ಆದಿತ್ಯನಾಥ್ ರ ʼ80%-20% ನಡುವೆ ಸ್ಫರ್ಧೆʼ ಹೇಳಿಕೆಯ ʼಅರ್ಥʼವನ್ನು ವಿವರಿಸಿದ ಅಖಿಲೇಶ್ ಯಾದವ್ ಹೇಳಿದ್ದೇನು?
ಲಕ್ನೋ: ಉತ್ತರಪ್ರದೇಶ ಚುನಾವಣೆಗೂ ಮುನ್ನ ಹಲವು ಬಿಜೆಪಿ ಶಾಸಕರನ್ನು ತನ್ನೆಡೆಗೆ ಸೆಳೆದುಕೊಂಡು ರಾಜಕೀಯ ಮುನ್ನಡೆ ಸಾಧಿಸಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆಯನ್ನು ವ್ಯಂಗ್ಯವಾಡಿದ್ದಾರ.
ಹಿಂದೂ ಮುಸ್ಲಿಮರ ಅನುಪಾತದ ಕುರಿತು ಎಂದು ವಿಶ್ಲೇಷಿಲಾಗಿರುವ, ಯೋಗಿ ಆದಿತ್ಯನಾಥರ "80 vs 20" ಹೇಳಿಕೆಯನ್ನು ಕುಟುಕಿರುವ ಅಖಿಲೇಶ್, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 20% ಗೆಲ್ಲಲಿದೆ ಹಾಗೂ ಸಮಾಜವಾದಿ 80% ಸೀಟುಗಳನ್ನು ಗೆಲ್ಲಲಿದೆ ಎಂಬುದು ಯೋಗಿ ಮಾತಿನ ಅರ್ಥ ಎಂದು ಛೇಡಿಸಿದ್ದಾರೆ.
ಅದೂ ಅಲ್ಲದೆ, ಬಾಬಾ ಮುಖ್ಯಮಂತ್ರಿ (ಯೋಗಿ ಆದಿತ್ಯನಾಥ್) ಗಣಿತ ಟೀಚರ್ ಒಬ್ಬರನ್ನು ನೇಮಿಸಿಕೊಳ್ಳುವುದು ಒಳ್ಳೆಯದು ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
80% ಮತದಾರರು ಒಂದು ಕಡೆ ಇರಲಿದ್ದಾರೆ, ಉಳಿದ 20 % ಮತದಾರರು ಒಂದು ಕಡೆ ಹೊಂದಲಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಕಳೆದ ವಾರ ಹೇಳಿದ್ದರು. ಹಿಂದೂ-ಮುಸ್ಲಿಮರ ಅನುಪಾತವನ್ನು ಕುರಿತು ಯೋಗಿ ಈ ಹೇಳಿಕೆ ನೀಡಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ.
ಉತ್ತರ ಪ್ರದೇಶದ 403 ಸ್ಥಾನಗಳಲ್ಲಿ ನಾಲ್ಕನೇ ಮೂರು ಸ್ಥಾನಗಳನ್ನು ಗೆಲ್ಲುವ ಬಿಜೆಪಿಯ ಹೇಳಿಕೆಯನ್ನು ಲೇವಡಿ ಮಾಡಿದ ಅಖಿಲೇಶ್ ಯಾದವ್ "ಮೂರು ಅಥವಾ ನಾಲ್ಕು ಸ್ಥಾನಗಳನ್ನು ಗೆಲ್ಲುತ್ತಾರೆ ಎಂದು ಹೇಳಲು ಬಿಜೆಪಿ ಉದ್ಧೇಶಿರುವುದಾಗಿ" ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ನಿಕಟವರ್ತಿ ಉದ್ಯಮಿಗಳ ಮೇಲೆ ಡಿಸೆಂಬರ್ನಲ್ಲಿ ನಡೆದ ತೆರಿಗೆ ದಾಳಿಗಳನ್ನು ಉಲ್ಲೇಖಿಸಿದ ಅವರು, "ಡಿಜಿಟಲ್ ಇಂಡಿಯಾ ದೋಷ" ದ ಪರಿಣಾಮ ಎಂದು ಹೇಳಿದ್ದಾರೆ. “ಡಿಜಿಟಲ್ ಇಂಡಿಯಾ ದೋಷವನ್ನು ಯಾರು ಮರೆಯಲು ಸಾಧ್ಯ. ಅದು ಎಲ್ಲೋ ಇರಬೇಕಿತ್ತು ಆದರೆ ಅವರ ಮನೆಯಲ್ಲಿಯೇ ಕೊನೆಗೊಂಡಿತು" ಎಂದು ಯಾದವ್ ಹೇಳಿದ್ದಾರೆ.
"ನಾವು ವಿಧಾನಸಭಾ ಚುನಾವಣೆಗಾಗಿ ಕಾಯುತ್ತಿದ್ದೆವು. ಈಗ ಸೈಕಲ್ನ ಹ್ಯಾಂಡಲ್ ಮತ್ತು ಚಕ್ರಗಳು ಉತ್ತಮ ಆಕಾರದಲ್ಲಿವೆ. ಮತ್ತು ಅದನ್ನು ಸವಾರಿ ಮಾಡಲು ನಮ್ಮಲ್ಲಿ ಈಗ ಸಾಕಷ್ಟು ಜನರಿದ್ದಾರೆ. ಸಮಾಜವಾದಿ ಮತ್ತು ಅಂಬೇಡ್ಕರ್ವಾದಿಗಳು ಒಟ್ಟಾಗಿ ಬಂದಿವೆ ಮತ್ತು ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.