ಡಾ.ಅಂಬೇಡ್ಕರ್ ಹೆಸರು ಸೂಕ್ತ
ಮಾನ್ಯರೇ,
ಕಂದಾಯ ವ್ಯಾಪ್ತಿಗೆ ಬರುವ ಪ್ರತಿಯೊಂದು ತಾಲೂಕು ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಿನಿ ವಿಧಾನ ಸೌಧ ಎಂಬ ಹೆಸರನ್ನು ಬದಲಾವಣೆ ಮಾಡುವ ಕುರಿತು ಸರಕಾರದ ಮಟ್ಟದಲ್ಲಿ ತೀರ್ಮಾನ ಮಾಡಿರುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಇತ್ತೀಚೆಗೆ ಅಧಿಕೃತವಾಗಿ ಪ್ರಕಟಿಸಿರುವುದು ಸ್ವಾಗತಾರ್ಹ ಬೆಳವಣಿಗೆ. ಸಂವಿಧಾನದ ಮೂಲ ಪ್ರಸ್ತಾವನೆಯಲ್ಲಿ ನ್ಯಾಯ, ಸಾರ್ವಭೌಮ, ಸಮಾಜವಾದಿ, ಸಮಾನತೆ, ಭ್ರಾತೃತ್ವ ಪ್ರತಿಪಾದಿಸುವ ಗುಣಾತ್ಮಕ ಮೂಲಾಂಶಗಳನ್ನು ಸೇರಿಸುವ ಮೂಲಕ ದೇಶ ಪ್ರಬಲ ರಾಷ್ಟ್ರಗಳ ಸಾಲಿನಲ್ಲಿ ನಿಂತು ಅಭಿವೃದ್ಧಿಯೊಂದಿಗೆ ಮುನ್ನಡೆಯಲು ದೇಶದ ಶ್ರೇಷ್ಠ ಗ್ರಂಥ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಮೂಲ ಕಾರಣವಾಗಿದೆ. ಸಮಸ್ತ ಪ್ರತಿಯೊಬ್ಬ ನಾಗರಿಕರ ಹಿತಕ್ಕಾಗಿ ಸ್ವಾತಂತ್ರ್ಯ ಮತ್ತು ರಾಜಕೀಯ ಹಕ್ಕುಗಳಿಗಾಗಿ ತಮ್ಮ ಜೀವನ ಪರ್ಯಂತ ಹೋರಾಡಿ ಈ ಹಿಂದಿನ ಸಮಾಜ ಸುಧಾರಕರು ಯಾರೂ ಸಾಧಿಸದ ಮಹಾಕ್ರಾಂತಿಯನ್ನು ಸಾಧಿಸಿ ಇತಿಹಾಸವನ್ನು ಸೃಷ್ಟಿಸಿದ ಭಾರತ ಭಾಗ್ಯವಿದಾತ ‘ಡಾ.ಅಂಬೇಡ್ಕರ್ ತಾಲೂಕು ಆಡಳಿತ ಕಚೇರಿ’ ಎಂದು ಹೆಸರನ್ನು ಸರಕಾರ ಮರು ನಾಮಕರಣ ಮಾಡಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮುನ್ನುಡಿ ಬರೆದ ಸಂವಿಧಾನ ಶಿಲ್ಪಿಬಾಬಾಸಾಹೇಬರನ್ನು ರಾಜ್ಯ ಸರಕಾರ ಗೌರವಿಸಲಿ. ಬಹುಶಃ ಇಂತಹ ಸೂಕ್ತ ನ್ಯಾಯೋಚಿತ ಅರ್ಹ ಬದಲಾವಣೆಯಿಂದ ರಾಜ್ಯ ಸರಕಾರದ ಈ ನಡೆ ದೇಶದ ಒಕ್ಕೂಟ ವ್ಯವಸ್ಥೆಯ ಪ್ರತಿಯೊಂದು ರಾಜ್ಯಗಳಿಗೂ ಮಾದರಿಯಾಗಬಹುದು.