ಆದಿಉಡುಪಿ- ಮಲ್ಪೆ ರಾ.ಹೆ. ಚತುಷ್ಪಥ ಕಾಮಗಾರಿಗೆ ಟೆಂಡರ್ ನೋಟಿಫಿಕೇಶನ್
ಉಡುಪಿ, ಡಿ.9: ತೀರ್ಥಹಳ್ಳಿ-ಮಲ್ಪೆರಾಷ್ಟ್ರೀಯ ಹೆದ್ದಾರಿ 169ಅ ಇದರ ಆದಿಉಡುಪಿಯಿಂದ ಮಲ್ಪೆವರೆಗಿನ ರಸ್ತೆಯ ಚತುಷ್ಪಥ ಕಾಮಗಾರಿ ಯೋಜನೆಗೆ ಟೆಂಡರ್ ನೋಟಿಫಿಕೇಶನ್ ಆಗಿದ್ದು, ಜ.25ರಂದು ಟೆಂಡರ್ ಬಿಡ್ ತೆರೆದು ತಕ್ಷಣದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವ ಪ್ರಕ್ರಿಯೆ ನಡೆಯಲಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
355 ಕೋಟಿ ಮೊತ್ತದ ಈ ಯೋಜನೆಯಲ್ಲಿ ತೀರ್ಥಹಳ್ಳಿ -ಮಲ್ಪೆ ರಾಷ್ಟ್ರೀಯ ಹೆದ್ದಾರಿ -169ರ ಹೆದ್ದಾರಿ ಹಾದು ಹೋಗುವ ಆದಿ ಉಡುಪಿಯಿಂದ ಮಲ್ಪೆ ವರೆಗೆ ಹಾಗೂ ಪರ್ಕಳದಿಂದ ಹಿರಿಯಡ್ಕವರೆಗೆ ಚತುಷ್ಪಥ ಮತ್ತು ಹಿರಿಯಡ್ಕ ದಿಂದ ಹೆಬ್ರಿವರೆಗೆ ದ್ವಿಪಥವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಪ್ರವಾಸೋದ್ಯಮ ಹಾಗೂ ಮೀನುಗಾರಿಕೆ ವಲಯದ ಅಭಿವೃದ್ಧಿಯ ದೃಷ್ಟಿ ಯಿಂದ ಆದಿ ಉಡುಪಿಯಿಂದ ಮಲ್ಪೆ ವರೆಗಿನ ರಸ್ತೆ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಗೊಳಿಸುವುದು ಪ್ರಮುಖ ಬೇಡಿಕೆಯಾಗಿದ್ದು, ಈ ನಿಟ್ಟಿನಲ್ಲಿ ಮುತು ವರ್ಜಿ ವಹಿಸಿ ಯೋಜನೆಗೆ ಅನುಮೋದನೆ ದೊರಕುವವರೆಗೆ ನಿರಂತರವಾಗಿ ಪ್ರಯತ್ನಿಸಿ ಶ್ರಮವಹಿಸಿದ ಕೇಂದ್ರ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಅಭಿನಂದನೆಗಳು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.