ಮಂತ್ರಿಯೇ ಮಾಸ್ಕ್ ಹಾಕಲಿಲ್ಲ ಅಂದರೆ ಬೇರೆಯವರು ಏಕೆ ಹಾಕಬೇಕು?: ಸಚಿವ ಉಮೇಶ್ ಕತ್ತಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
''ಬಿಜೆಪಿಯವರು ಹೇಳುವುದು ಒಂದು, ಮಾಡುವುದು ಇನ್ನೊಂದು''
ಮಂಡ್ಯ: ''ಉಮೇಶ್ ಕತ್ತಿ ಮಂತ್ರಿ ಆಗಲಿಕ್ಕೆ ಯೋಗ್ಯ ಅಲ್ಲ. ಮಾಸ್ಕ್ ಹಾಕದೆ ಅವರು ನಿಯಮ ಉಲ್ಲಂಘನೆ ಮಾಡಿದ್ದಾರೆ. ಮಂತ್ರಿಯಾಗಲು ಲಾಯಕ್ಕಾ ಇವರು? ಇವರ ಮೇಲೆ ಸರ್ಕಾರ ಯಾಕೆ ಕೇಸ್ ಹಾಕಿಲ್ಲ.?'' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ಒಬ್ಬ ಮಂತ್ರಿಯಾಗಿ ಕತ್ತಿ , ಮಾಸ್ಕ್ ಹಾಕದಿರುವವರನ್ನ ಬಿಟ್ಟುಬಿಡಿ, ಕಡ್ಡಾಯ ಮಾಡಬೇಡಿ. ಇಷ್ಟ ಬಂದವರು ಹಾಕ್ತಾರೆ, ಇಷ್ಟ ಇಲ್ಲದವರು ಇರ್ತಾರೆ. ಒತ್ತಾಯ ಮಾಡಬೇಡಿ ಅಂತ ಹೇಳ್ತಾರೆ'' ಎಂದರು.
''ಸರ್ಕಾರ ನಡೆಸಲಿಕ್ಕೆ ಇವರಿಗೆ ಯೋಗ್ಯತೆ ಇದ್ಯಾ ? ಮಂತ್ರಿಯೇ ಮಾಸ್ಕ್ ಹಾಕಲಿಲ್ಲ ಅಂದರೆ ಬೇರೆಯವರು ಏಕೆ ಹಾಕಬೇಕು?
ಬೇರೆಯವರಿಗೆ ದಂಡ ಹಾಕ್ತಾರೆ, ಕೇಸ್ ದಾಖಲು ಮಾಡ್ತಾರೆ. ಮಾಸ್ಕ್ ಧರಿಸದ ಮಂತ್ರಿ ಮೇಲೆ ಕೇಸ್ ಹಾಕಬೇಕು ತಾನೆ'' ಎಂದು ಕಿಡಿಗಾರಿದ್ದಾರೆ.
''ನನ್ನ ಪ್ರಕಾರ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಅಗತ್ಯ ಇಲ್ಲ. ವೀಕೆಂಡ್ ಕರ್ಫ್ಯೂನಿಂದ ಕೊರೋನ ತಡೆಗಟ್ಟಲು ಸಾಧ್ಯವಿಲ್ಲ.
ಸರ್ಕಾರ ಎಲ್ಲರಿಗೂ ಲಸಿಕೆ ನೀಡಲಿ. ಜನ ಕೊವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಿ. ವೀಕೆಂಡ್ ಕರ್ಫ್ಯೂನಿಂದ ಏನಾಗುತ್ತೆ? ಅದರಿಂದ ಕೊರೋನ ತಡೆಗಟ್ಟಲು ಸಾಧ್ಯವಿಲ್ಲ'' ಎಂದು ಅಭಿಪ್ರಾಯಿಸಿದರು.
''ಬಿಜೆಪಿಯವರು ಯಾವಾಗಲೂ ಡಬಲ್ ಸ್ಟ್ಯಾಂಡರ್ಡ್ ನವರೇ. ಅವರಿಗೆ ಯಾವ ಸಿಂಗಲ್ ಸ್ಟ್ಯಾಂಡರ್ಡ್ ಇದೆ.? ಅವರು ಯಾವಾಗಲೂ ಹೇಳುವುದು ಒಂದು, ಮಾಡುವುದು ಇನ್ನೊಂದು'' ಎಂದು ಹೇಳಿದರು.
''ಇವತ್ತು ಕೊರೋನ ನಿಯಮಗಳ ಉಲ್ಲಂಘನೆ ಆಗಿದ್ರೆ, ಅದು ಬಿಜೆಪಿಯಿಂದ. ಬಿಜೆಪಿ ಅವರಿಂದಲೇ ಜಾಸ್ತಿ ಉಲ್ಲಂಘನೆ ಆಗಿದೆ'' ಎಂದು ತಿಳಿಸಿದರು.