ಚಾರ್ ಧಾಮ್ ಯಾತ್ರೆಗಾಗಿ ಕೇದಾರನಾಥ್ ಗೆ ಹೋಗುವ ಹಾದಿಯಲ್ಲಿ ಕಸದ ರಾಶಿ!
Photo:ANI
ಡೆಹ್ರಾಡೂನ್: ಉತ್ತರಾಖಂಡದ ಚಾರ್ ಧಾಮ್ ಯಾತ್ರೆಗೆ ಈ ವರ್ಷ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ. ಎರಡು ವರ್ಷಗಳ ವಿರಾಮದ ನಂತರ ಯಾತ್ರಾರ್ಥಿಗಳಿಗೆ ಮತ್ತೆ ತೆರೆಯಲಾದ ಚಾರ್ ಧಾಮ್ಗೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿರುವುದರಿಂದ ಪವಿತ್ರ ಕ್ಷೇತ್ರಗಳ ಮಾರ್ಗಗಳು ಪ್ಲಾಸ್ಟಿಕ್ ಸೇರಿದಂತೆ ಎಲ್ಲಾ ರೀತಿಯ ತ್ಯಾಜ್ಯದಿಂದ ಮಾರ್ಗಗಳು ತುಂಬಿವೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಹಿನ್ನಲೆಯಲ್ಲಿ ಭವ್ಯವಾದ ಹಿಮದಿಂದ ಆವೃತವಾದ ಪರ್ವತಗಳನ್ನು ಹೊಂದಿರುವ ದೊಡ್ಡ ಭೂಪ್ರದೇಶದಲ್ಲಿ ಹರಡಿರುವ ಅನೇಕ ಡೇರೆಗಳ ಫೋಟೋವನ್ನು ANI ಟ್ವೀಟ್ ಮಾಡಿದೆ.
ಆದರೆ, ಈ ಪ್ರದೇಶ ಬಿಸಾಡಿದ ಪ್ಲಾಸ್ಟಿಕ್ ವಸ್ತುಗಳಾದ ಬ್ಯಾಗ್, ಬಾಟಲ್ ಗಳು ಹಾಗೂ ಇತರೆ ತ್ಯಾಜ್ಯ ವಸ್ತುಗಳ ಸಹಿತ ಕಸದ ರಾಶಿಯಿಂದ ತುಂಬಿ ಹೋಗಿದ್ದು, ಬೃಹತ್ ಕಸದ ಗುಂಡಿಯಂತಾಗಿದೆ.
"ಕೇದಾರನಾಥಕ್ಕೆ ಹೋಗುವ ಹಾದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸದ ರಾಶಿಗಳು ಬಿದ್ದಿದ್ದು, ಚಾರ್ ಧಾಮ್ ಯಾತ್ರೆಗೆ ಭಕ್ತರು ಸೇರುತ್ತಿದ್ದಾರೆ"ಎಂದು ಸುದ್ದಿಸಂಸ್ಥೆ ANI ಟ್ವೀಟಿಸಿದೆ.
“ಕೇದಾರನಾಥದಂತಹ ಸೂಕ್ಷ್ಮ ಸ್ಥಳದಲ್ಲಿ ಪ್ಲಾಸ್ಟಿಕ್ ಕಸದ ರಾಶಿ ನಮ್ಮ ಪರಿಸರಕ್ಕೆ ಅಪಾಯಕಾರಿಯಾಗಿದೆ. ಇದು ಭೂಕುಸಿತಕ್ಕೆ ಕಾರಣವಾಗುವ ಸವೆತಕ್ಕೆ ಕಾರಣವಾಗುತ್ತದೆ. ನಾವು 2013 ರ ದುರಂತವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಹಾಗೂ ಜಾಗರೂಕರಾಗಿರಬೇಕು’’ ಎಂದು ಗರ್ವಾಲ್ ಸೆಂಟ್ರಲ್ ಯೂನಿವರ್ಸಿಟಿಯ ಭೌಗೋಳಿಕ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎಸ್.ನೇಗಿ ಹೇಳಿಕೆ ಉಲ್ಲೇಖಿಸಿ ANI ವರದಿ ಮಾಡಿದೆ.
Uttarakhand | Heaps of plastic waste & garbage pile up on the stretch leading to Kedarnath as devotees throng for Char Dham Yatra pic.twitter.com/l6th87mxD9
— ANI UP/Uttarakhand (@ANINewsUP) May 22, 2022