ಕಾಶ್ಮೀರಿಗಳ ಜೊತೆಗೆ ಮಾತುಕತೆ: ಎಲ್ಲಿ? ಹೇಗೆ? ಯಾರ ಜೊತೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
370ನೇ ವಿಧಿ ರದ್ದಾದ ಸುಮಾರು 2 ವರ್ಷಗಳ ಬಳಿಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಶ್ಮೀರಕ್ಕೆ ಮೊದಲ ಭೇಟಿಯನ್ನು ನೀಡಿದ್ದಾರೆ. 370 ನೇ ವಿಧಿಯನ್ನು ರದ್ದು ಮಾಡುವ ಮೂಲಕ, ಕಾಶ್ಮೀರವನ್ನು ಅಧಿಕೃತವಾಗಿ ಭಾರತಕ್ಕೆ ಸೇರಿಸಿಕೊಂಡಿದ್ದೇವೆ ಎಂದು ಅಮಿತ್ ಶಾ ಈ ಹಿಂದೆ ಹೇಳಿಕೆ ನೀಡಿದ್ದರು. ‘ಕಾಶ್ಮೀರದ ನಿಜವಾದ ಅಭಿವೃದ್ಧಿ ಇನ್ನು ಆರಂಭವಾಗುತ್ತದೆ’ ಎಂದೂ ಅವರು ಭರವಸೆ ನೀಡಿದ್ದರು. ಬಹುಶಃ ಕಾಶ್ಮೀರದ ಅಭಿವೃದ್ಧಿಯನ್ನು ಕಣ್ಣಾರೆ ಕಾಣುವುದಕ್ಕಾಗಿ ಅಮಿತ್ ಶಾ ಈ ಭೇಟಿ ನೀಡಿರಬಹುದು. ಆದರೆ ಕಳೆದ ಎರಡು ವರ್ಷಗಳಿಂದ ಕಾಶ್ಮೀರ ಬೂದಿ ಮುಚ್ಚಿದ ಕೆಂಡದಂತಿದೆ. ಇಂದಿಗೂ ಅದು ಮಿಲಿಟರಿಯ ನೆರಳಲ್ಲೇ ಬದುಕುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಬಂಧಿತ ನಾಗರಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆಯೇ ಹೊರತು, ಇನ್ನಾವುದೇ ಅಭಿವೃದ್ಧಿ ನಡೆದಿಲ್ಲ. ಅಮಿತ್ ಶಾ ಅವರು ಆಗಮಿಸುತ್ತಿದ್ದಾರೆ ಎನ್ನುವ ಒಂದೇ ಕಾರಣಕ್ಕಾಗಿ ಕೇವಲ ಎರಡು ದಿನಗಳಲ್ಲಿ ನೂರಾರು ನಾಗರಿಕರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸಲಾಗಿದೆ.
ಅಮಿತ್ ಶಾ ಅವರ ಭೇಟಿಯ ಮುಖ್ಯ ಉದ್ದೇಶ ಅಲ್ಲಿರುವ ಸೈನಿಕರಲ್ಲಿ ಆತ್ಮವಿಶ್ವಾಸ ತುಂಬುವುದಾಗಿತ್ತೇ ಹೊರತು, ನಾಗರಿಕರಲ್ಲಲ್ಲ. ಇತ್ತೀಚೆಗೆ ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ, ನಾಗರಿಕರ ಹತ್ಯೆ, ಬೆಳೆಯುತ್ತಿರುವ ಉಗ್ರ ವಾದ ಇವೆಲ್ಲದರಿಂದ ಗೃಹಸಚಿವರು ತಳಮಳಗೊಂಡಿದ್ದಾರೆ. ಅತ್ತ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಗಟ್ಟಿಯಾಗಿ ಬೇರೂರುತ್ತಿರುವುದು, ಲಡಾಖ್ನಲ್ಲಿ ಚೀನಾದ ಸೇನೆ ಭಾರತದ ಭೂಮಿಯನ್ನು ಆಕ್ರಮಿಸಿರುವುದು, ತಾಲಿಬಾನ್ಗಳ ಜೊತೆಗೆ ಪಾಕಿಸ್ತಾನ ಕೈ ಜೋಡಿಸಿರುವುದೆಲ್ಲ ಕಾಶ್ಮೀರದ ಭವಿಷ್ಯವನ್ನು ಇನ್ನಷ್ಟು ಚಿಂತಾಜನಕವಾಗಿಸಿದೆ. ಇಂತಹ ಹೊತ್ತಿನಲ್ಲಿ ಅಮಿತ್ ಶಾ ಅವರ ಭೇಟಿ ಸೇನೆಯ ಪಾಲಿಗೆ ಅತ್ಯಗತ್ಯವಾಗಿತ್ತು. ಕಾಶ್ಮೀರದ ಮುಂದಿನ ದಿನಗಳ ಕುರಿತ ಚಿತ್ರಣವಾದರೂ ಅಮಿತ್ ಶಾ ಭೇಟಿಯಿಂದ ಸಿಕ್ಕಬಹುದು ಎಂದು ದೇಶ ಭಾವಿಸಿತ್ತು. ಆದರೆ, ಅಮಿತ್ ಶಾ ಅವರು ‘ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿದೆ’ ಎನ್ನುವುದನ್ನು ದೇಶಕ್ಕೆ ಮನವರಿಕೆ ಮಾಡಿಸುವ ಪ್ರಯತ್ನ ನಡೆಸುತ್ತಿದ್ದಾರೆಯೇ ಹೊರತು, ಕಾಶ್ಮೀರದಲ್ಲಿ ಎಲ್ಲವನ್ನೂ ಸರಿಪಡಿಸುವ ಬಗ್ಗೆ ಅವರಲ್ಲಿ ಯಾವುದೇ ಯೋಜನೆಗಳೂ ಇದ್ದಂತಿಲ್ಲ.
‘ಮಾತುಕತೆ ಪಾಕಿಸ್ತಾನದ ಜೊತೆಗಲ್ಲ, ಕಾಶ್ಮೀರಿಗಳ ಜೊತೆಗೆ’ ಎಂದು ಅಮಿತ್ ಶಾ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ‘ಭಾರತ ಸರಕಾರ ಪಾಕಿಸ್ತಾನದ ಜೊತೆಗೆ ಮಾತುಕತೆ ಮುಂದುವರಿಸಬೇಕು’ ಎಂಬ ಫಾರೂಕ್ ಅಬ್ದುಲ್ಲಾ ಅವರ ಆಗ್ರಹಕ್ಕೆ ಶಾ ಈ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಅಮಿತ್ ಶಾ ಪ್ರತಿಕ್ರಿಯೆ ಸಮರ್ಥನೀಯವಾದುದೇ ಆಗಿದೆ. ಕಾಶ್ಮೀರಿಗಳ ಜೊತೆಗೆ ಸಂವಹನ ಸಾಧ್ಯವಾಗದೇ, ಪಾಕಿಸ್ತಾನದೊಂದಿಗಿನ ಮಾತುಕತೆಯಿಂದ ಕಾಶ್ಮೀರವನ್ನು ನಮ್ಮದಾಗಿಸಲು ಸಾಧ್ಯವಿಲ್ಲ. ಹಾಗೆಂದು, ಅಮಿತ್ ಶಾ ಅವರು ಕಾಶ್ಮೀರಿಗಳ ಜೊತೆಗೆ ಮಾತುಕತೆಯನ್ನು ಹೇಗೆ , ಯಾರೊಂದಿಗೆ ನಡೆಸುತ್ತಾರೆ ಎನ್ನುವುದು ಬಹುಮುಖ್ಯ ಪ್ರಶ್ನೆಯಾಗಿದೆ. ಒಂದೆಡೆ ಕಾಶ್ಮೀರಿಗಳು ತಮಗೆ ಭಾರತದಿಂದ ವಂಚನೆಯಾಗಿದೆ ಎಂಬ ಮನಸ್ಥಿತಿಯನ್ನು ಹೊಂದಿದ್ದಾರೆ. ಸೇನೆಯ ಬಲದಿಂದ ಕಾಶ್ಮೀರವನ್ನು ಭಾರತ ನಿಯಂತ್ರಣದಲ್ಲಿಟ್ಟಿದೆಯೇ ಹೊರತು, ಪ್ರಜಾಸತ್ತಾತ್ಮಕವಾದ ವ್ಯವಸ್ಥೆಯ ಮೂಲಕವಲ್ಲ. ಕಾಶ್ಮೀರಿಗಳ ಜೊತೆಗೆ ಮಾತುಕತೆ ನಡೆಯಬೇಕಾದರೆ, ಅವರ ಬೇಡಿಕೆಗಳನ್ನ್ನು ಸರಕಾರ ಮೊದಲು ಆಲಿಸಬೇಕು. ಕಾಶ್ಮೀರದ ಕುರಿತ ಭಾರತದ ನಿರ್ಧಾರಗಳಿಂದ, ಮೊದಲು ಸಂಭ್ರಮಿಸಬೇಕಾದುದು ಕಾಶ್ಮೀರವೇ ಹೊರತು, ಕಾಶ್ಮೀರೇತರ ಭಾರತೀಯರಲ್ಲ.
