ಜೋಶಿಯವರು ಕಣ್ಣಪಟ್ಟಿ ಬಿಚ್ಚಿ ಸತ್ಯ ತಿಳಿಯುವ ಪ್ರಯತ್ನ ಮಾಡಲಿ
ಪ್ರಹ್ಲಾದ ಜೋಶಿಯವರ ಹೇಳಿಕೆಗೆ ಪ್ರತಿಕ್ರಿಯೆ
ಭಾಗ-2
ದೇಶದ ಆರ್ಥಿಕ ಪರಿಸ್ಥಿತಿ ವಿಪರೀತ ಹದಗೆಟ್ಟಿದೆ. ದೇಶದಲ್ಲಿ ಸಂತೋಷವೆಂಬುದು ತುಂಬಿ ತುಳುಕಾಡುತ್ತಿದ್ದರೆ ಅದು ನಿಮ್ಮ ಸರಕಾರಗಳ ಮಂತ್ರಿಗಳಲ್ಲಿ, ನಿಮ್ಮ ತಾಳಕ್ಕೆ ಕುಣಿಯುವ ಅಧಿಕಾರಿಗಳಲ್ಲಿ ಹಾಗೂ 100 ಜನ ಕಾರ್ಪೊರೇಟ್ ಬಂಡವಾಳಿಗರಲ್ಲಿ, ಹೆಚ್ಚೆಂದರೆ ಶೇ.1ರಷ್ಟು ಜನರಲ್ಲಿ ಮಾತ್ರ. ಆದರೂ ಶೇ. 30ರಷ್ಟು ಅಮಾಯಕ ಜನರು ನಿಮ್ಮ ದ್ವೇಷ, ಎಕ್ಸ್ಕ್ಲೂ ಸಿವ್ ರಾಜಕಾರಣ, ಉನ್ಮಾದಕಾರಿ ಮಾತುಗಳ ಕಾರಣಕ್ಕೆ ಮತ ನೀಡುತ್ತಿದ್ದಾರೆ. ವಾಸ್ತವಾಂಶ ಅರ್ಥವಾದ ಕೂಡಲೇ ನೀವು ಶಾಶ್ವತವಾಗಿ ಅಧಿಕಾರದಿಂದ ಹೊರಗಿರುತ್ತೀರಿ ಎಂಬುದು ತಿಳಿದಿರಲಿ.
* ಜನರ ಕಲ್ಯಾಣಕ್ಕಾಗಿ ನೀಡುವ ಸಬ್ಸಿಡಿಗಳನ್ನು ಜೋಶಿಯವರು ಗೇಲಿ ಮಾಡುತ್ತಿದ್ದಾರೆ. ಒಂದು ಅಡುಗೆ ಗ್ಯಾಸಿನ ಸಿಲಿಂಡರ್ ಬೆಲೆ ರೂ. 1,000 ದಾಟಿದೆ. ಅದು ಮನಮೋಹನಸಿಂಗ್ರ ಕಾಲದಲ್ಲಿ ರೂ. 414 ದಾಟಿರಲಿಲ್ಲ. 2014ಕ್ಕೆ ಮೊದಲು ಒಂದು ಲೀಟರ್ ಡೀಸೆಲ್ ಬೆಲೆ ರೂ. 47 ದಾಟಿರಲಿಲ್ಲ. ಪೆಟ್ರೋಲ್ 70 ರೂ. ಆಸುಪಾಸಿನಲ್ಲಿತ್ತು. ಈಗ ಡೀಸೆಲ್ ಬೆಲೆ 110 ರೂ. ವರೆಗೂ ತಲುಪಿಸಿ ಜನರ ಆಕ್ರೋಶದ ಕಾರಣಕ್ಕೆ ಈಗ ತುಸು ಇಳಿಸಲಾಗಿದೆ. ಆದರೂ ಕೆಎಸ್ಆರ್ಟಿಸಿ ಮುಂತಾದ ಸರಕಾರಿ ಸಂಸ್ಥೆಗಳು ಸಗಟು ದರದಲ್ಲಿ ಖರೀದಿಸುವ ಡೀಸೆಲ್ ಮೇಲೆ ಪ್ರತೀ ಲೀಟರಿಗೆ ರೂ. 25ರಷ್ಟು ಹೆಚ್ಚುವರಿಯಾಗಿ ಲೂಟಿ ಮಾಡುತ್ತಿದ್ದಾರೆ. ಈ ಸಂಸ್ಥೆಗಳು ರೂ. 