ಕೋವಿಡ್ ನಿರ್ವಹಣೆ ಬಗ್ಗೆ ತಜ್ಞರ ವರದಿ ಅನುಸರಿಸಿ ಮುಂದಿನ ತೀರ್ಮಾನ: ಸಿಎಂ ಬೊಮ್ಮಾಯಿ
ಬೆಂಗಳೂರು, ಜ.27: ಕೋವಿಡ್ ನಿರ್ವಹಣೆಯ ಬಗ್ಗೆ ತಜ್ಞರ ಸಮಿತಿಯಿಂದ ವರದಿ ಕೇಳಿದ್ದೇನೆ. ವರದಿ ಬಂದ ತಕ್ಷಣ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ಇಂದು ನಡೆಯುವ ಸಚಿವ ಸಂಪುಟಸ ಸಭೆ ಕಾರ್ಯಸೂಚಿ ಪ್ರಕಾರವೇ ಹೋಗುತ್ತದೆ. ಇತರ ವಿಷಯಗಳು ಬಂದಾಗ ಹಲವು ವಿಷಯಗಳನ್ನು ಚರ್ಚೆ ಮಾಡುತ್ತೇವೆ ಎಂದು ಮಾಧ್ಯಮದವರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಮುಂದುವರಿಸಬೇಕೆಂಬ ಬೇಡಿಕೆ ಬಂದಿದೆ. ಬೆಂಬಲ ಬೆಲೆ ಕುರಿತು ಚರ್ಚಿಸಲು ಸಚಿವ ಸಂಪುಟ ಉಪ ಸಮಿತಿಯಿದೆ. ಆ ಸಮಿತಿಯ ಅನುಮೋದನೆ ಪಡೆದು ರೈತರಿಗೆ ಅನುಕೂಲ ಆಗುವ ರೀತಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಶುಕ್ರವಾರ ನಿಮ್ಮ ಜನ್ಮ ದಿನ ಮತ್ತು ನಿಮ್ಮ ನೇತೃತ್ವದ ಸರಕಾರಕ್ಕೆ ಆರು ತಿಂಗಳು ತುಂಬುತ್ತಿದೆ. ಏನಾದರು ಹೊಸ ಘೋಷಣೆಗಳನ್ನು ಮಾಡುತ್ತೀರಾ?‘ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ನಾನು ನನ್ನ ಹುಟ್ಟುಹಬ್ಬ ಆಚರಣೆ ಮಾಡುವುದಿಲ್ಲ. ಯಾವತ್ತೂ ಮಾಡಿಲ್ಲ ಕೂಡಾ. ಸರ್ಕಾರಕ್ಕೆ ಆರು ತಿಂಗಳು ಆಗಿರುವ ಬಗ್ಗೆ ಒಂದು ಪುಸ್ತಕ ಬಿಡುಗಡೆ ಮಾಡುತ್ತೇವೆ. ಈ ಆರು ಅವಧಿಯಲ್ಲಿ ಏನೆಲ್ಲ ಕೆಲಸಗಳು ಆಗಿವೆ, ಅವು ಯಾವ ರೀತಿ ಜನೋಪಯೋಗಿ ಆಗಿದೆ ಎಂಬ ನೋಟದ ವಿವರಗಳನ್ನು ನೀಡುತ್ತೇನೆ ಎಂದರು.
ಅಚ್ಚರಿಯ ಘೋಷಣೆಗಳೇನಾದರೂ ಇದೆಯೇ?’ ಎಂದು ಕೇಳಿದಾಗ, ‘ಅಚ್ಚರಿಯ ಘೋಷಣೆಗಳು ಏನೂ ಇಲ್ಲ. 6 ತಿಂಗಳಿಗೆಲ್ಲ ಘೋಷಣೆ ಮಾಡಲು ಆಗುತ್ತಾ. ಜನರಿಗೆ ನಿರಂತರವಾಗಿ ಸಹಾಯ ಮಾಡುವಂಥ, ಜನ ಕಲ್ಯಾಣ ಯೋಜನೆಗಳನ್ನು ರೂಪಿಸುತ್ತೇವೆ ಎಂದರು.