ಜ್ಞಾನವಾಪಿ, ತಾಜ್ ಮಹಲ್ ಪ್ರಕರಣಗಳು; ದ್ವೇಷ ಭಾವನೆ ವಿಸ್ತರಣೆಯ ತಂತ್ರ: ಡಾ. ಇಲ್ಯಾಸ್
ಮಂಗಳೂರು : ಬಾಬರಿ ಮಸೀದಿ ವಿವಾದದ ಬಳಿಕ ಸಂಘ ಪರಿವಾರಕ್ಕೆ ಜನರಲ್ಲಿ ದ್ವೇಷ ಭಾವನೆ ಕೆರಳಿಸಲು ಈಗ ಜ್ಞಾನವಾಪಿ, ತಾಜ್ಮಹಲ್, ಹಿಜಾಬ್ ಇತ್ಯಾದಿ ವಿಚಾರಗಳನ್ನು ಕೈಗೆತ್ತಿಕೊಂಡು ವಿವಾದ ಸೃಷ್ಟಿ ಸುತ್ತಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಡಾ. ಎಸ್.ಕ್ಯೂ.ಆರ್. ಇಲ್ಯಾಸ್ ಆರೋಪಿಸಿದ್ದಾರೆ.
ಮಂಗಳೂರಿಗೆ ಆಗಮಿಸಿದ ಅವರು ಇಂದು ಜಿಲ್ಲೆಯ ಪಕ್ಷದ ಮುಖಂಡರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ದೇಶದಲ್ಲಿ ಇಷ್ಟೆಲ್ಲ ದ್ವೇಷ ಕಾರುವ ಕೃತ್ಯ ನಡೆಯುತ್ತಿದ್ದರೂ ಸರಕಾರ ಏನೂ ಕ್ರಮ ಕೈಗೊಳ್ಳದೆ ಏಕೆ ಮೌನವಾಗಿದೆ? ಇದನ್ನು ತಡೆಯುವುದು ಸರಕಾರದ ಕೆಲಸವಲ್ಲವೇ ಎಂದು ಅವರು ಪ್ರಶ್ನಿಸಿದರು.
ಭಾರತಕ್ಕೆ ಶ್ರೀಲಂಕಾದ ಸ್ಥಿತಿ ಬರುವ ಎಲ್ಲಾ ಸಾಧ್ಯತೆ ಇದೆ. ಬಿಜೆಪಿ ಸರಕಾರಗಳು ಧರ್ಮ, ಕೋಮು ದ್ವೇಷವನ್ನು ಇದೇ ರೀತಿ ಮುಂದುವರಿಸಿದರೆ ಶ್ರೀಲಂಕಾದ ಪರಿಸ್ಥಿತಿ ಭಾರತಕ್ಕೂ ಬರುವ ಆತಂಕ ಕಾಡುತ್ತಿದೆ. ಶ್ರೀಲಂಕಾದಲ್ಲಿ ಮೊದಲು ತಮಿಳಿಯನ್ನರ ಮೇಲೆ, ನಂತರ ಮುಸ್ಲಿಮರ ವಿರುದ್ಧ ದ್ವೇಷ ಭಾವನೆ ಹರಡಿಸಲಾಯಿತು. ಇದರಿಂದಲೇ ಶ್ರೀಲಂಕಾದ ಪರಿಸ್ಥಿತಿ ಅಧೋಗತಿಗೆ ಇಳಿದಿದೆ. ಇದೀಗ ಭಾರತದಲ್ಲಿ ನರೇಂದ್ರ ಮೋದಿ ಮತೀಯ ದ್ವೇಷವನ್ನು ಹರಡುತ್ತಿದ್ದಾರೆ. ದೇಶದ ಸಮಸ್ಯೆಗಳು, ನಿರುದ್ಯೋಗ, ಬಡತನದ ಬಗ್ಗೆ ಮಾತನಾಡುತ್ತಿಲ್ಲ. ಶ್ರೀಲಂಕಾ ಗತಿ ಭಾರತಕ್ಕೆ ಬಾರದಿರಲು ಕೂಡಲೆ ಇಂಥ ಕೃತ್ಯಗಳನ್ನು ನಿಲ್ಲಿಸಲಿ ಎಂದು ಇಲ್ಯಾಸ್ ಆಗ್ರಹಿಸಿದರು.
