ಬೆಂಗಳೂರು: ನಿವೇಶನ ಹೆಸರಿನಲ್ಲಿ ನಿವೃತ್ತ ಎಸಿಪಿ ಅಧಿಕಾರಿಗೆ ವಂಚನೆ
ನಿವೃತ್ತ ಎಸಿಪಿ ಲವಕುಮಾರ್ / ಲಕ್ಷ್ಮಿನಾರಾಯಣ್
ಬೆಂಗಳೂರು, ಸೆ.18: ನಿವೇಶನವೊಂದನ್ನು ಮಾರಾಟ ಮಾಡಿಸಿಕೊಡುವುದಾಗಿ ನಂಬಿಸಿ ಪೊಲೀಸ್ ಇಲಾಖೆಯ ನಿವೃತ್ತ ಎಸಿಪಿ ಒಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ನಿರ್ಮಾಣ್ ಶೆಲ್ಟರ್ಸ್ ಕಂಪೆನಿ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಇಲಾಖೆಯ ನಿವೃತ್ತ ಎಸಿಪಿ ಲವಕುಮಾರ್ ಅವರಿಗೆ ವಂಚನೆ ಮಾಡಿದ್ದು, ಈ ಸಂಬಂಧ ನಿರ್ಮಾಣ್ ಶೆಲ್ಟರ್ಸ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮೀನಾರಾಯಣ್, ಕಂಪೆನಿ ಸಿಬ್ಬಂದಿ ಶಶಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇಲ್ಲಿನ ಜಿಗಣಿಯ ನವ್ಯ ಲೇಔಟ್ನಲ್ಲಿ 90 ಲಕ್ಷ ಮೌಲ್ಯದ ಮೂರು ನಿವೇಶನ ಹೊಂದಿರುವ ನಿವೃತ್ತ ಎಸಿಪಿ ಅವರು, ಕೆಲ ದಿನಗಳ ಹಿಂದೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ನಿರ್ಮಾಣ್ ಶೆಲ್ಟರ್ಸ್ ಕಂಪೆನಿ ಸಂಪರ್ಕಿಸಿ ತಮ್ಮ ಬಳಿಯ ನಿವೇಶನಗಳನ್ನು ಮಾರಾಟ ಮಾಡಿಕೊಡುವಂತೆ ಕೋರಿದ್ದರು ಎನ್ನಲಾಗಿದೆ. ಅದರಂತೆ ದಾಖಲಾತಿ ನೀಡಿದ್ದರು. ಆದರೆ, ಕಂಪೆನಿಯೂ ಮೂರು ನಿವೇಶನ ಮಾರಾಟ ಮಾಡಿ ಕೇವಲ 30 ಲಕ್ಷ ಹಣ ನೀಡಿ ಉಳಿದ ಹಣ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ನಿವೃತ್ತ ಎಸಿಪಿ ಉಲ್ಲೇಖಿಸಿದ್ದಾರೆ.
ಕ್ರಮಕ್ಕೆ ಆಗ್ರಹ: ನಿವೇಶನ ಮಾರಾಟ ನೆಪದಲ್ಲಿ ಆರೋಪಿಗಳು ಉದ್ದೇಶಪೂರ್ವಕವಾಗಿಯೇ ವಂಚನೆಗೈದಿದ್ದು, ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳುವಂತೆ ಲವಕುಮಾರ್ ಆಗ್ರಹಿಸಿದ್ದಾರೆ.