ಏಕರೂಪ ನಾಗರಿಕ ಸಂಹಿತೆ, ಜನಸಂಖ್ಯೆ ನಿಯಂತ್ರಣ ಕಾನೂನನ್ನು ತರುವಂತೆ ಪ್ರಧಾನಿ ಮೋದಿಗೆ ರಾಜ್ ಠಾಕ್ರೆ ಒತ್ತಾಯ
ಮುಂಬೈ: ಏಕರೂಪ ನಾಗರಿಕ ಸಂಹಿತೆ ಹಾಗೂ ಜನಸಂಖ್ಯೆ ನಿಯಂತ್ರಣ ಕಾನೂನನ್ನು ತರುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ ಎಸ್ ) ಮುಖ್ಯಸ್ಥ ರಾಜ್ ಠಾಕ್ರೆ ಮನವಿ ಮಾಡಿದರು.
ಮೇ 22 ರಂದು ಪುಣೆಯಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಠಾಕ್ರೆ ಮಾತನಾಡಿದರು.
"ಏಕರೂಪ ನಾಗರಿಕ ಸಂಹಿತೆಯನ್ನು ಶೀಘ್ರವಾಗಿ ತರಲು ನಾನು ಪ್ರಧಾನಿಯವರನ್ನು ವಿನಂತಿಸುತ್ತೇನೆ. ಜನಸಂಖ್ಯೆ ನಿಯಂತ್ರಣದ ಬಗ್ಗೆ ಕಾನೂನನ್ನು ತರಬೇಕು ಹಾಗೂ ಔರಂಗಾಬಾದ್ ನಗರದ ಹೆಸರನ್ನು ಸಂಭಾಜಿನಗರ ಎಂದು ಬದಲಾಯಿಸಬೇಕು" ಎಂದು ಠಾಕ್ರೆ ಆಗ್ರಹಿಸಿದರು.
ರ್ಯಾಲಿಯಲ್ಲಿ ಎಂಎನ್ಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು . ಈ ಸರಕಾರವು ಔರಂಗಾಬಾದ್ನ ಲೋಕಸಭಾ ಸ್ಥಾನವನ್ನು ಗೆಲ್ಲಲು ಎಐಎಂಐಎಂಗೆ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
“ಎಂವಿಎ ಆಡಳಿತ ಪಕ್ಷವು ಎಐಎಂಐಎಂ ತನ್ನ ರೆಕ್ಕೆಗಳನ್ನು ಹರಡಲು ಅನುವು ಮಾಡಿಕೊಡುತ್ತಿದೆ. ಎಐಎಂಐಎಂ ಅಭ್ಯರ್ಥಿ (ಇಮ್ತಿಯಾಝ್ ಜಲೀಲ್) ಶಿವಸೇನಾ ಅಭ್ಯರ್ಥಿಯನ್ನು (ಚಂದ್ರಕಾಂತ್ ಖೈರೆ) ಸೋಲಿಸಿ ಔರಂಗಾಬಾದ್ನಲ್ಲಿ ಸಂಸದರಾಗಿ ಆಯ್ಕೆಯಾಗಿರುವುದು ಆಘಾತಕಾರಿಯಾಗಿದೆ’’ ಎಂದರು.