ಬುರ್ಖಾ ಹೊಸ ವಿಚಾರವೇ ಅಲ್ಲ. ನೂರಾರು ವರ್ಷಗಳಿಂದ ಈ ಉಡುಗೆ ಸಂಸ್ಕೃತಿಯಿದೆ. ಮುಸ್ಲಿಮರು ಮಾತ್ರವಲ್ಲದೆ, ಹಿಂದೂಗಳಲ್ಲೂ ತಲೆವಸ್ತ್ರ ಹಾಕುತ್ತಾರೆ. ಇಷ್ಟು ಸಮಯ ಯಾರಿಗೂ ತೊಂದರೆ ಯಾಗದ ವಿಚಾರವನ್ನು ಈಗ ಎಬ್ಬಿಸಲು ಕಾರಣವೇನು ಜನರನ್ನು ಅನ್ನ, ಆಹಾರ, ಅಭಿವೃದ್ಧಿ ಯಂತಹದಂತಹ ಮೂಲಭೂತ ಸಮಸ್ಯೆ ಗಳಿಂದ ದೂರ ಉಳಿಯುವಂತೆ ಮಾಡುವ ಉದ್ದೇಶವಿದೆಯೇ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಸಂಸತ್ ನಲ್ಲಿ ಈ ಬಗ್ಗೆ ಚರ್ಚೆಯನ್ನೇ ಮಾಡದೆ ಬಿಲ್ಗಳನ್ನು ಪಾಸ್ ಮಾಡುತ್ತಿದೆ. ಚುನಾವಣಾ ಆಯೋಗ, ಆರ್ಬಿಐನಂತಹ ಸ್ವಾಯತ್ತ ಸಂಸ್ಥೆಗಳ ಕಾರ್ಯ ನಿರ್ವಹಣೆಯಲ್ಲಿ ಮೂಗು ತೂರಿಸುತ್ತಿದೆ. ಬೆಲೆ ಏರಿಕೆ ಹಿಂದೆಂದೂ ಇಲ್ಲದಷ್ಟು ಜನಸಾಮಾನ್ಯರನ್ನು ಕಾಡುತ್ತಿದೆ. ವರ್ಷ 2 ಕೋಟಿ ಉದ್ಯೋಗ ಆಮಿಷ ನೀಡಿದ ನರೇಂದ್ರ ಮೋದಿ ಕೊಟ್ಟಿದ್ದು ಕೇವಲ 10 ಲಕ್ಷ ಉದ್ಯೋಗ. ಇಂಥ ಸರ್ಕಾರ ಹಿಂದೆಂದೂ ಬಂದಿರಲಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ದ ಉಳಿವಿಗಾಗಿ ಜಾತ್ಯತೀತ ಪಕ್ಷಗಳು ಒಂದು ವೇದಿಕೆಯನ್ನು ರಚಿಸಿ ಕೊಂಡು ಬಿಜೆಪಿ ಯನ್ನು ಎದುರಿಸಬೇಕಾಗಿದೆ. ಬಿಜೆಪಿ ಕಿತ್ತೊಗೆಯಲು ಜಾತ್ಯತೀತ ಪಕ್ಷಗಳು ಒಗ್ಗಟ್ಟಾಗಬೇಕಾದ ಅಗತ್ಯವಿದೆ ಎಂದು ಡಾ.ಇಲ್ಯಾಸ್ ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣಿ ಅರ್ಮಗಂ, ಪಕ್ಷದ ರಾಜ್ಯಾಧ್ಯಕ್ಷ ತಾಹಿರ್ ಹುಸೈನ್, ಉಪಾಧ್ಯಕ್ಷ ಶ್ರೀಕಾಂತ ಸಾಲ್ಯಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್, ಜಿಲ್ಲಾಧ್ಯಕ್ಷ ಸರ್ಪಾಝ್ ಮೊದಲಾದವರು ಉಪಸ್ಥಿತರಿದ್ದರು.