ಹೆಸರು ಬದಲಾವಣೆ ಸುಲಭ; ಮೂಲಸೌಕರ್ಯ ಸುಧಾರಣೆ ಕಷ್ಟ
ಮಹರ್ಷಿ ಚರಕ ಭಾರತೀಯ ವೈದ್ಯರಿಗೆ ಅರ್ಹ ಮಾದರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆಯುರ್ವೇದಿಕ್ ವೈದ್ಯರ ಸಮೂಹದಲ್ಲಿ ಅದು ಸುಲಭವಾಗಿ ಸ್ವೀಕಾರಾರ್ಹವೂ ಆಗಬಹುದು. ಆದರೆ, ಅಂತಿಮವಾಗಿ, ಪ್ರತಿಜ್ಞಾವಿಧಿಯೊಂದನ್ನು ಬದಲಿಸುವುದು ವೈದ್ಯಕೀಯ ಶಿಕ್ಷಣವನ್ನು ಸುಧಾರಿಸುವುದಕ್ಕಿಂತ ಸುಲಭ. ಒಂದು ನಗರದ ಮೂಲಸೌಕರ್ಯವನ್ನು ಸುಧಾರಿಸುವುದಕ್ಕಿಂತ ಅದರ ಹೆಸರನ್ನು ಬದಲಿಸುವುದು ತುಂಬಾ ಸುಲಭ. ಸರಕಾರವು ಹೆಸರುಗಳು ಮತ್ತು ಚಿಹ್ನೆಗಳನ್ನು ಬದಲಿಸಲು ಹೊರಟಿದೆ; ಗುಣಮಟ್ಟವನ್ನಲ್ಲ.
2018 ಆಗಸ್ಟ್ನಲ್ಲಿ, ಹಿಂದೂ ರಾಷ್ಟ್ರೀಯವಾದಿ ಪಕ್ಷ ಭಾರತೀಯ ಜನತಾ ಪಕ್ಷ (ಬಿಜೆಪಿ) ಉತ್ತರಪ್ರದೇಶದಲ್ಲಿರುವ ಐತಿಹಾಸಿಕ ಮುಘಲ್ಸರಾಯಿ ಜಂಕ್ಷನ್ ರೈಲ್ವೇ ನಿಲ್ದಾಣಕ್ಕೆ ಬಲಪಂಥೀಯ ಹಿಂದೂ ಚಿಂತಕ ದೀನ ದಯಾಳ್ ಉಪಾಧ್ಯಾಯರ ಹೆಸರನ್ನು ಇಟ್ಟಿತು. ಹಿಂದಿನ ಹೆಸರು ಮುಸ್ಲಿಮ್ ಮುಘಲ್ ರಾಜವಂಶಕ್ಕೆ ಸಂಬಂಧಿಸಿದೆ ಎನ್ನುವುದು ಇದರ ಹಿಂದಿನ ಸಂಭಾವ್ಯ ಕಾರಣ. ಇದಕ್ಕಿಂತ ಮೂರು ವರ್ಷಗಳ ಮೊದಲು, 2015 ಮೇ ತಿಂಗಳಲ್ಲಿ, ಆಡಳಿತಾರೂಢ ಬಿಜೆಪಿಯು ಔರಂಗಜೇಬ್ ರಸ್ತೆಯ ಹೆಸರನ್ನು ಬಿಜೆಪಿ ಪರ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಮ್ ರಸ್ತೆ ಎಂಬುದಾಗಿ ಬದಲಿಸಿತು. 2016 ಎಪ್ರಿಲ್ನಲ್ಲಿ, ಹರ್ಯಾಣದ ಬಿಜೆಪಿ ಸರಕಾರವು ಗುರುಗಾಂವ್ ನಗರದ ಹೆಸರನ್ನು ಗುರು ದ್ರೋಣಾಚಾರ್ಯರ ಹೆಸರಿನಲ್ಲಿ ಗುರುಗ್ರಾಮ್ ಎಂಬುದಾಗಿ ಬದಲಿಸಿತು. ದ್ರೋಣಾಚಾರ್ಯರು ಮಹಾಭಾರತ ಮಹಾಕಾವ್ಯದಲ್ಲಿ ಮೇಲ್ಜಾತಿ ಹಿಂದೂ ಪಾತ್ರವಾಗಿದ್ದಾರೆ. ಆದರೆ, ಭಾರತದ ದಲಿತರು ಅವರನ್ನು ಖಳನಾಯಕ ಎಂಬುದಾಗಿ ಭಾವಿಸುತ್ತಾರೆ. ಅಹ್ಮದಾಬಾದ್, ಹೈದರಾಬಾದ್ ಮತ್ತು ಔರಂಗಾಬಾದ್ ಸೇರಿದಂತೆ ಮುಸ್ಲಿಮ್ ಹೆಸರುಗಳನ್ನು ಹೊಂದಿರುವ ಇತರ ಹಲವು ಸ್ಥಳಗಳ ಹೆಸರುಗಳನ್ನೂ ಬದಲಾಯಿಸಬೇಕೆಂಬುದಾಗಿಯೂ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಒತ್ತಾಯಿಸಿದೆ.
