ಹೈಕೋರ್ಟ್ ಅಭಿಪ್ರಾಯ ಬೆಂಬಲಿಸಿ ಎಸಿಬಿ ವಿರುದ್ಧ ಆಪ್ ಪ್ರತಿಭಟನೆ; ಹಲವು ನಾಯಕರು ಪೊಲೀಸ್ ವಶಕ್ಕೆ
ಬೆಂಗಳೂರು, ಜೂ.30: ಎಸಿಬಿ ಕಚೇರಿಯು ಕಲೆಕ್ಷನ್ ಸೆಂಟರ್ ಆಗಿದೆ ಎಂಬ ಹೈಕೋರ್ಟ್ ಅಭಿಪ್ರಾಯವನ್ನು ಬೆಂಬಲಿಸಿ, ಎಸಿಬಿ ವಿರುದ್ಧ ಅದರ ಮುಖ್ಯ ಕಚೇರಿ ಎದುರು ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
‘ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೆಂದು ರಚನೆಯಾಗಿರುವ ಎಸಿಬಿಯೇ ಕಲೆಕ್ಷನ್ ಕೇಂದ್ರವಾಗಿದೆ ಎಂದು ಹೈಕೋರ್ಟ್ ಛೀಮಾರಿ ಹಾಕಿದೆ. ಹಾಗಾಗಿ ಕಳಂಕಿತ ಎಡಿಜಿಪಿಯನ್ನು ಎಸಿಬಿಯಿಂದ ವಜಾ ಮಾಡಿ ಪ್ರಾಮಾಣಿಕರನ್ನು ನೇಮಿಸಬೇಕು. ಹಾಗೆಯೇ ಈವರೆಗಿನ ದಾಳಿಗಳಲ್ಲಿ ಎಸಿಬಿಯು ವಶಪಡಿಸಿಕೊಂಡಿರುವ ದಾಖಲೆಗಳು, ಚಿನ್ನಾಭರಣಗಳನ್ನು ಅಧಿಕಾರಿಗಳಿಗೆ ಹಿಂದಿರುಗಿಸಿರುವ ಅಂಕಿ-ಅಂಶವನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆ ನಡೆಸಿದ ಎಎಪಿ ಮುಖಂಡರಾದ ಚನ್ನಪ್ಪಗೌಡ ನೆಲ್ಲೂರು ಮಾತನಾಡಿ, ಲೋಕಾಯುಕ್ತಕ್ಕೆ ಪರ್ಯಾಯವಾಗಿ ಎಸಿಬಿ ಅಸ್ತಿತ್ವಕ್ಕೆ ಬಂದು ಆರು ವರ್ಷಗಳಾಗಿದ್ದು, ಎಸಿಬಿ ದಾಳಿಗೆ ಒಳಗಾದ ಭ್ರಷ್ಟರು ಅಲ್ಲಿನ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸುಲಭವಾಗಿ ಪಾರಾಗುತ್ತಿದ್ದಾರೆ. ಈವರೆಗೆ ಕೇವಲ ನಾಲ್ಕು ಮಂದಿಗೆ ಎಸಿಬಿಯಿಂದ ಶಿಕ್ಷೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಘೋಷಿತ ಆಸ್ತಿ ಕೇಸ್ಗಳಿಗೆ ಸಂಬಂಧಿಸಿದಂತೆ 1000ಕ್ಕೂ ಹೆಚ್ಚಿನ ಸರಕಾರಿ ಅಧಿಕಾರಿಗಳು ಮತ್ತು ನೌಕರರ ಮೇಲೆ ಎಸಿಬಿ ದಾಳಿ ನಡೆಸಿದೆ. ಆದರೆ ದಾಳಿಗೊಳಗಾದ ಅಧಿಕಾರಿಗಳು ಏನೂ ಆಗಿಲ್ಲ ಎನ್ನುವಂತೆ ಕೆಲವೇ ದಿನಗಳಲ್ಲಿ ಮತ್ತೆ ಅದೇ ಕಚೇರಿ, ಅದೇ ಹುದ್ದೆಗೆ ಹಾಜರಾಗುತ್ತಿದ್ದಾರೆ. ಎಸಿಬಿಯು ಮೇಲ್ಮಟ್ಟದ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಮಾಡದೇ ಕೇವಲ ಕೆಳ ಹಂತದ ಅಧಿಕಾರಿಗಳನ್ನು ಗುರಿಯಾಗಿಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಎಎಪಿ ಕಾರ್ಯಕರ್ತರು ಎಸಿಬಿ ವಿರುದ್ಧ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಘೋಷಣೆ ಕೂಗಿದರು. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.