ಈದ್ಗಾ ಮೈದಾನ ವಿವಾದ; ದಾಖಲೆ ಕೊಟ್ಟರೆ ವಕ್ಫ್ ಬೋರ್ಡ್ಗೆ ಖಾತೆ: ಬಿಬಿಎಂಪಿ ಜಂಟಿ ಆಯುಕ್ತ ಶ್ರೀನಿವಾಸ್
ಫೈಲ್ ಚಿತ್ರ- ಈದ್ಗಾ ಮೈದಾನ
ಬೆಂಗಳೂರು, ಜೂ.28: ಚಾಮರಾಜಪೇಟೆಯ ಈದ್ಗಾ ಮೈದಾನವನ್ನು ಇದುವರೆಗೆ ಯಾರಿಗೂ ಖಾತೆ ಮಾಡಿ ಕೊಟ್ಟಿಲ್ಲ. ಆಯುಕ್ತರ ನಿರ್ದೇಶನದಂತೆ ವಕ್ಫ್ ಬೋರ್ಡ್ ಖಾತೆಗೆ ಅರ್ಜಿ ಸಲ್ಲಿಸಿದ್ದು, ಸೂಕ್ತ ದಾಖಲೆಗಳನ್ನು ಒದಗಿಸಿದರೆ, ಖಾತೆ ಮಾಡಿಕೊಡಲಾಗುವುದು ಎಂದು ಬಿಬಿಎಂಪಿ ಪಶ್ಚಿಮ ಜಂಟಿ ಆಯುಕ್ತ ಶ್ರೀನಿವಾಸ್ ಸ್ಪಷ್ಟಪಡಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಈದ್ಗಾ ಮೈದಾನವನ್ನು ವಕ್ಫ್ ಬೋರ್ಡ್ಗೆ ಖಾತೆ ಮಾಡಿಕೊಡಲಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಚಾಮರಾಜಪೇಟೆ ಮೈದಾನವನ್ನು ಇದುವರೆಗೆ ಯಾರಿಗೂ ಖಾತೆ ಮಾಡಿಕೊಟ್ಟಿಲ್ಲ. ವಕ್ಫ್ ಬೋರ್ಡ್ ಗೆಜೆಟ್ ನೋಟಿಫಿಕೇಷನ್ ಸಲ್ಲಿಸಿದೆ. ಜೊತೆಗೆ ಸೋಮವಾರ ಖಾತೆಗಾಗಿ ಅರ್ಜಿ ಸಲ್ಲಿಸಿದೆ. ಖಾತೆ ಮಾಡಿಕೊಡಲು ಪಾಲಿಕೆ ವಕ್ಫ್ ಬೋರ್ಡ್ಗೆ ಇನ್ನಷ್ಟು ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಿದೆ ಎಂದರು.
ಅರ್ಜಿ ಸಲ್ಲಿಸಿದ ಬಳಿಕ ಖಾತೆ ಮಾಡಿಕೊಡಲು 45 ದಿನಗಳವರೆಗೆ ಕಾಲಾವಕಾಶ ಇರಲಿದೆ. ಈ ಅವದಿಯಲ್ಲಿ ದಾಖಲೆಗಳನ್ನು ಸಲ್ಲಿಸಬೇಕಾಗಿರುತ್ತದೆ. ಸಮರ್ಪಕ ದಾಖಲೆಗಳನ್ನು ಸಲ್ಲಿಸದಿದ್ದಲ್ಲಿ, ಸರಕಾರದ ವಿವೇಚನೆಗೆ ಬಿಡಲಾಗುವುದು ಎಂದರು.