ಹೆಚ್ಚಿನ ದೇಶಗಳಲ್ಲಿ ಸಾರ್ವಜನಿಕ ಸ್ಥಳಗಳನ್ನು ಹೆಸರಿಸುವುದು ಮತ್ತು ಮರುಹೆಸರಿಸುವುದು ಸಂಕೀರ್ಣ ಹಾಗೂ ರಾಜಕೀಯ ವ್ಯವಹಾರಗಳಾಗಿವೆ. ಸ್ವಾತಂತ್ರದ ಬಳಿಕ ಹಲವು ಹೆಸರು ಬದಲಾವಣೆಗಳನ್ನು ನಾವು ನೋಡಿದ್ದೇವೆ. ಯಾಕೆಂದರೆ, ವಸಾಹತುಶಾಹಿ ಪರಂಪರೆಯ ಗುರುತುಗಳನ್ನು ಭೌತಿಕವಾಗಿ ಅಳಿಸಿಹಾಕಲು ಭಾರತ ಬಯಸಿತ್ತು. ದಿಲ್ಲಿಯಲ್ಲಿ, ಪ್ರಮುಖ ರಸ್ತೆಗಳ ಹೆಸರುಗಳನ್ನು ಬದಲಾಯಿಸಲಾಗಿತ್ತು. ಉದಾಹರಣೆಗೆ; ಕಿಂಗ್ಸ್ವೇ ರಾಜಪಥವಾಯಿತು, ಕ್ವೀನ್ಸ್ವೇ ಜನಪಥವಾಯಿತು. ಬಿಜೆಪಿ ಅಧಿಕಾರಕ್ಕೆ ಬರುವ ತುಂಬಾ ಮೊದಲೇ ಹಲವಾರು ನಗರಗಳ ಹೆಸರುಗಳನ್ನು ಭಾರತ ಬದಲಾಯಿಸಿತು. 1995ರಲ್ಲಿ, ಬಾಂಬೆ, ಬ್ಯಾಂಗಲೋರ್ ಮತ್ತು ಕಲ್ಕತ್ತ ನಗರಗಳು ತಮ್ಮ ಮೂಲ ದೇಶಿ ಹೆಸರುಗಳಾದ ಕ್ರಮವಾಗಿ ಮುಂಬೈ, ಬೆಂಗಳೂರು ಮತ್ತು ಕೋಲ್ಕತಗಳಿಗೆ ಮರಳಿದವು. ಬ್ರಿಟನ್ನಿಂದ ಭಾರತ ಸ್ವತಂತ್ರಗೊಂಡಿದೆ ಎನ್ನುವುದನ್ನು ಘೋಷಿಸುವುದಕ್ಕಾಗಿ ಹಾಗೂ ವಸಾಹತು ಯುಗದ ಭಾಷಾ ಸಂಕೇತಗಳ ಪಳೆಯುಳಿಕೆಗಳನ್ನು ನಾಶಪಡಿಸಲು ಭಾರತವು ಈ ಕ್ರಮವನ್ನು ತೆಗೆದುಕೊಂಡಿತ್ತು.
