ಸಾವಿನ ವದಂತಿ ಸುಳ್ಳು, ನಾನು ಕ್ಷೇಮವಾಗಿದ್ದೇನೆ: ತಾಲಿಬಾನ್ ಸಹಸ್ಥಾಪಕ ಅಬ್ದುಲ್ ಘನಿ ಬರಾದಾರ್
ಅಬ್ದುಲ್ ಘನಿ ಬರಾದಾರ್ [photo: twitter/@SafiUll23784493[
ಕಾಬೂಲ್, ಸೆ.13: ತಾಲಿಬಾನ್ ಸಹಸ್ಥಾಪಕ, ಈಗ ಅಫ್ಘಾನ್ ನ ಉಪಪ್ರಧಾನಿಯಾಗಿರುವ ಅಬ್ದುಲ್ ಘನಿ ಬರಾದಾರ್ ಸೋಮವಾರ ಆಡಿಯೊ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು, ತನ್ನ ಸಾವಿನ ಕುರಿತ ವದಂತಿ ಸುಳ್ಳು ಎಂದಿದ್ದಾರೆ.
ರಾಜಭವನದ ಹೊರಗೆ ತಾಲಿಬಾನ್ ವಿರೋಧಿ ಪಡೆಯೊಂದಿಗೆ ನಡೆದ ಸಂಘರ್ಷದಲ್ಲಿ ಅಬ್ದುಲ್ ಘನಿ ಬರಾದಾರ್ ತೀವ್ರ ಗಾಯಗೊಂಡಿದ್ದು ಬಳಿಕ ಮೃತಪಟ್ಟಿದ್ದಾರೆ ಎಂಬ ಸುದ್ದಿ ಭಾರತ ಸಹಿತ ಹಲವೆಡೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಇದಕ್ಕೆ ಪ್ರತಿಯಾಗಿ ಆಡಿಯೊ ಬಿಡುಗಡೆಗೊಳಿಸಿರುವ ಬರಾದಾರ್ ‘ ನನ್ನ ಸಾವಿನ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಕಳೆದ ಕೆಲ ದಿನಗಳಿಂದ ನಾನು ಪ್ರವಾಸದಲ್ಲಿದ್ದೇನೆ. ನಾನೀಗ ಎಲ್ಲಿದ್ದರೂ ಕ್ಷೇಮವಾಗಿದ್ದೇನೆ . ಮಾಧ್ಯಮಗಳು ಯಾವತ್ತೂ ಸುಳ್ಳು ಸುದ್ಧಿ ಪ್ರಚಾರ ಮಾಡುತ್ತವೆ. ಆದ್ದರಿಂದ ಇಂತಹ ಸುದ್ದಿಗಳನ್ನು ತಿರಸ್ಕರಿಸಿಬಿಡಿ. ಯಾವುದೇ ಸಮಸ್ಯೆಯಿಲ್ಲ ಮತ್ತು ನಾವೆಲ್ಲಾ ಕ್ಷೇಮವಾಗಿದ್ದೇವೆ ಎಂದು 100ಶೇ. ದೃಢಪಡಿಸುತ್ತೇನೆ’ ಎಂದಿದ್ದಾರೆ.
ಈ ಸುದ್ದಿಯನ್ನು ತಾಲಿಬಾನ್ ನ ಅಧಿಕೃತ ವೆಬ್ಸೈಟ್, ನೂತನ ಸರಕಾರದ ರಾಜಕೀಯ ಕಚೇರಿಯ ವೆಬ್ಸೈಟ್ ನಲ್ಲಿ ಪೋಸ್ಟ್ ಮಾಡಲಾಗಿತ್ತು.