113 ಕೊಟ್ಟು ಡೀಸೆಲ್ ಖರೀದಿಸುತ್ತಿವೆ. ಇದರಿಂದಾಗಿ ಪ್ರಯಾಣಿಕರ ಟಿಕೆಟ್ ದರಗಳು ಹೆಚ್ಚಾಗುತ್ತಿವೆ. ನಿಗಮಗಳು ನಷ್ಟಕ್ಕೆ ಗುರಿಯಾಗುತ್ತಿವೆ. ಎಲ್ಲಿ ಪೆಟ್ರೋಲ್, ಡೀಸೆಲ್ ದರಗಳು ಹೆಚ್ಚಾಗುತ್ತವೊ ಅಲ್ಲಿ ಅಭಿವೃದ್ಧಿ ಹಿನ್ನಡೆಯಾಗುತ್ತದೆ. ಹಣದುಬ್ಬರ, ಬೆಲೆಯೇರಿಕೆಗಳು ಸಂಭವಿಸುತ್ತವೆ. * ಮೋದಿ ಸರಕಾರದ ಮಹಾ ಜನದ್ರೋಹವೆಂದರೆ ಅದಾನಿ, ಅಂಬಾನಿ ಮುಂತಾದ ಕಾರ್ಪೊರೇಟ್ ಧಣಿಗಳ ಆದಾಯದ ಮೇಲಿನ ತೆರಿಗೆಯನ್ನು ಶೇ.30 ರಿಂದ ಶೇ. 22ಕ್ಕೆ ಇಳಿಸಲಾಗಿದೆ. ಜನರ ಮೇಲೆ ತೆರಿಗೆ ಹೊರೆಯನ್ನು 2013ಕ್ಕಿಂತ 2.7 ಪಟ್ಟು ಹೆಚ್ಚಿಸಲಾಗಿದೆ.
* ಒಂದು ಮಾತನ್ನು ತಿಳಿದುಕೊಳ್ಳಿ ಜೋಶಿಯವರೇ, ಯಾವ ಸರಕಾರ ಜನರ ಬಳಿ ಇರುವ ಕಡೆಯ ಕಾಸನ್ನೂ ದೋಚಬೇಕೆಂದು ಹೊಂಚು ಹಾಕಿ ಬೆಕ್ಕಿನಂತೆ ಕುಳಿತಿರುತ್ತದೆಯೋ ಅದನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತ ಎನ್ನಲಾಗುತ್ತದೆಯೇ ಹೊರತು, ನರೇಗ (ಉದ್ಯೋಗದ) ಆಹಾರ ಹಕ್ಕಿನ ಕಾಯ್ದೆ, ಅರಣ್ಯ ಹಕ್ಕುಗಳ ಕಾಯ್ದೆ ಮತ್ತು ಹಲವಾರು ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದು ಜನರ ಜೇಬಿನಲ್ಲಿ ಹಣ ಇರುವಂತೆ ಹಾಗೂ ಜನರು ಹಸಿದು ಮಲಗದಂತೆ ನೋಡಿಕೊಳ್ಳುವುದನ್ನು ಗಾಂಧೀಜಿಯವರ ಕನಸಿನ ಆಡಳಿತ ಎನ್ನಲಾಗುತ್ತದೆ. ತುಸು ಸಮಾಧಾನದಿಂದ ಯೋಚಿಸಿ; 2012-13ರಲ್ಲಿ ಕೇಂದ್ರದ ಬಜೆಟ್ ಗಾತ್ರ ರೂ. 14.91 ಲಕ್ಷ ಕೋಟಿ, ಆಗ ರೂ. 2.48 ಲಕ್ಷ ಕೋಟಿಗಳನ್ನು ವಿವಿಧ ಬಾಬತ್ತಿಗೆ ಸಬ್ಸಿಡಿ ರೂಪದಲ್ಲಿ ನೀಡಲಾಗಿತ್ತು. ಅದು ಬಜೆಟ್ನ ಶೇ.16.6ರಷ್ಟು ಮೊತ್ತ. 2022-23ರಲ್ಲಿ ಕೇಂದ್ರದ ಬಜೆಟ್ ಗಾತ್ರ 39.44 ಲಕ್ಷ ಕೋಟಿ ರೂ. ಆದರೆ ಸಬ್ಸಿಡಿ ನೀಡುತ್ತಿರುವುದು ರೂ. 3 ಲಕ್ಷ ಕೋಟಿ ಮಾತ್ರ. ಇದು ಬಜೆಟ್ನ ಶೇ. 7.7ರಷ್ಟು ಮಾತ್ರ.
