ್ತೀಚೆಗೆ ಪತಿಯ ಕಿರುಕುಳದಿಂದ ಬೇಸತ್ತು ಸೂಟ್ಕೇಸ್ ಸಮೇತ ಒಡಿಶಾಗೆ ಹೊರಟಿದ್ದರು.ಅದರಂತೆ ಮೆಟ್ರೋ ಮೂಲಕ ಮೆಜೆಸ್ಟಿಕ್ ಗೆ ಹೋಗಲು ಬೈಯ್ಯಪ್ಪನಹಳ್ಳಿ ಮೆಟ್ರೊ ನಿಲ್ದಾಣಕ್ಕೆ ಅವರು ಬಂದಿದ್ದರು. ಮೊಬೈಲ್ ಚಾರ್ಜರ್ ಮರೆತು ದಿನೇಶ್ ಪತ್ನಿ ಅದನ್ನು ತರಲು ಮನೆಗೆ ಹೋಗಿದ್ದರು ಎಂದು ತಿಳಿದುಬಂದಿದೆ.