ಕಾನ್ಪೂರ್ ಮತ್ತು ಜಬಲ್ಪೂರ್ ನಗರಗಳ ಹೆಸರುಗಳನ್ನೂ ಸಾಂಪ್ರದಾಯಿಕ ಸ್ಪೆಲಿಂಗ್ ಮತ್ತು ಉಚ್ಚಾರಕ್ಕೆ ಅನುಗುಣವಾಗಿ ಕಾನ್ಪುರ ಮತ್ತು ಜಬಲ್ಪುರ ಎಂಬುದಾಗಿ ಪರಿವರ್ತಿಸಲಾಗಿತ್ತು. ಮರುನಾಮಕರಣವು ಜಗತ್ತಿನಾದ್ಯಂತ ವ್ಯಾಪಕವಾಗಿ ನಡೆಯುತ್ತಿದ್ದರೂ, ಹೆಚ್ಚಿನ ಪ್ರಕರಣಗಳಲ್ಲಿ ಅದು ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ವಿವಾದಾಸ್ಪದವಾಗಿದೆ. ಯಾಕೆಂದರೆ, ಮರುನಾಮಕರಣ ಎನ್ನುವುದು ನಕ್ಷೆ ಅಥವಾ ರಸ್ತೆಯಲ್ಲಿರುವ ನಾಮಫಲಕಗಳ ಮೇಲಿರುವ ಅಕ್ಷರವನ್ನಷ್ಟೇ ಬದಲಿಸುವುದಲ್ಲ, ಅದರ ಹಿಂದೆ ಹಲವಾರು ಲೆಕ್ಕಾಚಾರಗಳಿರುತ್ತವೆ. ಸ್ಥಳನಾಮಗಳು ದೇಶವೊಂದರ ಸಾಂಸ್ಕೃತಿಕ ವಲಯದ ಮಹತ್ವದ ಅಂಶವಾಗಿದೆ. ಅವುಗಳು ಪ್ರದೇಶದ ಪರಂಪರೆ ಮತ್ತು ಗುರುತನ್ನು ಸಹಜವಾಗಿಯೇ ದಾಖಲಿಸುತ್ತವೆ ಹಾಗೂ ಪ್ರತಿಬಿಂಬಿಸುತ್ತವೆ. ಸ್ಥಳನಾಮಗಳನ್ನು ಬದಲಿಸುವುದೆಂದರೆ, ಹೆಚ್ಚಿನ ಸಂದರ್ಭಗಳಲ್ಲಿ ಇತಿಹಾಸವನ್ನು ಮರುರಚಿಸಿದಂತೆ. ಹಾಗಾಗಿ, ಮರುನಾಮಕರಣವು ಯಾವತ್ತೂ ಬಿಸಿ ಚರ್ಚೆಯ ವಿಷಯವೇ ಆಗಿದೆ.
ಇತ್ತೀಚಿನ, ಹೆಸರು ಬದಲಿಸುವ ಪ್ರಯತ್ನವೊಂದು ಹೆಸರು ಬದಲಿಸುವುದಕ್ಕಿಂತಲೂ ಹೆಚ್ಚಾಗಿದೆ. ಸಾಂಪ್ರದಾಯಿಕ ‘ಹಿಪ್ಪೋಕ್ರಟಿಕ್ ಪ್ರತಿಜ್ಞೆ’ಯ ಬದಲಿಗೆ ‘ಚರಕ ಶಪಥ’ವನ್ನು ಜಾರಿಗೆ ತರಬೇಕು ಎಂಬುದಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗವು ವೈದ್ಯಕೀಯ ಕಾಲೇಜುಗಳಿಗೆ ಸೂಚಿಸಿದೆ. ಈ ಪ್ರಸ್ತಾವವನ್ನು ಎಲ್ಲ ವೈದ್ಯಕೀಯ ಕಾಲೇಜುಗಳಿಗೆ ಕಳುಹಿಸಿ ಅವರ ಪ್ರತಿಕ್ರಿಯೆಗಳನ್ನು ಕೇಳಲಾಗಿದೆ. ಆದರೆ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಎನ್ಎಮ್ಸಿಯು ಆಧುನಿಕ ವೈದ್ಯಕೀಯದ ಗುರುತನ್ನು ಅಳಿಸಿ ಹಾಕಲು ಹಾಗೂ ಅದರ ಜಾಗದಲ್ಲಿ ಭಿನ್ನ ವೈದ್ಯಕೀಯ ವ್ಯವಸ್ಥೆಯ ಪರಂಪರೆಯನ್ನು ತರಲು ಉದ್ದೇಶಿಸಿದೆ ಎಂದು ಅದು ಆರೋಪಿಸಿದೆ.
