ಕಲಬುರಗಿ | ಇನ್ನು ಮುಂದೆ ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲುಗಳ ಎದುರು ಪ್ರತಿಭಟನೆ ಮಾಡುವಂತಿಲ್ಲ
ಕಲಬುರಗಿ, ಜೂ.23: ಇನ್ನು ಮುಂದೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯ ಮೆಟ್ಟಿಲುಗಳ ಎದುರು ಮುಷ್ಕರ, ಪ್ರತಿಭಟನೆ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಬುಧುವಾರ ಆದೇಶ ಹೊರಡಿಸಿದ್ದಾರೆ.
ಧರಣಿ, ಸತ್ಯಾಗ್ರಹ, ಮುಷ್ಕರ ನಿಮಿತ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದು ಕಚೇರಿ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುವುದರಿಂದ ಕಚೇರಿಗೆ ಬರುವವರಿಗೆ ಮತ್ತು ಕಚೇರಿ ಕೆಲಸಕ್ಕೆ ಅಡಚಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುಗಮ ಕಾರ್ಯನಿರ್ವಹಣೆ ಮತ್ತು ಶಾಂತಿ, ಸುವ್ಯವಸ್ಥೆ ಕಾಪಾಡಲು ಆವರಣ ಪ್ರವೇಶಕ್ಕೆ ತಡೆ ನೀಡಿ ಮೆಟ್ಟಿಲುಗಳ ಮುಂದೆ ಪ್ರತಿಭಟನೆ, ಮುಷ್ಕರ, ಸತ್ಯಾಗ್ರಹ ಕೈಗೊಳ್ಳದಂತೆ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.
ಪ್ರತಿಭಟನೆ, ಮುಷ್ಕರನಿರತ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಅನುಕೂಲವಾಗುವಂತೆ ಡಿ.ಸಿ. ಕಚೇರಿಗೆ ಪ್ರವೇಶಿಸುವ ಎಡಭಾಗದ ಪ್ರವೇಶ ದ್ವಾರದಲ್ಲಿ (ನಗರಾಭಿವೃದ್ಧಿ ಕಚೇರಿ ಪಕ್ಕದಲ್ಲಿ) ಪ್ರತ್ಯೇಕವಾಗಿ ಸ್ಥಳಾವಕಾಶ ನೀಡಿದ್ದು, ಅಲ್ಲಿಯೆ ಮನವಿ ಪತ್ರ ಸಲ್ಲಿಸುವಂತೆ ಡಿ.ಸಿ. ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.