ಇಂದು ಕಾಶ್ಮೀರೇತರ ಭಾರತೀಯರನ್ನು ಸಂತೃಪ್ತಿಗೊಳಿಸುವುದಕ್ಕಾಗಿಯೇ, ಕಾಶ್ಮೀರದಲ್ಲಿ ಭಾರತ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇದರಿಂದ ಕಾಶ್ಮೀರ ಭಾರತದ ಪಾಲಿಗೆ ಇನ್ನಷ್ಟು ಜಟಿಲವಾಗುತ್ತಿದೆ. ಆದುದರಿಂದ, ಮೊದಲು ಕಾಶ್ಮೀರಿಗಳು ಭಾರತವನ್ನು ನಂಬುವ ಸ್ಥಿತಿ ನಿರ್ಮಾಣವಾಗಬೇಕು. ಆಗ ಮಾತ್ರ, ಅವರ ಜೊತೆಗೆ ಮಾತುಕತೆಯ ದಾರಿಯೊಂದು ತೆರೆದುಕೊಳ್ಳುತ್ತದೆ. ಕಾಶ್ಮೀರಿಗಳ ಜೊತೆಗೆ ಮಾತುಕತೆ ನಡೆಸುವುದು ಎಂದರೆ ಏನು? ಹೇಗೆ? ಮೈದಾನವೊಂದರಲ್ಲಿ ಕಾಶ್ಮೀರಿಗಳನ್ನು ಸೇರಿಸಿ, ಅವರ ಜೊತೆಗೆ ನೇರ ಮಾತುಕತೆ ನಡೆಸುವುದಂತೂ ಸಾಧ್ಯವಿಲ್ಲ. ಕಾಶ್ಮೀರಿಗಳು ಪ್ರಜಾಸತ್ತಾತ್ಮಕವಾಗಿ ಆರಿಸಿದ ಅವರ ನಾಯಕರ ಜೊತೆಗೆ ಅಧಿಕೃತವಾಗಿ ಮಾತುಕತೆ ನಡೆಸಬೇಕಾಗುತ್ತದೆ. ಅಂದರೆ ಮೊದಲು ಅಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆ ಅಸ್ತಿತ್ವಕ್ಕೆ ಬರಬೇಕು. ಜನರು ಚುನಾಯಿಸಿದ ಪ್ರತಿನಿಧಿಗಳನ್ನು ಗೃಹ ಬಂಧನದಿಂದ ಮುಕ್ತಗೊಳಿಸಿ, ಅವರ ಮಾತುಗಳನ್ನು ಆಲಿಸಬೇಕು. ಯಾಕೆಂದರೆ ಅವರೇ ಕಾಶ್ಮೀರಿಗಳ ನಿಜವಾದ ಧ್ವನಿ. ಕಾಶ್ಮೀರದಲ್ಲಿ ಅತ್ಯಂತ ಮಹತ್ವದ ರಾಜಕೀಯ ನಿರ್ಧಾರವನ್ನು ತೆಗೆದುಕೊಳ್ಳುವಾಗ ಸರಕಾರ ಕಾಶ್ಮೀರಿಗಳನ್ನು, ಅವರ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎನ್ನುವುದು ಈ ನಿಟ್ಟಿನಲ್ಲಿ ಬಹುದೊಡ್ಡ ಪ್ರಮಾದವಾಗಿದೆ.
