ಮುಸ್ಲಿಮರಿಗೆ ಕಿರುಕುಳ: ಸಿಎಂ ಬೊಮ್ಮಾಯಿಗೆ ಬಿಜೆಪಿ ಮುಖಂಡ ಪತ್ರ
ಸಿಎಂ ಬೊಮ್ಮಾಯಿ - ಅನ್ವರ್ ಮಾಣಿಪ್ಪಾಡಿ
ಬೆಂಗಳೂರು: ರಾಜ್ಯದಲ್ಲಿ ಮುಸ್ಲಿಮರನ್ನು ಅಗೌರವದಿಂದ ಕಾಣುವ ಜತೆಗೆ ಅವರಿಗೆ ಕಿರುಕುಳ ನೀಡಿ ಬೆದರಿಕೆ ಹಾಕಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಮತ್ತು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಪತ್ರದಲ್ಲಿ ದೂರಿದ್ದಾರೆ.
ಮುಸ್ಲಿಮರಿಗೆ ಖಬರಸ್ತಾನಕ್ಕೆ ಭೂಮಿ ಪಡೆಯುವುದೂ ಕಷ್ಟಕರವಾಗಿ ಪರಿಣಮಿಸಿದೆ ಎಂದು ಅವರು ವಿವರಿಸಿದ್ದಾರೆ. ಸುಳ್ಯ ತಾಲೂಕು ಸಂಪಾಜೆಯ ಗೂನಡ್ಕ ಗ್ರಾಮಪಂಚಾಯ್ತಿಯಲ್ಲಿ 20 ಗುಂಟೆ ಭೂಮಿಯನ್ನು ಬದ್ರಿಯಾ ಜುಮಾ ಮಸೀದಿಗೆ ಮಂಜೂರು ಮಾಡಿರುವ ನಿದರ್ಶನವನ್ನು ಅವರು ಉಲ್ಲೇಖಿಸಿದ್ದಾರೆ. ಕಂದಾಯ ಇಲಾಖೆ ಈ ಭೂಮಿಯನ್ನು ಮಸೀದಿಗೆ ಕೊಟ್ಟಿದ್ದರೂ ಅರಣ್ಯ ಇಲಾಖೆ ಅಲ್ಲಿರುವ ಮರಗಳನ್ನು ಕಡಿಯಲು ಅನುಮತಿ ಕೊಟ್ಟಿದೆ ಎಂದು ಅವರು ಹೇಳಿದ್ದಾರೆ.
"ನಮ್ಮ ಪಕ್ಷ ಹಾಗೂ ನಮ್ಮ ಸರ್ಕಾರ ಮುಸ್ಲಿಮರನ್ನು ಕಡೆಗಣಿಸುತ್ತಿದೆ ಮತ್ತು ಕೀಳಾಗಿ ಕಾಣುತ್ತಿದೆ ಎನ್ನುವುದಕ್ಕೆ ಇದು ಪುರಾವೆ ಎನಿಸದಿದ್ದರೆ, ಮುಸ್ಲಿಂ ಸಮುದಾಯವನ್ನು ತೀವ್ರ ಸಂಕಷ್ಟಕ್ಕೆ ತಳ್ಳುವ ಮೂಲಕ ನಿರ್ಲಕ್ಷಿಸುತ್ತಿರುವುದಕ್ಕೆ ಮತ್ತು ದ್ವೇಷದಿಂದ ಕಾಣುತ್ತಿರುವುದಕ್ಕೆ ನಿದರ್ಶನವಾಗಿ ಏನನ್ನು ನೀಡಲು ಸಾಧ್ಯ" ಎಂದು ಅವರು ಪ್ರಶ್ನಿಸಿದ್ದಾರೆ.
ವಕ್ಫ್ ಮಂಡಳಿಯ ಕಾರ್ಯವೈಖರಿಯ ವಿಚಾರದಲ್ಲಿ ಕೂಡಾ ಮಾಣಿಪ್ಪಾಡಿ, ಸರ್ಕಾರವನ್ನು ತರಾಟೆಗೆ ತೆಗದುಕೊಂಡಿದ್ದಾರೆ. "ಸರ್ಕಾರದ ಅನುದಾನವನ್ನು ಮತ್ತು ವಕ್ಫ್ ಆಸ್ತಿಗಳನ್ನು ಕಬಳಿಸಿದ ಆರೋಪ ಎದುರಿಸುತ್ತಿರುವ ಅಧಿಕಾರಿಗಳನ್ನು ಬೆಂಬಲಿಸುವ ಮೂಲಕ ಸರ್ಕಾರ ನಮ್ಮ ಸಮೃದ್ಧ ವಕ್ಫ್ ಮಂಡಳಿಯನ್ನು ಬಡತನಕ್ಕೆ ತಳ್ಳುತ್ತಿದೆ. ಇವರು ಖಚಿತವಾಗಿ ಮಂಡಳಿಯನ್ನು ಮತ್ತು ಸಂಪತ್ತನ್ನು ಲೂಟಿ ಮಾಡುತ್ತಾರೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಸಬ್ಕಾ ಸಾಥ್ ಸಬ್ಕಾ ವಿಕಾಸ್ ತತ್ವವನ್ನು ರಾಜ್ಯ ಅನುಸರಿಸದಿರುವುದು ಖೇದಕರ ಎಂದು ಅವರು ಹೇಳಿದ್ದಾರೆ. ಕರ್ನಾಟಕದ ಎಲ್ಲೆಡೆ ಮುಸ್ಲಿಮರು ಸಂಕಷ್ಟ ಅನುಭವಿಸುತ್ತಿದ್ದಾರೆ ಎನ್ನುವುದು ನಿಜಕ್ಕೂ ನೋವಿನ ಸಂಗತಿ ಎಂದಿದ್ದಾರೆ.