ವಿಮರ್ಶೆಯ ವಿಸ್ಮಯ
ಪ್ರತಿಯೊಂದು ವಿಭಾಗಕ್ಕೂ ಅದರ ಪ್ರಾತಿನಿಧಿಕ ವಿಮರ್ಶಕನೊಬ್ಬ ಇರಲೇಬೇಕು ಎಂಬುದು ಕುರ್ತಕೋಟಿಯವರ ಆಶಯ ಮಾತ್ರವಲ್ಲ ನಂಬಿಕೆ ಕೂಡ ಆಗಿತ್ತು ಎನ್ನುವ ವಿಜಯಶಂಕರ ವಿಮರ್ಶೆಯ ಪುನರ್ ನಿರ್ಮಾಣ ಕಾಲದ ಅವಶ್ಯಕತೆಯಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿ ಕೀರ್ತಿಯವರು ಸೂಚಿಸಿದ ವಿಚಾರಗಳನ್ನು ಹನ್ನೊಂದು ಬಿಂದುಗಳಲ್ಲಿ ಸಂಗ್ರಹಿಸಿಕೊಡುತ್ತಾರೆ.
ಇಂದಿಗೆ ಅರ್ಧಶತಮಾನಕ್ಕೂ ಹಿಂದೆ 1968ರಲ್ಲಿ 20ನೇ ಶತಮಾನದ ಕನ್ನಡ ಸಾಹಿತ್ಯದ ಅತ್ಯಂತ ಪ್ರಮುಖ ವಿಮರ್ಶಕರಾದ ಕೀರ್ತಿನಾಥ ಕುರ್ತಕೋಟಿಯವರು ಉಡುಪಿಯ ವಸಂತ ಮಹಲ್ನಲ್ಲಿ ಕುಮಾರವ್ಯಾಸ ಭಾರತದ ಕೃಷ್ಣನ ಬಗ್ಗೆ ಸುಮಾರು ಒಂದೂವರೆ ಗಂಟೆ ಉಪನ್ಯಾಸ ನೀಡಿದರು. ಪುಂಕಾನುಪುಂಕವಾಗಿ ಕುಮಾರವ್ಯಾಸನ ಷಟ್ಪದಿಗಳನ್ನು ಕೇವಲ ತನ್ನ ನೆನಪಿನ ಶಕ್ತಿಯಿಂದ ಉಲ್ಲೇಖಿಸುತ್ತಾ ಕುರ್ತಕೋಟಿಯವರು ಕುಮಾರವ್ಯಾಸ ಕಟ್ಟಿಕೊಡುವ ಕೃಷ್ಣನ ಪಾತ್ರವನ್ನು ಅನಾವರಣಗೊಳಿಸುವುದನ್ನು ಆಲಿಸಿದ ಶ್ರೋತೃಗಳು ಮಂತ್ರಮುಗ್ಧರಾದರು. ಆಗಿನ್ನೂ ಕಾಲೇಜು ವಿದ್ಯಾರ್ಥಿಯಾಗಿದ್ದ ನಾನು ಕೀರ್ತಿಯವರು ಆ ಸಾಲುಗಳನ್ನು ಹಾಗೆ ಉಲ್ಲೇಖಿಸುವುದನ್ನು ಕೇಳುತ್ತಾ ಅಷ್ಟೊಂದು ಪದ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸಾಧ್ಯವೇ ಎಂದು ಆಶ್ಚರ್ಯಪಟ್ಟಿದ್ದೆ.
ಕನ್ನಡದ ಇಂದಿನ ಸುಪ್ರಸಿದ್ಧ ವಿಮರ್ಶಕ ಎಸ್. ಆರ್. ವಿಜಯಶಂಕರ, ಕುರ್ತಕೋಟಿಯವರ ಬೆರಗುಗೊಳಿಸುವ ನೆನಪಿನ ಶಕ್ತಿಯ ಬಗ್ಗೆ ಸಾಹಿತ್ಯ ಅಕಾಡಮಿ ಪ್ರಕಟಿಸಿರುವ 'ಕೀರ್ತಿನಾಥ ಕುರ್ತಕೋಟಿ' ಎಂಬ ಮೋನೋಗ್ರಾಫ್ನಲ್ಲಿ ಘಟನೆಯೊಂದನ್ನು ಉಲ್ಲೇಖಿಸುತ್ತಾರೆ: ಬೇಂದ್ರೆಯವರು ಬರೆದ ಕವನವೊಂದನ್ನು ಕೀರ್ತಿಯವರು ಅದರ ಹಸ್ತಪ್ರತಿಯಲ್ಲಿ ಓದಿದ್ದರಂತೆ. ಬಳಿಕ ಬೇಂದ್ರೆ ಆ ಹಸ್ತಪ್ರತಿಯನ್ನು ಎಲ್ಲೋ ಕಳೆದುಕೊಂಡರು. ಆಗ ಕುರ್ತಕೋಟಿ ತಮ್ಮ ನೆನಪಿನಿಂದ ಆ ಇಡೀ ಕವನವನ್ನು ಬರೆದು ಕೊಟ್ಟರು!.
ಆದರೆ ವಿಜಯಶಂಕರ ಅವರು ಕುರ್ತಕೋಟಿಯವರ ನೆನಪಿನ ಬಗ್ಗೆ ಕೇಳಿದಾಗ ಶ್ರೀಮತಿ ಸರಸ್ವತಿ ಕುರ್ತಕೋಟಿಯವರು ಹೇಳಿದರಂತೆ: ''ನೀವೆಲ್ಲ ಅವರ ನೆನಪಿನ ಬಗ್ಗೆ ಇಷ್ಟು ಹೊಗಳಿ ಹೇಳುತ್ತೀರಿ. ನಾನು ಅವರಲ್ಲಿ ಕಿರಾಣಿ ಅಂಗಡಿಯಿಂದ ಮೂರು ಸಾಮಾನು ತರಲು ಹೇಳಿದರೆ ಎರಡನ್ನು ಮರೆತು ಒಂದನ್ನು ಹಿಡಕೊಂಡು ಬರುತ್ತಾರೆ.''
1950ರಿಂದ 2000ದ ವರೆಗೆ ಕನ್ನಡ ವಿಮರ್ಶಾ ಲೋಕದ ಮೇರುವಾಗಿ ಕನ್ನಡ ಸಾಹಿತ್ಯದಲ್ಲಿ ಶಾಶ್ವತ ಸ್ಥಾನ ಪಡೆದಿರುವ, ''ಕುರ್ತಕೋಟಿ ಎಂದರೆ ಯಾರು?'' ಎಂದು ಇನ್ನು ಐವತ್ತೋ ನೂರೋ ವರ್ಷಗಳ ಬಳಿಕ ಯಾರಾದರೂ ಕೇಳಿದರೆ ಅದಕ್ಕೆ ಸಾರ್ವಕಾಲಿಕ ಉತ್ತರವಾಗಿ ನಿಲ್ಲಬಲ್ಲ ಕೃತಿ ಎಸ್. ಆರ್. ವಿಜಯಶಂಕರ ಬರೆದಿರುವ ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಕಟಿಸಿರುವ 'ಕೀರ್ತಿನಾಥ ಕುರ್ತಕೋಟಿ'.
ಇದು ಕುರ್ತಕೋಟಿಯವರು ಬರೆದಿರುವ ಸುಮಾರು ಎಂಟು ಸಾವಿರ ಪುಟಗಳಷ್ಟು ಬರಹಗಳನ್ನು ಆರು ತಿಂಗಳಲ್ಲಿ ಒಟ್ಟಿಗೆ ಓದಿ ಮೂರು ತಿಂಗಳ ಕಾಲ ಅವರ ಸುಮಾರು ಐವತ್ತು ಕೃತಿಗಳನ್ನು ಮನನ ಮಾಡಿ ಬರೆದಿರುವ ಮೋನೋಗ್ರಾಫ್. ಕೀರ್ತಿಯವರ ಭಾಷಾಂತರ, ಕಥಾಂತರಗಳು ಹಾಗೂ ಅವುಗಳಿಂದ ಉಂಟಾಗುವ ಅರ್ಥಾಂತರಗಳ ಸಿದ್ಧಾಂತವನ್ನು ಅವರ ವಿಮರ್ಶೆ ಮಂಡಿಸಿದ ಪ್ರೀತಿಯನ್ನು ದಾಖಲಿಸುವ ವಿಜಯಶಂಕರ, ಕೀರ್ತಿಯವರು ವಿಮರ್ಶೆಯ ಮೂಲಕ ಸೃಷ್ಟಿಯ ರಹಸ್ಯವನ್ನು ಅರಿಯಲು ಹೊರಟಿರುವುದು ಬಹಳ ಮಹತ್ವದ ವಿಚಾರ ಎನ್ನುತ್ತಾರೆ. ''ಮೇರುಪರ್ವತವನ್ನು ಬೆರಳು ತೋರಿಸಿ ಹೇಳಬೇಕಾದ ಅಗತ್ಯವಿಲ್ಲ. ಆದರೂ ಹೊಸ ಓದುಗರಿಗೆ, ಇಲ್ಲಿ ಹೋಗಿ ಎಂದು ಹೇಳಬೇಕಾಗುತ್ತದೆ. ಆದರೆ ಇಲ್ಲಿ ದಾರಿಗಾಗಿ ದಿಕ್ಕನ್ನು ಮಾತ್ರ ಸೂಚಿಸಲಾಗಿದೆ....'' ಆದರೂ ಈ ದಿಕ್ಸೂಚಿ ಬರಹ ಕುರ್ತಕೋಟಿಯವರ ವಿಮರ್ಶೆಯ ಅಧ್ಯಯನಕ್ಕೆ ಇಂದಿನ ಓದುಗರಿಗೆ ಉತ್ತಮವಾದೊಂದು ಪ್ರವೇಶ ನೀಡಿದರೆ ತನ್ನ ಕೆಲಸ ಸಾರ್ಥಕ ಎನ್ನುವ ವಿಜಯಶಂಕರ ಅವರ ಶ್ರಮ ಅಭಿನಂದನಾರ್ಹ.
ಕೀರ್ತಿಯವರ ವಿಮರ್ಶಾ ಬರಹಗಳನ್ನು ಜೀವನ-ಪರಿಚಯ, ವಿಮರ್ಶಾ ಪರಿಕಲ್ಪನೆಗಳು: 'ಯುಗಧರ್ಮ ಹಾಗೂ ಸಾಹಿತ್ಯದರ್ಶನ', ವಿಮರ್ಶಾ ವಿವರಗಳು: 'ಕನ್ನಡ ಸಾಹಿತ್ಯ ಸಂಗಾತಿ' ಮತ್ತು 'ನೂರು ಮರ ನೂರು ಸ್ವರ' ಕುವೆಂಪು ಬಗೆಗಿನ ವಿಮರ್ಶೆ, ಬೇಂದ್ರೆ ವಿಮರ್ಶೆ, ಕುಮಾರವ್ಯಾಸ ವಿಮರ್ಶೆ, ಪ್ರತ್ಯಭಿಜ್ಞಾನ: ಸಂಸ್ಕೃತ ನಾಟಕಗಳು, ಅಂಕಣ ಬರಹಗಳು, ಮತ್ತು ಇತರ ಕೃತಿಗಳು: ಅನುವಾದ, ಸಂಪಾದನೆ ಹಾಗೂ ಸೃಜನಶೀಲ ಕೃತಿಗಳು ಎಂದು ಎಂಟು ವಿಭಾಗಗಳಲ್ಲಿ ಇಲ್ಲಿ ವಿಂಗಡಿಸಿಕೊಳ್ಳಲಾಗಿದೆ.
ಈ ವಿಮರ್ಶಾ ಕೃತಿಯನ್ನು ಓದುತ್ತಾ ಹೋದಂತೆ ಓದುಗರು ಗಮನಿಸಬೇಕಾದ ವಿಷಯಗಳಲ್ಲಿ ಕೀರ್ತಿ ಅವರು ಡಿ.ವಿ.ಜಿ., ಕುವೆಂಪು ಹಾಗೂ ಭೈರಪ್ಪರವರ ಬಗ್ಗೆ ವ್ಯಕ್ತಪಡಿಸಿದ ಭಿನ್ನ ನಿಲುವುಗಳು ಬಹಳ ಮುಖ್ಯ ಅನಿಸುತ್ತದೆ. ವಿಜಯಶಂಕರ ಬರೆಯುವಂತೆ ಕೀರ್ತಿಯವರು ''ಹೊಸಗನ್ನಡ ಕಾವ್ಯದ ಇತಿಹಾಸದಲ್ಲಿ ಕುವೆಂಪು ಅವರ ಸ್ಥಾನ ಭದ್ರವಾಗಿದೆ ಎಂದು ಹೇಳಿದರೂ ಅವರ ಕಾವ್ಯದ ಸಮಸ್ಯೆಗಳನ್ನು ಎತ್ತಿತೋರಿಸಿ ಅದು ಕೊರತೆಯೆಂದು ಹೇಳಲು ಏನೂ ಸಂಕೋಚ ಪಡಲಿಲ್ಲ... ಕುವೆಂಪು ಬಗೆಗಿನ ವಿಮರ್ಶೆ ಕನ್ನಡದಲ್ಲಿ ಅಂದು ಎಬ್ಬಿಸಿದ ಕೋಲಾಹಲ ಇಂದೂ ಪ್ರಖರ ಭಿನ್ನಾಭಿಪ್ರಾಯದ ರೂಪದಲ್ಲಿ ಮುಂದುವರಿಯುತ್ತಿದೆ.''
ಪ್ರತಿಯೊಂದು ವಿಭಾಗಕ್ಕೂ ಅದರ ಪ್ರಾತಿನಿಧಿಕ ವಿಮರ್ಶಕನೊಬ್ಬ ಇರಲೇಬೇಕು ಎಂಬುದು ಕುರ್ತಕೋಟಿಯವರ ಆಶಯ ಮಾತ್ರವಲ್ಲ ನಂಬಿಕೆ ಕೂಡ ಆಗಿತ್ತು ಎನ್ನುವ ವಿಜಯಶಂಕರ ವಿಮರ್ಶೆಯ ಪುನರ್ ನಿರ್ಮಾಣ ಕಾಲದ ಅವಶ್ಯಕತೆಯಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿ ಕೀರ್ತಿಯವರು ಸೂಚಿಸಿದ ವಿಚಾರಗಳನ್ನು ಹನ್ನೊಂದು ಬಿಂದುಗಳಲ್ಲಿ ಸಂಗ್ರಹಿಸಿಕೊಡುತ್ತಾರೆ.
ಕುವೆಂಪು ಬಗೆಗಿನ ವಿಮರ್ಶೆ, ಸಾತತ್ಯ ಕ್ರಮ-ಕಥನ, ಭಾಷಾಂತರ- ಕಥಾಂತರ, ಅರ್ಥಾಂತರವನ್ನು ಓದುಗರಿಗೆ ಪರಿಚಯಿಸುವ ವಿಜಯಶಂಕರ ಅವರು ಬೇಂದ್ರೆ ಬಗ್ಗೆ ಹೇಳುವ ಈ ಮಾತು ಗಮನಾರ್ಹ. ''ಒಂದು ಜನಾಂಗಕ್ಕೆ ಬೇಂದ್ರೆಯವರನ್ನು ಓದಬೇಕಾದ ಕ್ರಮವನ್ನು ಕಲಿಸಿಕೊಟ್ಟವರು ಕೀರ್ತಿನಾಥ ಕುರ್ತಕೋಟಿಯವರು.''
ಈ ಮಾತು ಇಂದಿನ ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಯಾಕೆ ಮುಖ್ಯವಾಗುತ್ತದೆಂದರೆ, ಇಂದು ವಿಮರ್ಶೆ ಕೂಡ ಜಾತಿ, ಸಮುದಾಯ, ಸಂಘಟನೆ ಹಾಗೂ ಜಾತಿ ರಾಜಕೀಯದ ಬಾಲ ಹಿಡಿದು ಹೋಗುವ ವ್ಯಕ್ತಿನಿಷ್ಠ ವೃತ್ತಿಪರ ಕಸುಬಾಗುತ್ತಿದೆ. ವಿಮರ್ಶೆಯಲ್ಲಿ ಕೂಡ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಅಸ್ಪಶ್ಯತೆ ಎದ್ದು ಕಾಣುತ್ತಿದೆ. ಒಂದು ಅಭಿಜಾತ ಕೃತಿಯ ಅಥವಾ ಕೃತಿಕಾರನ ಹೆಸರು ಹೇಳಿದ ಕೂಡಲೇ ಆತನನ್ನು 'ಅಸ್ಪಶ್ಯ'ನೆಂದು ಬ್ರಾಂಡ್ ಮಾಡುವ ಸಾಮಾಜಿಕ ಅನಿಷ್ಟ ವ್ಯಾಪಕವಾಗುತ್ತಿದೆ.
ಇಂತಹ ಒಂದು ಕಾಲಘಟ್ಟದಲ್ಲಿ ವಿಜಯಶಂಕರರಂತಹ ವಸ್ತುನಿಷ್ಠ, ಸಂಸ್ಕೃತಿನಿಷ್ಠ ವಿಮರ್ಶಕ ವಿಮರ್ಶೆಯ ಎರಡು ಭಿನ್ನ ಮಜಲುಗಳನ್ನು ಬೆಸೆಯುವಲ್ಲಿ ಮುಖ್ಯವಾಗುತ್ತಾರೆ. ಆ ಕಾಲದಲ್ಲಿ ಪಿ. ಲಂಕೇಶ್ ಮೊದಲಾದವರು ಕೀರ್ತಿ ಅವರಿಗೆ ''ಸಮಕಾಲೀನ ಪ್ರಜ್ಞೆ ಇಲ್ಲ''; ಅವರಲ್ಲಿ ಆಧುನಿಕ ಪ್ರಜ್ಞೆ, ಸಾಮಾಜಿಕ ಪ್ರಜ್ಞೆಗಳ ಕೊರತೆಯಿದೆ ಎಂದು ಟೀಕಿಸಿದ್ದನ್ನು ಪರಿಗಣಿಸಿಯೂ ಆಧುನಿಕ ಕನ್ನಡ ವಿಮರ್ಶೆಯ ಒಂದು ವಿಸ್ಮಯ ಎನ್ನಬಹುದಾದ ಅವರ ಕುರಿತು ವಿಜಯಶಂಕರ ಬರೆಯುವ ಅಂತಿಮ ಸಾಲುಗಳು ಕುರ್ತಕೋಟಿಯವರ ವಿಮರ್ಶೆಯ ಅನನ್ಯ ಮಹತ್ವವನ್ನು ತಿಳಿಸಿ ಹೇಳುತ್ತವೆ: ''ಅವರ ಮಾರ್ಗದಲ್ಲಿ ಅವರೊಬ್ಬರೇ. ಅವರ ದಾರಿಯಲ್ಲಿ ನಡೆಯಬಲ್ಲಂತಹ ಮುಂದಿನ ಪೀಳಿಗೆಯ ವಿಮರ್ಶಕರು ಕಾಣುವುದಿಲ್ಲ. ಆದರೆ ಅವರು ಬರೆದ ಸಾಹಿತ್ಯ ವಿಮರ್ಶೆ ಮುಂದಿನ ಜನಾಂಗಕ್ಕೆ ಹಲವು ವಿಚಾರಗಳನ್ನು ತಿಳಿಸಿ ಸಾಹಿತ್ಯ ವಿಮರ್ಶೆಯ ನಿರಂತರ ಅಧ್ಯಯನಕ್ಕೊಂದು ಆಕರವಾಗಬಲ್ಲ ಸಾಧನೆ ಎಂಬುದು ನಿರ್ವಿವಾದ ವಿಚಾರ. ನಮ್ಮ ಕಾಲದ ಅತಿ ಮುಖ್ಯ ವಿಮರ್ಶಕರಾದ ಅವರ ಅಧ್ಯಯನ ನಿರಂತರವಾಗಿ ನಡೆಯಬೇಕಾದ ಅಗತ್ಯವಿದೆ.''