*ಜೋಶಿಯವರೇ ಸರಿಯಾಗಿ ಓದಿಕೊಳ್ಳಿ. ಮನಮೋಹನಸಿಂಗ್ರ ಸರಕಾರವಿದ್ದಾಗ ದೇಶದ ಸಾಲ ಕಡಿಮೆ ಇತ್ತು, ಜನರಿಗೆ ಸಬ್ಸಿಡಿಗಳು ಹಾಗೂ ಹಲವು ಸೌಲಭ್ಯಗಳಿದ್ದವು. ಜನರು ಕಟ್ಟುತ್ತಿದ್ದ ಪರೋಕ್ಷ ತೆರಿಗೆ ಕಡಿಮೆ ಇತ್ತು. ಯುವಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದ್ದವು. ಜನರ ಹಸಿವಿನ ಸಮಸ್ಯೆ ಕಡಿಮೆ ಮಾಡಬೇಕೆಂದು ಪ್ರಯತ್ನಿಸಿ ಆಹಾರದ ಹಕ್ಕಿನ ಕಾಯ್ದೆ ತರಲಾಗಿತ್ತು. ಆದರೆ ಮೋದಿಯವರ ಬಿಜೆಪಿ ಸರಕಾರದ ಆಡಳಿತದ ಅವಧಿಯಲ್ಲಿ ಬೆಲೆಗಳು ಗಗನ ಮುಟ್ಟಿವೆ. ಜನರಿಂದ ತೆರಿಗೆಯನ್ನು ಲೂಟಿ ಮಾಡಲಾಗುತ್ತಿದೆ. ದೇಶದ ಆಂತರಿಕ ಮತ್ತು ವಿದೇಶಿ ಸಾಲ ತನ್ನೆಲ್ಲ ಮಿತಿಯನ್ನು ಮೀರಿ ಬೆಳೆದಿವೆ. ಸೆಸ್ಸುಗಳ ರೂಪದಲ್ಲಿ ಜನರನ್ನು ಲೂಟಿ ಮಾಡಲಾಗುತ್ತಿದೆ. ಯುವಜನರಿಗೆ ಉದ್ಯೋಗಾವಕಾಶಗಳಿಲ್ಲದೆ, ದುಡಿಯುವ ಅವಕಾಶಗಳಿಲ್ಲದೆ ದೇಶದ ಆರ್ಥಿಕತೆ ನೆಲ ಕಚ್ಚಿದೆ. ದೇಶದ ಆರ್ಥಿಕತೆ ಅಧೋಗತಿಗೆ ಇಳಿದಿದೆಯೆಂದು ನಾನು ರಾಜಕೀಯ ಮಾಡುವ ಉದ್ದೇಶದಿಂದ ಹೇಳುತ್ತಿದ್ದೇನೆಂಬ ಅರ್ಥದಲ್ಲಿ ಬರೆದಿದ್ದೀರಿ. ಆದರೆ ಇದೇ ವರ್ಷದ ಜೂನ್ 16 ಮತ್ತು 17ರಂದು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆಯನ್ನು ಕೇಂದ್ರ ಸರಕಾರ ಧರ್ಮಶಾಲಾದಲ್ಲಿ ನಡೆಸಿತ್ತು, ಈ ಕುರಿತು ನಿಮಗೆ ಮಾಹಿತಿ ಇದೆಯೇ? ಆ ಸಭೆಯಲ್ಲಿ ರಾಜ್ಯಗಳು ಸಾಲ ಕಡಿಮೆ ಮಾಡಬೇಕು, ಸಬ್ಸಿಡಿಗಳಿಗೆ ಕತ್ತರಿ ಹಾಕಬೇಕು, ಇಲ್ಲದಿದ್ದರೆ ಭಾರತವು ಶ್ರೀಲಂಕಾ ಮತ್ತು ಪಾಕಿಸ್ತಾನದಂತೆ ದಿವಾಳಿಯಾಗುತ್ತದೆ, ರಾಜ್ಯಗಳ ವಿತ್ತೀಯ ಶಿಸ್ತು ಮಿತಿ ಮೀರುತ್ತಿದೆ. ಹಾಗಾಗಿ ಜನರಿಂದ ಆಸ್ತಿ ತೆರಿಗೆ, ಮದ್ಯದ ಮೇಲಿನ ತೆರಿಗೆ, ಸರಕಾರಿ ಸೇವೆಗಳ ಶುಲ್ಕ ಹೆಚ್ಚಿಸುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಮುಖ್ಯ ಕಾರ್ಯದರ್ಶಿಗಳ ಮೇಲೆ ಒತ್ತಡ ಹೇರಿದ್ದೀರಿ. ಆದರೆ ಕಾರ್ಪೊರೇಟ್ಗಳ ಮೇಲೆ ತೆರಿಗೆ ಹೆಚ್ಚಿಸಿ ಸಂಪನ್ಮೂಲ ಸಂಗ್ರಹಿಸಿ ಜನರ ಕಲ್ಯಾಣಕ್ಕೆ ಬಳಸಬಹುದೆಂಬ ಸಣ್ಣ ಯೋಚನೆಯೂ ನಿಮ್ಮ ಸರಕಾರದ ಕನಸಿಗೂ ಬರಲು ಸಾಧ್ಯವಿಲ್ಲ ಅಲ್ಲವೇ? ಜನರನ್ನು ಹೇಗೆ ದೋಚಬಹುದು ಎಂಬ ದುಷ್ಟ ಐಡಿಯಾಗಳು ಮಾತ್ರವೇ ನಿಮ್ಮ ತಲೆಯಲ್ಲಿ ಓಡಾಡುತ್ತಿರುತ್ತವೆ. ಇಂತಹ ಜನಪೀಡಕ ಸರಕಾರವನ್ನು ಏನೆಂದು ಕರೆಯಬೇಕು ಹೇಳಿ? ನಿಮಗೆ ಆಡಳಿತ ನಡೆಸಲು ಬರುವುದಿಲ್ಲ, ಜಾಗ ಖಾಲಿ ಮಾಡಿ ಜನತೆಯ ಶತ್ರುಗಳೇ ಎಂದಷ್ಟೆ ಹೇಳಲು ಜನರು ತಯಾರಾಗುತ್ತಿದ್ದಾರೆ.
* ರಾಜ್ಯಕ್ಕೆ ಉದಾರವಾಗಿ ಅನುದಾನಗಳನ್ನು ಕೊಟ್ಟು ಉದ್ಧಾರ ಮಾಡಿದ್ದೇವೆ ಎಂದು ಬೇರೆ ಹೇಳಿಕೆ ಕೊಟ್ಟಿದ್ದೀರಿ. ಅಂದರೆ ಮೋದಿಯವರ ನೇತೃತ್ವದ ಕೇಂದ್ರ ಸರಕಾರವು ರಾಜ್ಯದ ಮೇಲೆ ಮಾಡುತ್ತಿರುವ ಆರ್ಥಿಕ, ರಾಜಕೀಯ ದಬ್ಬಾಳಿಕೆಗಳನ್ನು ರಾಜ್ಯದ ಸಂಸದರಾದ ನೀವೇ ಸಮರ್ಥಿಸುತ್ತಿದ್ದೀರಿ. ಹಾಗಾಗಿ ರಾಜ್ಯವು ಅನುಭವಿಸುತ್ತಿರುವ ಎಲ್ಲ ವೇದನೆ, ನೋವುಗಳಿಗೆ ನೀವೇ ಕಾರಣ. ರಾಜ್ಯದ ಪರವಾಗಿ ಪ್ರತಿಭಟನೆಗಳನ್ನು ದಾಖಲಿಸಿ ನ್ಯಾಯಯುತವಾಗಿ ಕೊಡಿಸಬೇಕಾದ ಅನುದಾನಗಳನ್ನು, ತೆರಿಗೆ ಹಂಚಿಕೆಯನ್ನು ಕೊಡಿಸಬೇಕಾದ ಜವಾಬ್ದಾರಿ ನಿಮ್ಮ ಮೇಲೆ ಇದೆಯಲ್ಲವೇ? ಹಾಗಾದರೆ ನೀವೇನು ಮಾಡಿದ್ದೀರಿ?
