ರಾಷ್ಟ್ರೀಯ
ಪತ್ರಿಕಾ ಕಚೇರಿ ಮೇಲೆ ಬಿಜೆಪಿ ಕಾರ್ಯಕರ್ತರ ದಾಳಿ, ವಾಹನಗಳಿಗೆ ಬೆಂಕಿ: ಪತ್ರಕರ್ತನಿಗೆ ಗಾಯ

'ಪ್ರತಿಬಾದಿ ಕಲಮ್'
ಗುವಾಹತಿ, ಸೆ.9: ತ್ರಿಪುರಾದ 'ಪ್ರತಿಬಾದಿ ಕಲಮ್' ಎಂಬ ಸ್ಥಳೀಯ ಭಾಷಾ ಪತ್ರಿಕೆಯ ಕಚೇರಿ ಮೇಲೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ದಾಳಿ ನಡೆಸಿ, ಪತ್ರಕರ್ತರೊಬ್ಬರನ್ನು ಗಾಯಗೊಳಿಸಿದ್ದಾರೆ. ದಾಳಿಕೋರರು ಪತ್ರಿಕಾಲಯವನ್ನು ಧ್ವಂಸಗೊಳಿಸಿ, ವಾಹನಗಳಿಗೆ ಬೆಂಕಿ ಹಚ್ಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಗರ್ತಲದಿಂದ ಪ್ರಕಟವಾಗುತ್ತಿದ್ದ ಪತ್ರಿಕೆಯ ಕಚೇರಿ ಮೇಲೆ ನಡೆದ ಈ ದಾಳಿಯಲ್ಲಿ ಪತ್ರಿಕಾ ಕಚೇರಿಯ ಉಪಕರಣಗಳು, ದಾಖಲೆಗಳು ಹಾಗೂ ಕಾರು ಹಾಗೂ ಬೈಕ್ಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪ್ರತಿಬಾದಿ ಕಲಮ್ ಪತ್ರಿಕೆಯ ಸಂಪಾದಕ ಅನಲ್ ರಾಯ್ ಚೌಧರಿ ನೀಡಿದ ಪೊಲೀಸ್ ದೂರಿನಲ್ಲಿ ವಿವರಿಸಿದ್ದಾರೆ.
ಸಂಜೆ 4:30ರ ಸುಮಾರಿಗೆ 200-300 ಮಂದಿ ಬಿಜೆಪಿ ಕಾರ್ಯಕರ್ತರ ದಂಡು ರಾಜ್ಯ ಮುಖಂಡರ ನೇತೃತ್ವದಲ್ಲಿ ಪತ್ರಿಕಾ ಕಚೇರಿಯ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದೆ. ಈ ಗೂಂಡಾಗಳು ಸುಮಾರು 30 ನಿಮಿಷಗಳ ಕಾಲ ಭೀತಿ ಹುಟ್ಟಿಸಿದ್ದಲ್ಲದೇ, ವರದಿಗಾರ ಪ್ರಸೇನ್ಜಿತ್ ರಾಯ್ ಮೇಲೆ ಹಲ್ಲೆ ಮಾಡಿದರು ಎಂದು ಆಪಾದಿಸಲಾಗಿದೆ. ಸಿಪಿಎಂನ ಕೆಲ ಕಚೇರಿಗಳಿಗೂ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ. ಕೇಂದ್ರ ಸಚಿವರಾದ ಪ್ರತಿಮಾ ಭೌಮಿಕ್ ಅವರು ಇಂದು ಪಶ್ಚಿಮ ತ್ರಿಪುರಾದ ಕಥಾಲಿಯಾದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು ಎಂದು ಎಎನ್ಐ ವರದಿ ಮಾಡಿದೆ.
"ಕಳೆದ ಎರಡೂವರೆ ವರ್ಷದಿಂದ ಮುಚ್ಚಿದ್ದ ಸಿಪಿಐನ ಸ್ಥಳೀಯ ಕಚೇರಿಯ ಮೇಲೂ ದಾಳಿ ಮಾಡಿ ಧ್ವಂಸಗಳಿಸಲಾಗಿದೆ. ನಮ್ಮ ವಾಹನಗಳನ್ನು ಜಖಂಗೊಳಿಸಲಾಗಿದೆ. ಒಂದು ವಾಹನಕ್ಕೆ ಬೆಂಕಿ ಹಚ್ಚಲಾಗಿದೆ" ಎಂದು ಸಿಪಿಎಂ ಮುಖಂಡ ಬಿಜನ್ ಧಾರ್ ಆಪಾದಿಸಿದ್ದಾರೆ. ಈ ಹಿಂಸಾಚಾರದ ಬಳಿಕ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯಿಂದ ರ್ಯಾಲಿ ನಡೆಸಲಾಗಿದೆ.
"ದಾಳಿಯಲ್ಲಿ ಕನಿಷ್ಠ ನಾಲ್ವರು ಪತ್ರಕರ್ತರಿಗೆ ಗಾಯಗಳಾಗಿವೆ. ಎಲ್ಲ ಪತ್ರಿಕೆಗಳು ಹಾಗೂ ದಾಖಲೆಗಳು, ಕಂಪ್ಯೂಟರ್ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಪಡಿಸಲಾಗಿದೆ. ದೊಡ್ಡ ಸಂಖ್ಯೆಯಲ್ಲಿದ್ದ ಪೊಲೀಸರು ಘಟನೆಗೆ ಮೂಕ ಪ್ರೇಕ್ಷಕರಾಗಿದ್ದರು. ಪೊಲೀಸರು ಏನೂ ಮಾಡಿಲ್ಲ" ಎಂದು ಎಫ್ಐಆರ್ ಹೇಳಿದೆ.
ಲಾಠಿ ಹಾಗೂ ಹರಿತವಾದ ಆಯುಧಗಳನ್ನು ಹೊಂದಿದ್ದ ಗೂಂಡಾಗಳು ನಮ್ಮ ಪತ್ರಕರ್ತ ಪ್ರಸೇನ್ಜೀತ್ ಸಹಾ ಅವರ ತಲೆಯ ಮೇಲೆ ಹರಿತವಾದ ಆಂಯುಧಗಳಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದಾರೆ. ಇಂಥ ಹಿಂಸಾತ್ಮಕ ದಾಳಿಯನ್ನು ರಾಜ್ಯದ ಇತಿಹಾಸದಲ್ಲೇ ನೋಡಿಲ್ಲ ಎಂದು ಚೌಧರಿ ವಿವರಿಸಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ












