ವಿಶ್ವನಾಥ್ ಇಡೀ ವಿಶ್ವಕ್ಕೆ ಅಡ್ವೈಸ್ ಮಾಡ್ತಾರೆ: ಸಚಿವ ಎಸ್.ಟಿ.ಸೋಮಶೇಖರ್ ವ್ಯಂಗ್ಯ
ಮೈಸೂರು,ಮೇ.22: 'ನೀತಿ ಸಂಹಿತೆ ಜಾರಿಯಾಗಿರುವ ಕಾರಣ ತಾವು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ಕೊಟ್ಟಿಲ್ಲ. ಉಸ್ತುವಾರಿ ಮಂತ್ರಿಗಳು ಎಲ್ಲಿದ್ದಾರೆ? ಎಂದು ಇಡೀ ವಿಶ್ವಕ್ಕೆ ಅಡ್ವೈಸ್ ಮಾಡುವ ವಿಶ್ವನಾಥ್ ಅವರಿಗೆ ಈ ವಿಷಯ ಗೊತ್ತಿಲ್ಲವೆ?' ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಳೆಯಿಂದ ಮೈಸೂರು ಜಿಲ್ಲೆಯಲ್ಲಿ ಉಂಟಾಗಿರುವ ಬೆಳೆ ಹಾನಿ, ಮನೆ ಕುಸಿತ ಸೇರಿದಂತೆ ಇನ್ನಿತರ ಹಾನಿಗೀಡಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡುತ್ತಿದ್ದಾರೆ. ನಷ್ಟಗಳ ಬಗ್ಗೆ ಮುಖ್ಯಮಂತ್ರಿಗಳು ವರ್ಚುವೆಲ್ ಮೂಲಕ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. 48 ಗಂಟೆಗಳಲ್ಲಿ ಪರಿಹಾರ ಒದಗಿಸಲಾಗುವುದು ಎಂದರು.
ವಿಶ್ವನಾಥ್ ಅವರು ವಿಶ್ವಕ್ಕೆ ಅಡ್ವೈಸ್ ಮಾಡುತ್ತಾರೆ. ಅವರು ಜಿಲ್ಲಾ ಮಂತ್ರಿಯಾಗಿದ್ದ ಜಿಲ್ಲೆಯಲ್ಲಿ ಎಷ್ಟು ಪ್ರವಾಸ ಮಾಡಿದ್ದಾರೊ ನನಗೆ ಗೊತ್ತಿಲ್ಲ, ಆದರೆ ಅವರಗಿಂತ ಹೆಚ್ಚಾಗಿ ನಾನು ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಜಿಲ್ಲೆಯ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ ಪ್ರತಿ ಬಾರಿಯೂ ಜಿಲ್ಲೆಗೆ ಭೇಟಿ ನೀಡುತ್ತಿದ್ದೇನೆ ಎಂದು ತಿರುಗೇಟು ನೀಡಿದರು.
ಜೂನ್,21 ರಂದು ಯೋಗ ದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಭೇಟಿ ನೀಡಲಿದ್ದು, ಜಿಲ್ಲೆಗೆ ವಿಶೇಷ ಅನುದಾನ ಘೋಷಿಸಿರುವ ಪ್ರಧಾನಿಗಳಿಗೆ ಅಭಿನಂದನೆಗಳು ಎಂದರು.