ರಾಜ್ಯ ಸರಕಾರ ವಿರುದ್ಧ ಶೇ.40 ಕಮಿಷನ್ ಆರೋಪ: ದಾಖಲೆ ನೀಡುವಂತೆ ಗುತ್ತಿಗೆದಾರರ ಸಂಘಕ್ಕೆ ಕೇಂದ್ರ ಗೃಹ ಇಲಾಖೆ ಸೂಚನೆ
ಕೆಂಪಣ್ಣ - ಗುತ್ತಿಗೆದಾರರ ಸಂಘದ ಅಧ್ಯಕ್ಷ
ಬೆಂಗಳೂರು, ಜೂ.28: ರಾಜ್ಯ ಸರಕಾರದ ವಿರುದ್ಧ ಶೇ.40 ರಷ್ಟು ಕಮಿಷನ್ ಆರೋಪ ಮಾಡಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರಿಗೆ ಕೇಂದ್ರ ಗೃಹ ಇಲಾಖೆ ಆರೋಪ ಸಂಬಂಧ ದಾಖಲೆಗಳನ್ನು ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದೆ.
ಕೇಂದ್ರ ಗೃಹ ಇಲಾಖೆಯಿಂದ ಕರೆ ಬಂದಿದ್ದು, ಬೆಂಗಳೂರು ವಿಭಾಗದ ಕಚೇರಿಗೆ ಆಗಮಿಸಿ ದಾಖಲೆಗಳನ್ನು ನೀಡುವಂತೆ ಕೋರಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕೆಂಪಣ್ಣ, ತನಿಖೆ ಮಾಡುವುದಾದರೆ ಮಾತ್ರ ಪೂರಕ ದಾಖಲೆಗಳನ್ನು ನೀಡುತ್ತೇನೆ. ಸದ್ಯ ಕಮಿಷನ್ ಸಂಬಂಧ ಮಾಹಿತಿಯನ್ನು ನೀಡುತ್ತೇನೆ ಎಂದು ಮಾಹಿತಿ ನೀಡಿದರು.
ಏನಿದು ಪ್ರಕರಣ?: ಕೆಂಪಣ್ಣ ರಾಜ್ಯದಲ್ಲಿನ ಪ್ರಮುಖ ಇಲಾಖೆಗಳಲ್ಲಿನ ಶೇ.40%ರಷ್ಟು ಕಮಿಷನ್ ಅವ್ಯವಹಾರದ ಬಗ್ಗೆ ಆರೋಪಿಸಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು. ಈ ನಡುವೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋμï ಆತ್ಮಹತ್ಯೆ ಪ್ರಕರಣ ಭಾರೀ ಸದ್ದು, ಮಾಡಿತ್ತು. ಇದೀಗ ಕೇಂದ್ರ ಗೃಹ ಇಲಾಖೆಯೂ ಕೆಂಪಣ್ಣ ಅವರಿಂದ ದಾಖಲೆ ಕೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.