ಹಾಗಾಗಿ, ಈಗ ಹಿಪ್ಪೋಕ್ರಟಿಕ್ ಶಪಥವನ್ನು ಹೆಚ್ಚಾಗಿ ಬಳಸಲಾಗುತ್ತಿಲ್ಲ. ‘ಮೂಲ’ ಶಪಥವು ಗ್ರೀಸ್ನ 2,500 ವರ್ಷಗಳ ಹಿಂದಿನ ‘ಕಾರ್ಪಸ್ ಆಫ್ ಹಿಪ್ಪೋಕ್ರಟಿಸ್’ ಎಂಬ ಗ್ರಂಥದಿಂದ ಪಡೆದುಕೊಳ್ಳಲಾಗಿದೆ. ಆದರೆ, ಈಗ ಸ್ವೀಕರಿಸಲಾಗುತ್ತಿರುವ ಪ್ರಮಾಣವು ವಿಶ್ವ ವೈದ್ಯಕೀಯ ಅಸೋಸಿಯೇಶನ್ (ಡಬ್ಲುಎಮ್ಎ)ನ ವೈದ್ಯರ ಪ್ರತಿಜ್ಞೆಯ ಇತ್ತೀಚಿನ ರೂಪವಾಗಿದೆ. ಅದನ್ನು 1948ರಲ್ಲಿ, ಎರಡನೇ ಮಹಾಯುದ್ಧದ ಬಳಿಕ ಜಿನೇವ ಸಮ್ಮೇಳನದಲ್ಲಿ ಪ್ರಕಟಿಸಲಾಯಿತು. ಕಳೆದ ಏಳು ದಶಕಗಳ ಅವಧಿಯಲ್ಲಿ ಅದನ್ನು 5 ಬಾರಿ ತಿದ್ದುಪಡಿ ಮಾಡಲಾಗಿದೆ. ಕೊನೆಯ ಬಾರಿ ತಿದ್ದುಪಡಿ ಆಗಿದ್ದು 2017ರಲ್ಲಿ.
ಚರಕ ಶಪಥದಲ್ಲಿ ಹೀಗೆ ಆರಂಭಗೊಳ್ಳುತ್ತದೆ: ‘‘ಶಿಕ್ಷಕರು ಪವಿತ್ರ ಅಗ್ನಿ, ಬ್ರಾಹ್ಮಣರು ಮತ್ತು ವೈದ್ಯರ ಸಮ್ಮುಖದಲ್ಲಿ ಶಿಷ್ಯರಿಗೆ ಬೋಧಿಸಬೇಕು.....’’. ‘‘ದನಗಳು ಮತ್ತು ಬ್ರಾಹ್ಮಣರಿಂದ ಆರಂಭಗೊಂಡು ಎಲ್ಲ ಜೀವಿಗಳ ಕ್ಷೇಮಕ್ಕಾಗಿ ನೀವು ಪ್ರಾರ್ಥಿಸಬೇಕು’’ ಎಂಬುದಾಗಿ ಬಳಿಕ ಅದು ಹೇಳುತ್ತದೆ.
ಇದರ ಪರಿಷ್ಕೃತ ಮಾದರಿ ಹೀಗೆ ಆರಂಭಗೊಳ್ಳುತ್ತದೆ: ‘‘ಓ ದ್ವಿಜ (ಎರಡು ಬಾರಿ ಜನಿಸಿದವ)! ಪವಿತ್ರ ಅಗ್ನಿಯ ಉಪಸ್ಥಿತಿಯಲ್ಲಿ ಪೂರ್ವಕ್ಕೆ ಮುಖ ಮಾಡುತ್ತಾ...’’. ಚರಕ ಶಪಥದ ಒಂದು ಸಂಹಿತೆ ಹೀಗೆ ಹೇಳುತ್ತದೆ: ‘‘ನಾನು (ಅದರಲ್ಲೂ ಮುಖ್ಯವಾಗಿ ಪುರುಷ ವೈದ್ಯ) ಓರ್ವ ಮಹಿಳೆಗೆ ಆಕೆಯ ಗಂಡ ಅಥವಾ ಸಮೀಪದ ಸಂಬಂಧಿಯ ಸಮ್ಮುಖದಲ್ಲಿ ಮಾತ್ರ ಚಿಕಿತ್ಸೆ ನಿಡುತ್ತೇನೆ.’’ ಇನ್ನೊಂದು ಸಂಹಿತೆ ಹೀಗೆ ಹೇಳುತ್ತದೆ: ‘‘ನನ್ನ ಬಟ್ಟೆ ಉತ್ತಮವಾಗಿರಬೇಕು ಹಾಗೂ ಜನರು ಮೆಚ್ಚುವಂತಿರಬೇಕು ಹಾಗೂ ವ್ಯಕ್ತಿತ್ವವು ವಿಶ್ವಾಸ ಹುಟ್ಟಿಸುವಂತಿರಬೇಕು. ನಾನು ಯಾವಾಗಲೂ ಸಿಹಿ, ಶುದ್ಧ, ಸರಿಯಾದ, ಆಹ್ಲಾದಕರ, ಸತ್ಯದ, ಉಪಯೋಗವಾಗುವ ಮತ್ತು ನಯವಾದ ಮಾತುಗಳನ್ನು ಆಡಬೇಕು. ನನ್ನ ಹಿಂದಿನ ಅನುಭವ ಬಳಸಿಕೊಂಡು ನನ್ನ ಸಮಯ ಮತ್ತು ಸ್ಥಳವನ್ನು ಯಾವತ್ತೂ ಮನಸ್ಸಿನಲ್ಲಿಟ್ಟುಕೊಳ್ಳುತ್ತೇನೆ’’.
ಇವು ಪ್ರತಿಗಾಮಿ ಮತ್ತು ಜಾತಿವಾದಿ ಪದಪುಂಜಗಳು.
ಹಿಪ್ಪೊಕ್ರಟಿಕ್ ಪ್ರತಿಜ್ಞೆಯನ್ನು ಬದಲಿಸಬೇಕೆನ್ನುವುದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ತುಂಬಾ ಹಿಂದಿನ ಬೇಡಿಕೆಯಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲು ಆರ್ಎಸ್ಎಸ್ ಈ ಹಿಂದೆಯೂ ಕಾರ್ಯಕ್ರಮಗಳನ್ನು ಏರ್ಪಡಿಸಿತ್ತು. ಆರ್ಎಸ್ಎಸ್ಗೆ ಸೇರಿರುವ ನ್ಯಾಶನಲ್ಮೆಡಿಕೋಸ್ ಆರ್ಗನೈಸೇಶನ್ ಹಲವು ವರ್ಷಗಳಿಂದ ಗುಜರಾತ್ ಮತ್ತು ಇತರ ಕೆಲವು ರಾಜ್ಯಗಳಲ್ಲಿ ವಿದ್ಯಾರ್ಥಿಗಳಿಗೆ ಅನೌಪಚಾರಿಕವಾಗಿ ಸ್ಥಳೀಯ ಪ್ರತಿಜ್ಞಾವಿಧಿಯನ್ನು ಬೋಧಿಸಿಕೊಂಡು ಬಂದಿದೆ.
ಮಹರ್ಷಿ ಚರಕ ಭಾರತೀಯ ವೈದ್ಯರಿಗೆ ಅರ್ಹ ಮಾದರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆಯುರ್ವೇದಿಕ್ ವೈದ್ಯರ ಸಮೂಹದಲ್ಲಿ ಅದು ಸುಲಭವಾಗಿ ಸ್ವೀಕಾರಾರ್ಹವೂ ಆಗಬಹುದು. ಆದರೆ, ಅಂತಿಮವಾಗಿ, ಪ್ರತಿಜ್ಞಾವಿಧಿಯೊಂದನ್ನು ಬದಲಿಸುವುದು ವೈದ್ಯಕೀಯ ಶಿಕ್ಷಣವನ್ನು ಸುಧಾರಿಸುವುದಕ್ಕಿಂತ ಸುಲಭ. ಒಂದು ನಗರದ ಮೂಲಸೌಕರ್ಯವನ್ನು ಸುಧಾರಿಸುವುದಕ್ಕಿಂತ ಅದರ ಹೆಸರನ್ನು ಬದಲಿಸುವುದು ತುಂಬಾ ಸುಲಭ. ಸರಕಾರವು ಹೆಸರುಗಳು ಮತ್ತು ಚಿಹ್ನೆಗಳನ್ನು ಬದಲಿಸಲು ಹೊರಟಿದೆ; ಗುಣಮಟ್ಟವನ್ನಲ್ಲ.
ಕೃಪೆ: countercurrents