ಮಂಗಳೂರು: 7 ವರ್ಷಗಳ ಹಿಂದಿನ ಮನೆ ಕಳ್ಳತನ ಪ್ರಕರಣದ ಆರೋಪಿ ಸೆರೆ
ಮಂಗಳೂರು, ಜ.17: ಏಳು ವರ್ಷದ ಹಿಂದೆ ನಡೆದ ಮನೆ ಕಳ್ಳತನ ಪ್ರಕರಣದ ಆರೋಪಿ ಚಿಕ್ಕಮಗಳೂರು ಜಿಲ್ಲೆಯ ಲಿಂಗದಲ್ಲಿಯ ದ್ವಾರನಾಳು ಭೈರಪುರದ ನಾಗ ನಾಯ್ಕ್ ಯಾನೆ ನಾಗರಾಜ್ (55) ಎಂಬಾತನನ್ನು ಬಂಧಿಸಲಾಗಿದೆ.
ಎಡಪದವು ರಾಮ ಭಜನಾ ಮಂದಿರದ ಕಾಣಿಕೆ ಡಬ್ಬ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಸಿಸಿಬಿ ಘಟಕದಿಂದ ಬಂಧಿಸಲ್ಪಟ್ಟಿದ್ದ ಈತನನ್ನು ಮತ್ತಷ್ಟು ವಿಚಾರಣೆಗೊಳಪಡಿಸಿದಾಗ 2014ರ ಜೂನ್ನಲ್ಲಿ ಬಜ್ಪೆ ಗ್ರಾಮದ ಎಂಎಸ್ಇಝೆಡ್ ಕಾಲನಿಯ ಧೂಮಾವತಿ ಧಾಮದಲ್ಲಿರುವ ದಯಾನಂದ ಕೋಟ್ಯಾನ್ರ ಮನೆಗೆ ನುಗ್ಗಿ ಕಪಾಟಿನಲ್ಲಿಟ್ಟಿದ್ದ ಮೂರುವರೆ ಪವನ್ ತೂಕದ ಬಂಗಾರದ ಸರ ಮತ್ತು 30,000 ರೂ. ನಗದು ಕಳವು ಮಾಡಿಕೊಂಡಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಆಗಲೇ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಆರೋಪಿ ನಾಗ ನಾಯ್ಕ್ ನನ್ನು ಬಂಧಿಸಿ ಆತ ನೀಡಿದ ಮಾಹಿತಿಯಂತೆ ಮೂರುವರೆ ಲಕ್ಷ ರೂ. ರೂಪಾಯಿ ಮೌಲ್ಯದ ಸೊತ್ತುಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ನಾಗ ನಾಯ್ಕ್ ಮೇಲೆ ವಿವಿಧ ಠಾಣೆಯಲ್ಲಿ ಮನೆ ಮತ್ತು ದೇವಸ್ಥಾನದ ಸೊತ್ತು ಕಳವು, ದರೋಡೆ ಸಹಿತ 19 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.