ಶ್ರೀನಗರ: ಬುಲೆಟ್ ಪ್ರೂಫ್ ಗ್ಲಾಸ್ ಶೀಲ್ಡ್ ತೆಗೆದು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ
ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಶ್ರೀನಗರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ಮೊದಲು ಬುಲೆಟ್ ಪ್ರೂಫ್ ಗ್ಲಾಸ್ ಶೀಲ್ಡ್ ತೆಗೆದರು. ತಾನು ಜನರೊಂದಿಗೆ ನೇರವಾಗಿ ಮಾತನಾಡಲು ಬಯಸಿದ್ದೇನೆ ಎಂದು ಹೇಳಿದರು.
ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೆ ಶೇರ್-ಇ-ಕಾಶ್ಮೀರ ಕನ್ವೆನ್ಶನ್ ಸೆಂಟರ್ನಲ್ಲಿ ವೇದಿಕೆಯ ಮೇಲೆ ನಡೆದುಕೊಂಡು ಹೋಗುತ್ತಿರುವ ವಿಡಿಯೋಗಳಲ್ಲಿ ಬುಲೆಟ್ ಪ್ರೂಫ್ ಶೀಲ್ಡ್ ಅನ್ನು ತೆಗೆಯುವಂತೆ ಆದೇಶಿಸಿದರು. ಲೆಫ್ಟಿನೆಂಟ್ ಗವರ್ನರ್ ಅವರ ಮೇಲ್ವಿಚಾರಣೆಯಲ್ಲಿ ಭದ್ರತಾ ಸಿಬ್ಬಂದಿ ಗಾಜಿನ ಹೊದಿಕೆಯನ್ನು ಕಿತ್ತುಹಾಕಿದರು. ನಂತರ ಗೃಹ ಸಚಿವರು ಈ ವಿಚಾರವನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
"ನನ್ನನ್ನು ನಿಂದಿಸಲಾಯಿತು, ಖಂಡಿಸಲಾಯಿತು... ಇಂದು ನಾನು ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡಲು ಬಯಸುತ್ತೇನೆ. ಅದಕ್ಕಾಗಿಯೇ ಇಲ್ಲಿ ಬುಲೆಟ್ ಪ್ರೂಫ್ ಶೀಲ್ಡ್ ಅಥವಾ ಭದ್ರತೆ ಇಲ್ಲ. ನಾನು ನಿಮ್ಮ ಮುಂದೆ ಹೀಗೆ ನಿಂತಿದ್ದೇನೆ" ಎಂದು ಅಮಿತ್ ಶಾ ಹೇಳಿದರು..
"ಫಾರೂಕ್ (ಅಬ್ದುಲ್ಲಾ) ಅವರು ನಾವು ಪಾಕಿಸ್ತಾನದ ಜೊತೆ ಮಾತನಾಡಬೇಕು ಎಂದು ಸಲಹೆ ನೀಡಿದರು. ನಾನು ಯುವಕರು ಮತ್ತು ಕಣಿವೆಯ ಜನರೊಂದಿಗೆ ಮಾತನಾಡುತ್ತೇನೆ" ಎಂದು ಅವರಿಗೆ ಸ್ಪಷ್ಟಪಡಿಸಿದೆ ಎಂದರು.