varthabharthi


ಅಂತಾರಾಷ್ಟ್ರೀಯ

ಪಂಜ್ಶೀರ್ ಪ್ರಾಂತ್ಯವನ್ನು 'ಸಂಪೂರ್ಣವಾಗಿ ವಶಕ್ಕೆ ಪಡೆಯಲಾಗಿದೆ' ಎಂದ ತಾಲಿಬಾನ್

ವಾರ್ತಾ ಭಾರತಿ : 6 Sep, 2021

File Photo: PTI

 ಕಾಬೂಲ್, ಸೆ.6: ಅಫ್ಗಾನ್ ನ ಪಂಜ್ಶಿರ್ ಪ್ರಾಂತ್ಯವನ್ನೂ ಕೈವಶ ಮಾಡಿಕೊಳ್ಳುವ ಮೂಲಕ ಸಂಪೂರ್ಣ ದೇಶ ತಮ್ಮ ನಿಯಂತ್ರಣದಲ್ಲಿದೆ ಎಂದು ತಾಲಿಬಾನ್ ಸೋಮವಾರ ಹೇಳಿಕೊಂಡಿದೆ. ಆದರೆ ಇದನ್ನು ಪ್ರತಿರೋಧ ಪಡೆ ನಿರಾಕರಿಸಿದೆ ಎಂದು ಎಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಪಂಜ್ಶಿರ್ ಕಣಿವೆಯ ಎಲ್ಲಾ ಪ್ರಮುಖ ನೆಲೆಗಳಲ್ಲಿ ಎನ್ಆರ್ಎಫ್(ರಾಷ್ಟ್ರೀಯ ಪ್ರತಿರೋಧ ಪಡೆ) ಹೋರಾಟ ಮುಂದುವರಿಸಿದೆ. ನ್ಯಾಯ ಮತ್ತು ಸ್ವಾತಂತ್ರ್ಯಕ್ಕೆ ಪ್ರಾಧಾನ್ಯತೆ ಸಿಗುವವರೆಗೆ ತಾಲಿಬಾನ್ ಮತ್ತದರ ಸಹಭಾಗಿಗಳ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದು ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್(ಎನ್ಆರ್ಎಫ್) ಟ್ವೀಟ್ ಮಾಡಿದೆ.

  ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ತಾಲಿಬಾನ್ ವಕ್ತಾರ ಝಬೀಹುಲ್ಲಾ ಮುಜಾಹಿದ್, ಪಂಜ್ಶಿರ್ ನ ನಿವಾಸಿಗಳು ತಾಲಿಬಾನ್ ಆಡಳಿತದಡಿ ಸುರಕ್ಷಿತರಾಗಿರುತ್ತಾರೆ . ಪಂಜ್ಶಿರ್‌ ನ ನಮ್ಮ ಸೋದರರ ಬಗ್ಗೆ ಯಾವುದೇ ಪಕ್ಷಪಾತ ತೋರುವುದಿಲ್ಲ ಮತ್ತು ಸಾಮಾನ್ಯ ಗುರಿ ಇರಿಸಿಕೊಂಡು ದೇಶಸೇವೆ ಮಾಡುವುದಾಗಿ ಪಂಜ್ಶಿರ್ ನ ಗೌರವಾನ್ವಿತ ಜನತೆಗೆ ನಾವು ಭರವಸೆ ನೀಡುತ್ತೇವೆ ಎಂದಿದ್ದರು.

 ಈ ಮಧ್ಯೆ, ತನ್ನ ವಕ್ತಾರ ಫಾಹಿಮ್ ದಸ್ತಿ ಮತ್ತು ಕಮಾಂಡರ್ ಜ. ಅಬ್ದುಲ್ ವುದೊದ್ ಝರ ತಾಲಿಬಾನ್ನೊಂದಿಗಿನ ಹೋರಾಟದಲ್ಲಿ ಮೃತಪಟ್ಟಿರುವುದನ್ನು ಎನ್ಆರ್ಎಫ್ ರವಿವಾರ ದೃಢಪಡಿಸಿದೆ. ಪಂಜ್ಶಿರ್ ಪ್ರಾಂತ್ಯವನ್ನು ಕೈವಶ ಮಾಡಿಕೊಳ್ಳಲು ದೃಢಸಂಕಲ್ಪ ಮಾಡಿರುವ ತಾಲಿಬಾನ್ ತನ್ನೆಲ್ಲಾ ಬಲಪ್ರಯೋಗಿಸಿ ಕಾರ್ಯಾಚರಣೆ ನಡೆಸುತ್ತಿದೆ. ಈ ಪ್ರಾಂತ್ಯದ ಉನಾಬ ಮತ್ತು ಖಿಂಜ್ ಜಿಲ್ಲೆಗಳನ್ನು ಕೈವಶ ಮಾಡಿಕೊಂಡಿರುವುದಾಗಿ ತಾಲಿಬಾನ್ ಸೆ.4ರಂದು ಘೋಷಿಸಿತ್ತು. ಪಂಜ್ಶಿರ್ ಮೇಲಿನ ಆಕ್ರಮಣವನ್ನು ತಾಲಿಬಾನ್ ಅಂತ್ಯಗೊಳಿಸಿದರೆ ತಾಲಿಬಾನ್ನೊಂದಿಗಿನ ಹೋರಾಟವನ್ನು ಅಂತ್ಯಗೊಳಿಸಲು ತಾನು ಸಿದ್ಧ ಎಂದು ಪ್ರತಿರೋಧ ಪಡೆಯ ಮುಖ್ಯಸ್ಥ ಮಸೂದ್ ಹೇಳಿಕೆ ನೀಡಿದ್ದರು.


ವಿಶ್ವಸಂಸ್ಥೆ ಅಧಿಕಾರಿ ಭೇಟಿಯಾದ ತಾಲಿಬಾನ್

ತಾಲಿಬಾನ್ನ ಮುಖಂಡ ಮುಲ್ಲಾ ಬರಾದರ್ ಸಹಿತ ಉನ್ನತ ಮಟ್ಟದ ನಿಯೋಗ ರವಿವಾರ ವಿಶ್ವಸಂಸ್ಥೆಯ ಮಾನವೀಯ ವ್ಯವಹಾರ ಮತ್ತು ತುರ್ತು ಪರಿಹಾರ ಸಮನ್ವಯ ಸಮಿತಿಯ ಪ್ರಧಾನ ಅಧೀನ ಕಾರ್ಯದರ್ಶಿ ಮಾರ್ಟಿನ್ ಗ್ರಿಫಿತ್ ರನ್ನು ಅಫ್ಗಾನ್ ನ ವಿದೇಶ ವ್ಯವಹಾರ ಸಚಿವಾಲಯದಲ್ಲಿ ಭೇಟಿ ಮಾಡಿದೆ ಎಂದು ಎಎನ್ಐ ವರದಿ ಮಾಡಿದೆ.

 ಅಫ್ಗಾನ್ ಗೆ ತಾರತಮ್ಯ ರಹಿತ ಮಾನವೀಯ ನೆರವು ಮತ್ತು ರಕ್ಷಣೆ ಒದಗಿಸುವ ಬದ್ಧತೆಯನ್ನು ವಿಶ್ವಸಂಸ್ಥೆ ಮತ್ತೆ ಖಾತರಿಪಡಿಸಿದೆ. ಅಫ್ಗಾನ್ ನಲ್ಲಿ ಮಾನವೀಯ ನೆರವು ಒದಗಿಸುತ್ತಿರುವ ಸಿಬಂದಿಗಳ ಸುರಕ್ಷತೆಯನ್ನು ತಾಲಿಬಾನ್ ಅಧಿಕಾರಿಗಳು ಖಾತರಿಪಡಿಸಿದ್ದಾರೆ ಮತ್ತು ಇವರು ಅಫ್ಗಾನ್ ನಲ್ಲಿ ಮುಕ್ತವಾಗಿ ಸಂಚರಿಸಬಹುದು ಎಂದು ಭರವಸೆ ನೀಡಿದ್ದಾರೆ ಎಂದು ಗ್ರಿಫಿತ್ ಟ್ವೀಟ್ ಮಾಡಿದ್ದಾರೆ.


ತೆರವು ಕಾರ್ಯಾಚರಣೆಗೆ ತಾಲಿಬಾನ್ ಅಡ್ಡಿ: ಅಮೆರಿಕ

ಈ ಮಧ್ಯೆ, ಅಫ್ಗಾನ್ನಿಂದ ನೂರಾರು ಮಂದಿಯನ್ನು ತೆರವುಗೊಳಿಸಲು ಸನ್ನದ್ಧವಾಗಿದ್ದ ಕನಿಷ್ಟ 4 ವಿಮಾನಗಳು ಮಝರ್-ಎ-ಶರೀಫ್ ವಿಮಾನ ನಿಲ್ದಾಣದಲ್ಲೇ ಬಾಕಿಯಾಗಿವೆ. ಈ ವಿಳಂಬಕ್ಕೆ ಅಮೆರಿಕ ಹಾಗೂ ಅಫ್ಗಾನ್ ಅಧಿಕಾರಿಗಳು ವಿಭಿನ್ನ ಕಾರಣಗಳನ್ನು ನೀಡುತ್ತಿದ್ದಾರೆ ಎಂದು ಎಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಸ್ಥಳಾಂತರಗೊಳ್ಳಲು ಸಿದ್ಧರಾದವರಲ್ಲಿ ಅಮೆರಿಕನ್ನರೂ ಇದ್ದರು. ಆದರೆ ವಿಮಾನ ಮೇಲೇರಲು ತಾಲಿಬಾನ್ ಅವಕಾಶ ನೀಡಿಲ್ಲ. ಒಂದು ರೀತಿಯಲ್ಲಿ, ವಿಮಾನದಲ್ಲಿದ್ದವರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿದೆ ಎಂದು ಅಮೆರಿಕದ ವಿದೇಶ ವ್ಯವಹಾರ ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ. ಆದರೆ ವಿಮಾನದಲ್ಲಿದ್ದ ಪ್ರಯಾಣಿಕರು ಅಫ್ಗನ್ ಪ್ರಜೆಗಳಾಗಿದ್ದು ಅವರ ಬಳಿ ಪಾಸ್ ಪೋರ್ಟ್ ಅಥವಾ ವೀಸಾ ಇರಲಿಲ್ಲ. ಆದ್ದರಿಂದ ತಡೆಹಿಡಿಯಲಾಗಿದೆ ಎಂದು ಮಝರ್-ಎ-ಶರೀಫ್ ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)