ಕಿನ್ನಿಗೋಳಿ: ಕೊಸೆಸಾಂವ್ ಅಮ್ಮನವರ ಚರ್ಚ್ ಧರ್ಮಗುರು ರೆ.ಫಾ.ಮ್ಯಾಥ್ಯೂ ವಾಸ್ ನಿಧನ
ಕಿನ್ನಿಗೋಳಿ: ಇಲ್ಲಿನ ಕೊಸೆಸಾಂವ್ ಅಮ್ಮನವರ ಚರ್ಚ್ ಧರ್ಮಗುರು ರೆವರೆಂಡ್ ಫಾದರ್ ಮ್ಯಾಥ್ಯೂ ವಾಸ್ (62) ಶುಕ್ರವಾರ ಮುಂಜಾವ 4 ಗಂಟೆ ವೇಳೆಗೆ ನಿಧನರಾಗಿದ್ದಾರೆ. ಹೃದಯಾಘಾತಕ್ಕೊಳಗಾಗಿ ಅವರು ಕೊನೆಯುಸಿರೆಳೆದಿರುವುದಾಗಿ ಚರ್ಚ್ ಆಡಳಿತ ಸಮಿತಿ ತಿಳಿಸಿದೆ.
ಕಳೆದ ಮೂರು ವರ್ಷಗಳಿಂದ ಅವರು ಕೊಸೆಸಾಂವ್ ಅಮ್ಮನವರ ಚರ್ಚ್ ನಲ್ಲಿ ಧರ್ಮ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದರು.
ಮೂಲತಃ ಮೂಡುಬಿದಿರೆಯ ಸಿದ್ಧಕಟ್ಟೆಯವರಾದ ರೆ.ಫಾ. ಮ್ಯಾಥ್ಯೂ ವಾಸ್ 1987ರಲ್ಲಿ ಧರ್ಮ ಗುರು ದೀಕ್ಷೆ ಪಡೆದು ಕಿನ್ನಿಗೋಳಿ ಚರ್ಚ್ ನಲ್ಲಿಯೇ ಸಹಾಯಕ ಧರ್ಮ ಗುರುಗಳಾಗಿ ಸೇವೆ ಆರಂಭಿಸಿದ್ದರು. ಬಳಿಕ ಕುಲಶೇಖರದಲ್ಲಿ ಸಹಾಯಕ ಧರ್ಮ ಗುರುಗಳಾಗಿ, ನಂತರ ಬೇಳ, ಉಡುಪಿ, ಮಂಗಳೂರಿನ ಚರ್ಚ್ ಗಳಲ್ಲಿ ಧರ್ಮ ಗುರುಗಳಾಗಿ ಸೇವೆ ಸಲ್ಲಿಸಿದ್ದರು.
ರೆ.ಫಾ. ಮ್ಯಾಥ್ಯೂ ವಾಸ್ 1994 ನಲ್ಲಿ ತೆರೆಕಂಡ ಏಸುಕ್ರಿಸ್ತನ ಜೀವನಾಧಾರಿತ 'ಭುವನ ಜ್ಯೋತಿ' ಸಿನೆಮಾವನ್ನು ನಿರ್ಮಿಸಿದ್ದರು. ಉಡುಪಿಯ ಕನ್ನರ್ಪಾಡಿ ಸೇಂಟ್ ಮೇರಿಸ್ ಶಾಲೆ ಅಭಿವೃದ್ಧಿಯಲ್ಲಿ ಮುಂಚೂಣಿಯ ಪಾತ್ರ ವಹಿಸಿದ್ದರು. ಹಾಗೂ ಯುವ ಸಮುದಾಯದ ಚಟುವಟಿಕೆಗೆ ಸದಾ ಸ್ಫೂರ್ತಿ ತುಂಬುತ್ತಿದ್ದ ಅವರು, ಪ್ರಸಕ್ತ ಮಂಗಳೂರು ಕೆಥೊಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕರೂ ಆಗಿದ್ದರು.
ಮೃತರ ಅಂತ್ಯ ಸಂಸ್ಕಾರವು ಶನಿವಾರ (ಅ.23) ಬೆಳಗ್ಗೆ ನೆರವೇರಲಿದೆ ಎಂದು ಚರ್ಚ್ ಆಡಳಿತ ಸಮಿತಿ ತಿಳಿಸಿದೆ.