ಗಣೇಶ ಮೂರ್ತಿಗಳ ವಿಸರ್ಜನೆಗೆ ಮೊಬೈಲ್ ಟ್ಯಾಂಕರ್ ಸೇವೆ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ
ಬೆಂಗಳೂರು, ಸೆ.5: ಗಣೇಶೋತ್ಸವ ಅಂಗವಾಗಿ ಮನೆಗಳಲ್ಲಿಯೇ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ವಿಸರ್ಜನೆಗೆ ಮೊಬೈಲ್ ಟ್ಯಾಂಕರ್ ಸೇವೆ ಒದಗಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಮೂರನೆ ಅಲೆಯ ಭೀತಿ ಹಿನ್ನೆಲೆ ದೇವಾಲಯ ಮತ್ತು ಮನೆಗಳಲ್ಲಿಯೇ ಗಣೇಶೋತ್ಸವ ಆಚರಣೆಗೆ ಸರಕಾರ ಅವಕಾಶ ನೀಡಿದೆ. ಈ ಸಂಬಂಧ ಮನೆ ಬಾಗಿಲಿಗೆ ಗಣೇಶ ವಿಸರ್ಜನಾ ವಾಹನ ಸೇವೆ ನೀಡಲು ಬಿಬಿಎಂಪಿ ನಿರ್ಧಾರ ಕೈಗೊಂಡಿದೆ ಎಂದರು.
ಸಾರ್ವಜನಿಕ ಗಣೇಶೋತ್ಸವ ಸಂಬಂಧ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕೆಲ ನಿರ್ಬಂಧಗಳನ್ನು ಪುನರ್ ಪರೀಶಲನೆ ನಡೆಸುವ ಸಾಧ್ಯತೆ ಇದೆ. ಜತೆಗೆ, ಅಲ್ಲಿಯೂ ಕೋವಿಡ್ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಲಾಗುವುದು ಎಂದ ಅವರು, ಸದ್ಯ ಪರಿಸ್ಥಿತಿಯಲ್ಲಿ ಕೊರೋನ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಸರಳ ಆಚರಣೆಗೆ ಮುಂದಾಗಬೇಕು ಎಂದರು.
ಸೋಂಕು ಹರಡದಂತೆ ಎಲ್ಲರೂ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇನ್ನು, ಕೆಲ ಕಾಲೇಜುಗಳಲ್ಲಿ ಸೋಂಕಿನ ಪ್ರಕರಣ ಹೆಚ್ಚಾಗುತ್ತಿರುವ ಕಾರಣ, ಕಸ್ಟರ್, ಕಂಟೋನ್ಮೆಟ್ ಝೋನ್ ಗುರುತಿಸುವ ಕಾರ್ಯ ನಡೆಯುತ್ತಿದ್ದು, ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಗುಪ್ತ ನುಡಿದರು.