ತುಳು ಅಕಾಡಮಿಯ ಚಾವಡಿ ಪ್ರಶಸ್ತಿ ಪ್ರಕಟ
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯು ಚಾವಡಿ ಪ್ರಶಸ್ತಿಗೆ ವಿವಿಧ ಕ್ಷೇತ್ರದ ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಯಕ್ಷಗಾನ ಹಾಗೂ ನಾಟಕ ರಂಗದ ಪ್ರಸಾದನ ಕಲಾವಿದರಾಗಿರುವ ಕೇಶವ ಕುಡ್ಲ ಈ ಬಾರಿಯ ತಿಂಗಳ ಚಾವಡಿ ಪ್ರಶಸ್ತಿಗೆ (ಚಾವಡಿ ತಮ್ಮನ) ಆಯ್ಕೆಯಾಗಿದ್ದಾರೆ.
ತುಳು ಭಾಷಾ ಪ್ರವೀಣರಾಗಿ, ವಾಗ್ಮಿಯಾಗಿ, ತುಳು ಸಾಹಿತ್ಯ ಕೃಷಿಯಲ್ಲೂ ತೊಡಗಿಸಿಕೊಂಡಿರುವ ಮತ್ತು ಡಾಕ್ಟರೇಟ್ ಪದವಿ ಪಡೆದಿರುವ ಅರುಣ್ ಉಳ್ಳಾಲ್ ಅವರನ್ನು ಯುವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಎಳೆಯ ವಯಸ್ಸಿನಲ್ಲಿಯೇ ತುಳು ಭಾಷೆಯ ಮೇಲಿನ ನಿರಂತರ ವಾಕ್ಚಾತುರ್ಯದಿಂದ ಪ್ರಸಿದ್ಧರಾದ ಮಾಧ್ಯಮ ಸಹಿತ, ಕಾರ್ಯಕ್ರಮ ನಿರೂಪಣಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ತೀರ್ಥ ಪೊಳಲಿ ಅವರನ್ನು ಬಾಲ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಹಲವು ವರ್ಷದಿಂದ ಪತ್ರಿಕಾ ರಂಗದಲ್ಲಿ ತೊಡಗಿಸಿಕೊಂಡು ಪತ್ರಕರ್ತರಾಗಿ, ನಿರೂಪಕರಾಗಿ, ಸಾಂಸ್ಕೃತಿಕ ಕಾರ್ಯಕ್ರಮದ ಸಂಘಟಕರಾಗಿ, ರಾಣಿ ಅಬ್ಬಕ್ಕನ ಹೆಸರಿನಲ್ಲಿ ಗ್ರಾಮೀಣ ಭಾಗದಲ್ಲಿ ದೃಶ್ಯ ಮಾಧ್ಯಮವನ್ನು ಸ್ಥಾಪಿಸಿರುವ ಶಶಿಧರ ಪೊಯ್ಯತ್ತಬೈಲ್ ಅವರನ್ನು ಮಾಧ್ಯಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬೆಳ್ಳಿಹಬ್ಬದ ಹೊಸ್ತಿಲಲ್ಲಿರುವ ಮಂಗಳೂರಿನ ಶಕ್ತಿನಗರದಲ್ಲಿ ಸ್ಥಾಪನೆಗೊಂಡ ತುಳು ಕೂಟ (ರಿ)ಕ್ಕೆ ಸಂಘಟನಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.