ರಾಜ್ಯಸಭಾ ಉಪ ಚುನಾವಣೆ: ಸೋನೊವಾಲ್, ಮುರುಗನ್ ಅವರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದ ಬಿಜೆಪಿ
ಸರ್ಬಾನಂದ ಸೋನೊವಾಲ್
ಹೊಸದಿಲ್ಲಿ: ಬಿಜೆಪಿ ಶನಿವಾರ ಕೇಂದ್ರ ಸಚಿವರಾದ ಸರ್ಬಾನಂದ ಸೋನೊವಾಲ್ ಹಾಗೂ ಎಲ್. ಮುರುಗನ್ ಅವರನ್ನು ರಾಜ್ಯಸಭಾ ಉಪಚುನಾವಣೆಗೆ ಕ್ರಮವಾಗಿ ಅಸ್ಸಾಂ ಹಾಗೂ ಮಧ್ಯಪ್ರದೇಶದಿಂದ ನಾಮನಿರ್ದೇಶನ ಮಾಡಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜುಲೈ 7 ರ ಸಂಪುಟ ವಿಸ್ತರಣೆಯಲ್ಲಿ ಇಬ್ಬರೂ ಸಚಿವರನ್ನು ಕೇಂದ್ರ ಮಂತ್ರಿ ಮಂಡಳಿಗೆ ಸೇರಿಸಿಕೊಂಡಿದ್ದರು.
ಚುನಾವಣಾ ಆಯೋಗವು ಪಶ್ಚಿಮ ಬಂಗಾಳ, ಅಸ್ಸಾಂ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಲ್ಲಿ ತಲಾ 1 ಹಾಗೂ ತಮಿಳುನಾಡಿನಲ್ಲಿ ಎರಡು ಸ್ಥಾನಕ್ಕೆ ಅಕ್ಟೋಬರ್ 4 ರಂದು ಉಪಚುನಾವಣೆ ಘೋಷಿಸಿತು.
ಮಾನಸ್ ರಂಜನ್ ಭುನಿಯಾ (ಪಶ್ಚಿಮ ಬಂಗಾಳ), ಬಿಸ್ವಜಿತ್ ಡೈಮರಿ (ಅಸ್ಸಾಂ), ಕೆ.ಪಿ. ಮುನುಸ್ವಾಮಿ ಹಾಗೂ ಆರ್. ವೈತಿಲಿಂಗಂ (ತಮಿಳುನಾಡು) ಮತ್ತು ತಾವರ್ಚಂದ್ ಗೆಹ್ಲೋಟ್ (ಮಧ್ಯಪ್ರದೇಶ) ರಾಜೀನಾಮೆ ನೀಡಿದ ನಂತರ ಈ ಸ್ಥಾನಗಳು ತೆರವಾಗಿವೆ.
ಮಹಾರಾಷ್ಟ್ರದಲ್ಲಿ ಕೋವಿಡ್ ನಿಂದಾಗಿ ಕಾಂಗ್ರೆಸ್ ನಾಯಕ ರಾಜೀವ್ ಸತಾವ್ ನಿಧನರಾದ ನಂತರ ಒಂದು ಸ್ಥಾನವು ಖಾಲಿಯಾಗಿತ್ತು.
Next Story