ಉಡುಪಿ ಮಾವು ಮೇಳದ ಎರಡನೇ ದಿನ ಉತ್ತಮ ಸ್ಪಂದನೆ
ಉಡುಪಿ : ಉಡುಪಿ ಜಿಲ್ಲಾಡಳಿತ, ಜಿಪಂ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ರಾಮನಗರ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕರ ಸಂಸ್ಥೆ ಆಶ್ರಯದಲ್ಲಿ ದೊಡ್ಡಣಗುಡ್ಡೆ ಶಿವಳ್ಳಿ ತೋಟಗಾರಿಕೆ ತೋಟಗಾರಿಕೆ ಕ್ಷೇತ್ರದ ರೈತ ಸೇವಾ ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾದ ಮಾವು ಮೇಳದ ಎರಡನೇ ದಿನವಾದ ರವಿವಾರ ಉಡುಪಿ ನಾಗರೀಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ರಜೆಯ ಹಿನ್ನೆಲೆಯಲ್ಲಿ ಮಾವು ಮೇಳಕ್ಕೆ ಬೆಳಗ್ಗೆಯಿಂದ ಸಂಜೆಯವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿದ್ದು, ವಿವಿಧ ತಳಿಯ ಮಾಚು ರುಚಿ ನೋಡಿ ಖರೀದಿಸಿದರು. ಎರಡು ದಿನಗಳಲ್ಲಿ ಸುಮಾರು ೨೦ ಟನ್ವರೆಗೂ ಮಾವು ಮಾರಾಟವಾಗಿದ್ದು, ಅಂದಾಜು ೧೬ಲಕ್ಷ ರೂ.ವರೆಗೆ ಅಧಿಕ ವಹಿವಾಟು ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೋಮವಾರವೂ ಮಾವು ಮೇಳ ನಡೆಯಲಿದೆ.
ಬೆಳೆಗಾರರು ರಾಮನಗರ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕರ ಸಂಸ್ಥೆ ಸ್ಥಾಪಿಸಿಕೊಂಡು ಬೆಂಗಳೂರು, ಮೈಸೂರು ಭಾಗದಲ್ಲಿ ನಡೆಯುವ ಮಾವು ಮೇಳಕ್ಕೆ ಹೋಗಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಾರೆ. ಇದೀಗ ಉಡುಪಿಯಲ್ಲಿ ಮೊದಲ ಬಾರಿಗೆ ಮಾವು ಮೇಳ ಏರ್ಪಡಿಸಲಾಗಿದ್ದು, ತೋಟಗಾರಿಕೆ, ಉಡುಪಿ ಜಿಲ್ಲಾಡಳಿತ ಮಾವು ಮಾರಾಟಕ್ಕೆ ಉತ್ತಮ ವೇದಿಕೆ ಮಾಡಿಕೊಟ್ಟಿದೆ. ಇಲ್ಲಿ ಎಲ್ಲ ಬಗೆಯ ಹಣ್ಣುಗಳಿಗೂ ಬೇಡಿಕೆ ಇದ್ದು, ಅಲ್ಪೋನ್ಸ್, ಸಕ್ಕರೆ ಗುತ್ತಿ, ಮಲಗೋವ ಖಾಲಿಯಾಗಿದೆ ಎಂದು ಮಾವು ಬೆಳೆಗಾರ ರಾಮನಗರದ ಸಿದ್ದರಾಜು ತಿಳಿಸಿದ್ದಾರೆ.