* ರಾಜ್ಯಗಳಿಗೆ ಬೃಹತ್ ಕೊಡುಗೆ ಕೊಟ್ಟು ಬಿಟ್ಟಿದ್ದೇವೆ ಎಂದು ಹೇಳುತ್ತಿದ್ದೀರಿ. ವಾಸ್ತವ ನೋಡಿ; 13ನೇ ಹಣಕಾಸು ಆಯೋಗದವರೆಗೆ ತೆರಿಗೆ ಸಂಗ್ರಹದಲ್ಲಿ ಶೇ.32ರಷ್ಟು ಅನುದಾನವನ್ನು ರಾಜ್ಯಗಳಿಗೆ ನಿಗದಿಪಡಿಸಲಾಗಿತ್ತು. ಆದರೆ ವಾಸ್ತವವಾಗಿ ಶೇ.35ಕ್ಕೂ ಹೆಚ್ಚು ಹಂಚಿಕೆಯನ್ನು ಯುಪಿಎ ಸರಕಾರ ಮಾಡಿತ್ತು. ಮನಮೋಹನಸಿಂಗ್ ಅವರ ನೇತೃತ್ವದ ಸರಕಾರವೇ 14ನೇ ಹಣಕಾಸು ಆಯೋಗವನ್ನು ರಚನೆ ಮಾಡಿತ್ತು. ಈ ಆಯೋಗವು ರಾಜ್ಯಗಳಿಗೆ ಶೇ.42 ರಷ್ಟು ಪಾಲನ್ನು ಕೊಡಬೇಕೆಂದು ಶಿಫಾರಸು ಮಾಡಿತ್ತು. ಈ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಬೇಕಾದ ಅವಕಾಶ ಮೋದಿ ಸರಕಾರಕ್ಕೆ ಲಭಿಸಿತು. ಆದರೆ ಮೋದಿ ಸರಕಾರ ಮಾಡಿದ್ದೇನು ಗೊತ್ತೆ? ಶೇ.42ರಷ್ಟು ತೆರಿಗೆ ಹಂಚಿಕೆ ಮಾಡುವ ಬದಲಿಗೆ 2015-18ರ ವರೆಗೆ ಶೇ. 35ರಷ್ಟು ಹಂಚಿಕೆ ಮಾಡಿತು. 2019-20ರಲ್ಲಿ ಶೇ.37, 2020-21ರಲ್ಲಿ ಶೇ.29, 2021-22ರಲ್ಲಿ ಶೇ. 31ರಷ್ಟು ಮಾತ್ರ ಹಂಚಿಕೆ ಮಾಡಿತು. ಅಂದರೆ ರಾಜ್ಯಗಳಿಗೆ ಕೊಡಬೇಕಾದ ಅನುದಾನವನ್ನು ಕೊಡದೆ ಮೋಸ ಮಾಡಿದ ಮೋದಿಯವರ ಬಿಜೆಪಿ ಸರಕಾರ ಜನರ ಮೆಚ್ಚುಗೆಗೆ ಅರ್ಹವೇ? * ಮೋದಿ ಸರಕಾರದ ದ್ರೋಹದಿಂದ ಕರ್ನಾಟಕದ ಸಂಕಷ್ಟವಂತೂ ಹೇಳತೀರದಾಗಿದೆ. 15ನೇ ಹಣಕಾಸು ಆಯೋಗವು ಒಟ್ಟಾರೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಭೀಕರ ಅನ್ಯಾಯ ಮಾಡಿದೆ. ಶೇ. 1.07ರಷ್ಟು ಕಡಿಮೆ ಮಾಡಿದೆ. 14ನೇ ಹಣಕಾಸು ಆಯೋಗವು ಶೇ.4.713ರಷ್ಟು ಪಾಲನ್ನು ರಾಜ್ಯಕ್ಕೆ ಹಂಚಿಕೆ ಮಾಡಿದ್ದರೆ, 15ನೇ ಹಣಕಾಸು ಆಯೋಗವು ಅದನ್ನು ಶೇ.3.646ಕ್ಕೆ ಇಳಿಸಿದೆ. ಇದರಿಂದಾಗಿ ರಾಜ್ಯಕ್ಕೆ ಶೇ.20ಕ್ಕಿಂತ ಹೆಚ್ಚು ಅನ್ಯಾಯವಾಗಿದೆ. ಇದನ್ನು ಸರಿಪಡಿಸಲು ಜೋಶಿಯವರೇ ನೀವು ಏನು ಮಾಡಿದ್ದೀರಿ? ಈ ಹಣಕಾಸು ಆಯೋಗವು ರೂ. 5,495 ಕೋಟಿಯನ್ನು ಕೊಡಬೇಕೆಂದು ಶಿಫಾರಸು ಮಾಡಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅದನ್ನು ಕೊಡುವುದಿಲ್ಲ ಎಂದರು ಅದನ್ನು ಕೊಡಿಸುವಲ್ಲಿ ಕೇಂದ್ರ ಸಚಿವರಾದ ನೀವೇನು ಮಾಡಿದ್ದೀರಿ.