ಇಂದು ಕಾಶ್ಮೀರಿಗಳ ಜೊತೆಗೆ ಮಾತುಕತೆಯನ್ನು ನಡೆಸುವುದು ಈ ಕಾರಣದಿಂದ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಕಾಶ್ಮೀರಿಗಳ ಪರವಾಗಿ, ಸೇನೆಯ ಜೊತೆಗೆ ಮಾತುಕತೆ ನಡೆಸಲು ಸರಕಾರ ಮುಂದಾಗಿದೆಯೇ? ಹೀಗಿರುವಾಗ, ‘ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸುವುದಿಲ್ಲ, ಕಾಶ್ಮೀರಿಗಳ ಜೊತೆಗೆ ಮಾತುಕತೆ ನಡೆಸುತ್ತೇನೆ’ ಎನ್ನುವ ಅಮಿತ್ ಶಾ ಪ್ರತಿಕ್ರಿಯೆ ನಿಜವಾಗುವ ದಾರಿ ತುಂಬಾ ದೂರವಿದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸದೇ ಕಾಶ್ಮೀರದ ವಿವಾದವನ್ನು ಪೂರ್ಣವಾಗಿ ಇತ್ಯರ್ಥಗೊಳಿಸಲು ಸಾಧ್ಯವಿಲ್ಲ ಎನ್ನುವುದು ಭಾರತಕ್ಕೆ ಗೊತ್ತಿಲ್ಲದ ವಿಷಯವೇನೂ ಅಲ್ಲ. ಪಾಕ್ ಆಕ್ರಮಿತ ಕಾಶ್ಮೀರವೂ ಭಾರತದ ಸಮಸ್ಯೆಯ ಒಂದು ಭಾಗವೇ ಆಗಿದೆ. ಇದೇ ಸಂದರ್ಭದಲ್ಲಿ, ಕಾಶ್ಮೀರವನ್ನು ಭಾರತ ನಡೆಸಿಕೊಳ್ಳುತ್ತಿರುವ ರೀತಿಯ ಸರ್ವ ಲಾಭಗಳನ್ನು ಪಾಕಿಸ್ತಾನ ತನ್ನದಾಗಿಸಿಕೊಳ್ಳುವ ಸಾಧ್ಯತೆಗಳಿವೆ.
ಅಫ್ಘಾನಿಸ್ತಾನ, ಪಾಕಿಸ್ತಾನ, ಚೀನಾ ಈ ಮೂರು ದೇಶಗಳಿಂದ ಕಾಶ್ಮೀರ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ಭಾರತವು ಪಾಕಿಸ್ತಾನದ ಜೊತೆಗೆ ಮಾತುಕತೆಯನ್ನು ನಿಲ್ಲಿಸುವುದರಿಂದ ಶಾಶ್ವತ ತಡೆಗೋಡೆಯೊಂದು ಕಾಶ್ಮೀರದ ವಿಷಯದಲ್ಲಿ ಉಭಯ ದೇಶಗಳ ನಡುವೆ ಏಳುತ್ತದೆ. ಆದುದರಿಂದ, ಸದ್ಯಕ್ಕೆ ಮಾತುಕತೆ ಮುಂದುವರಿಸುವುದೇ ಮುತ್ಸದ್ದಿತನ. ಈ ನಿಟ್ಟಿನಲ್ಲಿ ಕಾಶ್ಮೀರದ ಹಿರಿಯ ನಾಯಕರ ಸಲಹೆ, ಸೂಚನೆಗಳ ಜೊತೆಗೇ ಮುಂದಕ್ಕೆ ಹೆಜ್ಜೆಯಿಡಬೇಕು. ಕಾಶ್ಮೀರ ಏನಾಗಬೇಕು ಎನ್ನುವುದನ್ನು ಕಾಶ್ಮೀರದಲ್ಲಿರುವ ನಾಯಕರು ನಿರ್ಧರಿಸಬೇಕೇ ಹೊರತು, ಕಾಶ್ಮೀರದ ಹೊರಗಿರುವ ನಾಯಕರಲ್ಲ. ಹೊರಗಿನವರ ತೀರ್ಮಾನ ಕಾಶ್ಮೀರದ ಜನರ ತೀರ್ಮಾನವಾಗಲಾರದು. ಅದನ್ನು ಕಾಶ್ಮೀರಿಗಳು ಸ್ವೀಕರಿಸುವುದು ಕಷ್ಟ. ಈ ನಿಟ್ಟಿನಲ್ಲಿ ಕನಿಷ್ಠ ಕಾಶ್ಮೀರಿಗಳ ಜೊತೆಗೆ ಮಾತುಕತೆ ನಡೆಸುವ ಪ್ರಕ್ರಿಯೆಯ ಭಾಗವಾಗಿ, ಅಲ್ಲಿ ಸಂವಿಧಾನವನ್ನು ಮರುಸ್ಥಾಪಿಸುವುದು ಭಾರತದ ಆದ್ಯತೆಯಾಗಬೇಕಾಗಿದೆ. ಆ ಮೂಲಕ ಮಾತುಕತೆಯ ಕಡೆಗೆ ಮೊದಲ ಹೆಜ್ಜೆ ಯನ್ನು ಇಡಬೇಕು.