ಬೆಲೆಯೇರಿಕೆ ಖಂಡಿಸಿ ವಿನೂತನ ಪ್ರತಿಭಟನೆ: ಎತ್ತಿನಗಾಡಿಯಲ್ಲಿ ವಿಧಾನಸಭೆಗೆ ಹೊರಟ ಸಿದ್ದರಾಮಯ್ಯ, ಡಿಕೆಶಿ
ಬೆಳಗಾವಿ, ಸೆ.13: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ವಿನೂತನವಾಗಿ ಪ್ರತಿಭಟಿಸಲು ರಾಜ್ಯ ಕಾಂಗ್ರೆಸ್ ನಾಯಕರು ಮುಂದಾಗಿದ್ದು, ಇಂದಿನಿಂದ 10 ದಿನಗಳ ಕಾಲ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಭಾಗವಹಿಸಲು ಎತ್ತಿನ ಗಾಡಿಯಲ್ಲಿ ತೆರಳಿ ಸಾರ್ವಜನಿಕರ ಗಮನಸೆಳೆದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸದಾಶಿವ ನಗರದಲ್ಲಿರುವ ತಮ್ಮ ನಿವಾಸದಿಂದ ಎತ್ತಿನಗಾಡಿಯ ಮೂಲಕ ವಿಧಾನಸೌಧಕ್ಕೆ ಹೊರಟಿದ್ದಾರೆ. ವಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರಕಾರಿ ನಿವಾಸದಿಂದ ವಿಧಾನಸೌಧಕ್ಕೆ ಎತ್ತಿನಗಾಡಿ ಚಲೋ ಹೊರಟಿದ್ದಾರೆ. ಇವರಿಗೆ ನೂರಾರು ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಕೂಡಾ ಸಾಥ್ ನೀಡಿದ್ದು, ರ್ಯಾಲಿಯಲ್ಲಿ ಸರಕಾರದ ವಿರುದ್ಧ ಘೋಷಣೆಗಳು ಕೇಳಿಬರುತ್ತಿದೆ.
ರ್ಯಾಲಿ ಹೊರಡುವುದಕ್ಕಿಂತ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ʼಬಿಜೆಪಿ ಸರ್ಕಾರ ದೇಶದ ಜನರ ಜೇಬಿಗೆ ಕೈಹಾಕಿ ದೋಚುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್ಗೆ ರೂ.25 ಕಡಿಮೆ ಮಾಡಬೇಕು. ಎಲ್ಪಿಜಿ ಸಿಲಿಂಡರ್ ದರವನ್ನೂ ಕಡಿತ ಮಾಡಬೇಕುʼ ಎಂದು ಆಗ್ರಹಿಸಿದರು.
ವಿಧಾನ ಮಂಡಲ ಅಧಿವೇಶನದಲ್ಲೂ ಬೆಲೆ ಏರಿಕೆ ಕುರಿತು ಪ್ರಸ್ತಾಪ ಮಾಡುವುದಾಗಿ ಅವರು ತಿಳಿಸಿದ್ದಾರೆ.