ವಕ್ಫ್ ಅನುದಾನಗಳನ್ನು ತ್ವರಿತಗತಿಯಲ್ಲಿ ಬಳಸಲು ಅಧಿಕಾರಿಗಳಿಗೆ ಶಾಫಿ ಸಅದಿ ಸೂಚನೆ
ಬೆಂಗಳೂರು: ವರ್ಷಗಳಿಂದ ವಿವಿಧ ಕಾರಣಗಳಿಂದ ಬಳಕೆ ಮಾಡದಿರುವ ವಕ್ಫ್ ಅನುಧಾನಗಳನ್ನು ತ್ವರಿತಗತಿಯಲ್ಲಿ ಬಳಸಿಕೊಳ್ಳಲು ಹಾಗೂ ಬಳಕೆ ಮಾಡಿ ಇನ್ನೂ ಉಪಯೋಗ ಪ್ರಮಾಣ ಪತ್ರ ಕೊಡಲು ಬಾಕಿ ಇರುವವರು ಮುಂದಿನ 15 ದಿವಸಗಳಲ್ಲಿ ಮಂಡಳಿಗೆ ಸಲ್ಲಿಸುವಂತೆ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾದ ಮೌಲಾನಾ ಎನ್.ಕೆ.ಎಂ ಶಾಫಿ ಸಅದಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರಿನ ವಕ್ಫ್ ಮಂಡಳಿ ಕಚೇರಿಯಲ್ಲಿ ಝೂಮ್ ಆಪ್ ಮೂಲಕ ರಾಜ್ಯದ ಎಲ್ಲಾ ಜಿಲ್ಲಾ ವಕ್ಫ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಫಿ ಸಅದಿಯವರು 2017/18 ರಿಂದ ಬಾಕಿ ಇರುವ ಅನುದಾನಗಳನ್ನು ಸಕಾರಣವಿಲ್ಲದೆ ಉಪಯೋಗಿಸದ ಸಂಸ್ಥೆಗಳ ಆಡಳಿತ ಸಮಿತಿ ಮತ್ತು ಸಂಬಂಧಪಟ್ಟ ಜಿಲ್ಲಾ ವಕ್ಫ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ದಕ್ಷಿಣ ಕನ್ನಡ, ಹಾವೇರಿ, ಬಾಗಲಕೋಟೆ, ಗದಗ, ಯಾದಗಿರಿ ಜಿಲ್ಲೆಗಳು ಅತೀ ಹೆಚ್ಚು ಉಪಯೋಗ ಪ್ರಮಾಣ ಪತ್ರ (U.C) ನೀಡದ ಜಿಲ್ಲೆಗಳನ್ನಾಗಿ ಗುರುತಿಸಿದ್ದು, ಸದಿರಿ ಜಿಲ್ಲೆಗಳ ವಕ್ಫ್ ಅಧಿಕಾರಿಗಳಿಗೆ 15 ದಿವಸಗಳ ಸದ್ರಿ ಅವಕಾಶ ನೀಡಲಾಗಿದ್ದು, ಸೂಕ್ತ ಸಮಯದಲ್ಲಿ U.C ನೀಡಲು ಅಸಮರ್ಥರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಹಾಯಕ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಸೂಚನೆ ನೀಡಿದರು. ರಾಜ್ಯದ 31 ಜಿಲ್ಲೆಗಳ ವಕ್ಪ್ ಅಧಿಕಾರಿಗಳ ವರ್ಚುವಲ್ ಸಭೆಯಲ್ಲಿ ರಾಜ್ಯ ವಕ್ಫ್ ಮಂಡಳಿ ಸದಸ್ಯರು ಹಾಗೂ ರಾಜ್ಯ ಸಭಾ M.P ಗಳಾದ ಡಾ. ಸೈಯದ್ ನಾಸಿರ್ ಹುಸೈನ್, ವಕ್ಫ್ ಬೋರ್ಡ್ ಸದಸ್ಯ ಅಡ್ವೊಕೇಟ್ ಆಸಿಫ್ ಅಲಿ ಶೇಖ್,ಎ.ಸಿ.ಓ.ಮಹಾಝ್ ಅಹ್ಮದ್ ಎ.ಎಸ್ ಗಳು ಭಾಗವಹಿಸಿದ್ದರು.