* ಕೇಂದ್ರದ ಸಹಾಯಾನುದಾನಗಳ ವಿಚಾರದಲ್ಲೂ ಅನ್ಯಾಯವಾಗುತ್ತಿದೆ. 2013-14ರಲ್ಲಿ ಕೇಂದ್ರದ ಬಜೆಟ್ ಗಾತ್ರ ರೂ. 16.65 ಲಕ್ಷ ಕೋಟಿಗಳಷ್ಟಿತ್ತು. ಆಗ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯದ ಪಾಲು ರೂ. 4,080 ಕೋಟಿಗಳಷ್ಟಿದ್ದರೆ, ಕೇಂದ್ರದ ಪಾಲು ರೂ. 12,231 ಕೋಟಿಗಳಷ್ಟಿತ್ತು. ಅಂದರೆ ಶೇ. 25ರಷ್ಟು ರಾಜ್ಯ ಪಾಲು ನೀಡಿತ್ತು. ಶೇ.75ರಷ್ಟು ಕೇಂದ್ರ ನೀಡಿತ್ತು. 2021-22ರಲ್ಲಿ ಕೇಂದ್ರದ ಬಜೆಟ್ ಗಾತ್ರ ರೂ. 34.83 ಲಕ್ಷ ಕೋಟಿಗಳಷ್ಟಿತ್ತು. ರಾಜ್ಯದ ಕೇಂದ್ರ ಪುರಸ್ಕೃತ ಯೋಜನೆಗಳಿಗಾಗಿ ಕೇಂದ್ರ ಬಿಡುಗಡೆ ಮಾಡಿದ್ದು ರೂ. 20,383 ಕೋಟಿ, ರಾಜ್ಯ ಬಿಡುಗಡೆ ಮಾಡಿದ್ದು ರೂ. 22,148 ಕೋಟಿ ಮಾತ್ರ. ದಿನೇ ದಿನೇ ರಾಜ್ಯದ ಪಾಲು ಹೆಚ್ಚಾಗುತ್ತಿದೆ, ಕೇಂದ್ರದ ಪಾಲು ಕಡಿಮೆಯಾಗುತ್ತದೆ. ಯೋಜನೆಗಳ ಹೆಸರು ಮಾತ್ರ ಕೇಂದ್ರದ್ದು ದುಡ್ಡು ಮಾತ್ರ ರಾಜ್ಯದ ಬೊಕ್ಕಸದ್ದು. ಇದನ್ನು ಸರಿಪಡಿಸಲು ತಮ್ಮಿಂದ ಯಾವ ಪ್ರಯತ್ನವಾಗಿದೆಯೆಂದು ರಾಜ್ಯದ ಜನರಿಗೆ ತಿಳಿಸುವಿರಾ?
