ಕೇಂದ್ರ ಸರಕಾರದ ನೀತಿ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ: ಕೆ.ಶಂಕರ್
ಕುಂದಾಪುರ: ಸಿಪಿಐ(ಎಂ) 3ನೇ ವಲಯ ಸಮ್ಮೇಳನ ಉದ್ಘಾಟನೆ
ಕುಂದಾಪುರ, ಅ.25: ಕೇಂದ್ರ ಸರಕಾರವು ಬಲಪಂಥೀಯ ಆರೆಎಸ್ಸೆಸ್ ಪ್ರೇರಿತ ತಪ್ಪು ಆರ್ಥಿಕ ನೀತಿಗಳನ್ನು ಶರವೇಗದಲ್ಲಿ ಜಾರಿ ಮಾಡುತ್ತಿರುವುದರಿಂದ ಬೆಲೆ ಏರಿಕೆ ಜನಸಾಮಾನ್ಯರ ಬದುಕಿನ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಸಿಪಿಎಂ ಪಕ್ಷದ ರಾಜ್ಯ ಮುಖಂಡ ಕೆ.ಶಂಕರ್ ಹೇಳಿದ್ದಾರೆ.
ಕುಂದಾಪುರದ ಹಂಚು ಕಾರ್ಮಿಕರ ಭವನದಲ್ಲಿ ಕಾಮ್ರೇಡ್ ಗೋವಿಂದ ಶೆಟ್ಟಿಗಾರ್ ವೇದಿಕೆಯಲ್ಲಿ ನಡೆದ 3ನೇ ವಲಯ ಸಮ್ಮೇಳನ ಉಧ್ಘಾಟಿಸಿ ಅವರು ಮಾತನಾಡುತಿದ್ದರು.
ದೇಶದ ಎಲ್ಲಾ ಸಂಪತ್ತುಗಳನ್ನು ಇಂದು ಖಾಸಗೀಕರಣದ ಮೂಲಕ ಈ ದೇಶದ ಸಂಘಪರಿವಾರದ ಕೆಲವೇ ಬೆಂಬಲಿಗರಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಕೆಲವೇ ಜನರಿಗೆ ನೆಮ್ಮದಿ ಬಹುಸಂಖ್ಯಾತರು ಸಂಕಷ್ಟ ಪಡುವ ಪರಿಸ್ಥಿತಿ ಇದೆ. ಇದರ ವಿರುದ್ಧ ಹೋರಾಟ ಮಾಡುತ್ತಿರುವವರ ಮೇಲೆ ದೇಶದ್ರೋಹದ ಆಪಾದನೆ ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಮುಖಂಡರಾದ ಸುರೇಶ್ ಕಲ್ಲಾಗರ, ವೆಂಕಟೇಶ ಕೋಣಿ ಮಾತನಾಡಿದರು. ಡಾ.ಜಿ.ಭಾಸ್ಕರ ಮಯ್ಯ ಸಭಾಂಗಣದಲ್ಲಿ ಪಕ್ಷದ ಹಿರಿಯ ಮುಖಂಡರಾದ ದಾಸಭಂಡಾರಿ ಪಕ್ಷದ ಧ್ವಜಾರೋಹಣ ನೆರವೇರಿಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪಕ್ಷದ ಮುಖಂಡರಾದ ವಿ.ನರಸಿಂಹ ವಹಿಸಿ ಮಾತನಾಡಿದರು. ಶಿರಿಯಾರ ಮುದ್ದಣ್ಣ ಶೆಟ್ಟಿ ಸಮ್ಮೇಳನಕ್ಕೆ ಶುಭ ಕೋರಿ ಮಾತನಾಡಿದರು.
ಅಧ್ಯಕ್ಷೀಯ ಮಂಡಳಿಯನ್ನು ಮಹಾಬಲ ವಡೇರ ಹೋಬಳಿ, ಬಲ್ಕೀಸ್ ನಡೆಸಿಕೊಟ್ಟರು. ಶ್ರದ್ದಾಂಜಲಿ ಠರಾವನ್ನು ರವಿ ವಿ.ಎಂ ಮಂಡಿಸಿದರು. ಪಕ್ಷದ ವಲಯ ಕಾರ್ಯದರ್ಶಿ ಎಚ್ ನರಸಿಂಹ ಅವರು ಮೂರು ವರ್ಷಗಳ ಸಂಘಟನ ವರದಿ ಮಂಡಿಸಿದರು. ಚರ್ಚೆಯ ಬಳಿಕ ವರದಿಯನ್ನು ಅಂಗೀಕರಿಸಲಾಯಿತು.
ನಿರ್ಣಯ: ಸಮ್ಮೇಳನವು ಹಲವಾರು ನಿರ್ಣಯ ಕೈಗೊಂಡಿತು.ರೈತ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ, ಬೆಲೆ ಏರಿಕೆ ವಿರುದ್ಧ, ಬಾಂಗ್ಲದೇಶದ ಅಲ್ಪಸಂಖ್ಯಾಕ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ, ಕರಾವಳಿ ನಿಯಂತ್ರಣ ವಲಯ ಕಠಿಣ ನಿಯಾಮವಳಿ ಸಡಿಲಗೊಳಿಸಲು, ಕುಂದಾಪುರ ಬೊಬ್ಬರ್ಯನ ಕಟ್ಟೆ ಬಳಿ ರಸ್ತೆ ದಾಟಲು ಅವಕಾಶಕ್ಕಾಗಿ, ಪುರಸಭಾ ವ್ಯಾಪ್ತಿಯ ರಸ್ತೆ ದುರಸ್ತಿ, ರಿಂಗ್ರೋಡ್ ಕಾಮಗಾರಿ ಇತ್ಯಾದಿ ಬೇಡಿಕೆಗಳಿಗಾಗಿ ಸಮ್ಮೇಳನ ನಿರ್ಣಯ ಕೈಗೊಂಡಿತು.
ಸಮ್ಮೇಳನ ಹೊಸ ವಲಯ ಸಮಿತಿ ಆಯ್ಕೆ ಮಾಡಿತು. ವಲಯದ ನೂತನ ಕಾರ್ಯದರ್ಶಿಯಾಗಿ ಎಚ್ ನರಸಿಂಹ ಆಯ್ಕೆಯಾ ದರು. ನ.28-29 ರಂದು ನಡೆಯುವ ಜಿಲ್ಲಾ ಸಮ್ಮೇಳನಕ್ಕೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.