"ವಿವಿಧ ಧರ್ಮಗಳ ಜನರು ಸೌಹಾರ್ದದಿಂದ ಬದುಕುವ ಏಕೈಕ ನಾಡು ಭಾರತ": ಕೇಂದ್ರ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್
"72 ಪಂಗಡಗಳ ಮುಸ್ಲಿಮರು ನಮ್ಮ ದೇಶದಲ್ಲಿದ್ದಾರೆ"
ವಡೋದರಾ: "ಭಾರತವು ವಿವಿಧತೆಯಲ್ಲಿ ಏಕತೆಯ ನಾಡಾಗಿದ್ದು, ಈ ವೈವಿಧ್ಯತೆಯು ಇಲ್ಲಿರುವ ವಿವಿಧ ಧರ್ಮಗಳ ನಡುವೆ ಯಾವುದೇ ಸಂಘರ್ಷಗಳನ್ನು ಉಂಟುಮಾಡುವುದಿಲ್ಲ" ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದ್ದಾರೆ.
ಇಲ್ಲಿನ ಸ್ವಾಮಿನಾರಾಯಣ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಸಿಂಗ್, "ತನ್ನದೇ ಆದ ಸಂಸ್ಕೃತಿ ಮತ್ತು ಇತಿಹಾಸವನ್ನು ಸಂರಕ್ಷಿಸದೆ ಮತ್ತು ಅರ್ಥಮಾಡಿಕೊಳ್ಳದೆ ಯಾವುದೇ ನಾಗರಿಕತೆಯು ಶ್ರೇಷ್ಠವಾಗುವುದಿಲ್ಲ" ಎಂದು ಹೇಳಿದರು.
“ನಮ್ಮ ದೇಶದಲ್ಲಿರುವ ವೈವಿಧ್ಯತೆಯು ಎಂದಿಗೂ ಸಂಘರ್ಷಗಳಿಗೆ ಕಾರಣವಾಗಲಿಲ್ಲ. ವಿವಿಧ ಧರ್ಮಗಳ ಜನರು ಸೌಹಾರ್ದತೆಯಿಂದ ಬದುಕುವ ವಿಶ್ವದ ಏಕೈಕ ದೇಶವಾಗಿದೆ ಭಾರತ. ಇದು ವಿಶ್ವದಲ್ಲಿಯೇ ಅತ್ಯಧಿಕವಾಗಿರುವ, ʼ72 ಪಂಗಡಗಳʼ ಮುಸ್ಲಿಮರನ್ನು ನೀವು ನೋಡಬಲ್ಲ ಭೂಮಿಯಾಗಿದೆ ಭಾರತ. ಅತ್ಯಂತ ಹಳೆಯ ಚರ್ಚ್ ಅನ್ನು ಸಹ ನೀವು ಇಲ್ಲೇ ಕಾಣುತ್ತೀರಿ, ”ಎಂದು ಬಿಜೆಪಿಯ ಹಿರಿಯ ನಾಯಕ ರಾಜ್ ನಾಥ್ ಸಿಂಗ್ ಹೇಳಿದ್ದಾರೆ.
ಈಗಾಗಲೇ ಅವರ ಮಾತುಗಳು ಸಾಮಾಜಿಕ ತಾಣದಲ್ಲಿ ವ್ಯಂಗ್ಯಕ್ಕೀಡಾಗಿದ್ದು, ಹಲವರು ದೇಶದ ಪ್ರಸಕ್ತ ಪರಿಸ್ಥಿತಿ ಮತ್ತು ಹೇಳಿಕೆಯನ್ನು ತುಲನೆ ಮಾಡುವಂತೆ ಸಲಹೆ ನೀಡಿದ್ದಾರೆ.