* ಕೋವಿಡ್ ಅನ್ನು ಸಮರ್ಥವಾಗಿ ನಿಭಾಯಿಸಿದ್ದೇವೆಂದು ಜೋಶಿಯವರು ಹೇಳಿದ್ದಾರೆ. ಹಾಗಿದ್ದರೆ ಕಳೆದ ವರ್ಷ ಕೋವಿಡ್ ಅನ್ನು ಅತ್ಯಂತ ಕೆಟ್ಟದಾಗಿ ನಿಭಾಯಿಸಿದ ವಿಶ್ವದ 5 ಜನ ಅತಿ ಕೆಟ್ಟ ನಾಯಕರಲ್ಲಿ ಮೋದಿಯವರು ಮೊದಲ ಸ್ಥಾನದಲ್ಲಿದ್ದಾರೆ ಎಂದು ಭಾರತದ, ವಿಶ್ವದ ಅನೇಕ ಪತ್ರಿಕೆಗಳು ವರದಿ ಮಾಡಿದ್ದೇಕೆ? ನಿಮ್ಮ ಸರಕಾರಕ್ಕೆ ಕನಿಷ್ಠ ಆಕ್ಸಿಜನ್, ಬೆಡ್, ವೆಂಟಿಲೇಟರ್ಗಳನ್ನು ಸರಿಯಾದ ಸಮಯಕ್ಕೆ ಕೊಡಲಾಗಲಿಲ್ಲ. ‘ಪಿಎಂ ಕೇರ್ಸ್’ ಎಂಬ ಹಣ ಸಂಗ್ರಹಿಸುವ ಹೊಸ ಉಪಾಯವನ್ನೂ ಮಾಡಿದಿರಿ. ಅದರಲ್ಲಿ ರಾಜ್ಯಕ್ಕೆ ಎಷ್ಟು ಕೊಟ್ಟಿದ್ದೀರಿ ಹೇಳಿ? 45-50 ಲಕ್ಷ ಜನ ಮರಣ ಹೊಂದಿದ್ದಾರೆಂದು ವಿಶ್ವದ ವಿವಿಧ ಸಂಸ್ಥೆಗಳ ವರದಿಗಳು ಹೇಳುತ್ತಿವೆ, ಮೋದಿಯವರ ಸರಕಾರ ಈ ವಿಚಾರದಲ್ಲೂ ಸುಳ್ಳು ಹೇಳುತ್ತಿದೆಯೆಂದು ಹೇಳಿದರು. ಕರ್ನಾಟಕದಲ್ಲಿ ನಾವು ಎರಡು ವರ್ಷಗಳಿಂದ ಕೇಳುತ್ತಿದ್ದೇವೆ. 2020ರ ಮಾರ್ಚ್ನಿಂದ ಈ ವರೆಗೆ ವಿವಿಧ ಕಾಯಿಲೆಗಳಿಂದ/ ಕಾರಣಗಳಿಂದ ಮರಣ ಹೊಂದಿದವರ ಸಂಖ್ಯೆ ಎಷ್ಟು ಎಂದು ಈ ವರೆಗೂ ಮಾಹಿತಿ ನೀಡಿಲ್ಲ. ವೆಬ್ಸೈಟಿನಲ್ಲೂ ಮಾಹಿತಿ ಇಲ್ಲ. ಇದನ್ನು ಪಾರದರ್ಶಕ ಆಡಳಿತ ಎನ್ನಲು ಸಾಧ್ಯವೇ? ವ್ಯಾಕ್ಸಿನ್ ಬಗ್ಗೆ ಪ್ರಸ್ತಾಪಿಸಿದ್ದೀರಿ. ಜೋಶಿಯವರೇ, ನೀವು ವ್ಯಾಕ್ಸಿನ್ ಅಂಗಡಿ ತೆರೆಯಲು ಹೊರಟಿದ್ದಿರಿ ನೆನಪಿದೆಯೆ? ಆದರೆ ಸುಪ್ರೀಂ ಕೋರ್ಟು ಚಾಟಿ ಬೀಸಿದ ನಂತರ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದಿರಿ. ಕೆಲವು ಮೂಲಗಳ ಮಾಹಿತಿ ಪ್ರಕಾರ ಶೇ. 10-15ಕ್ಕಿಂತ ಹೆಚ್ಚು ಜನರಿಗೆ ಎರಡನೇ ವ್ಯಾಕ್ಸಿನ್ ನೀಡದಿದ್ದರೂ ನೀಡಲಾಗಿದೆಯೆಂದು ವರದಿ ಮಾಡಿ ಹಣ ನುಂಗಲಾಗಿದೆ ಎಂಬ ಮಾಹಿತಿ ಇದೆ. ಈ ಕುರಿತು ಸಮಗ್ರ ತನಿಖೆಯಾಗಬೇಕಾಗಿದೆ. ಮರಣ ಹೊಂದಿದವರಿಗೂ ವ್ಯಾಕ್ಸಿನ್ ನೀಡಲಾಗಿದೆ ಎಂದು ಸರ್ಟಿಫಿಕೇಟ್ ಕೊಟ್ಟಿರುವ ಹಲವು ದೂರುಗಳನ್ನು ಜನರು ನನಗೆ ಹೇಳಿದ್ದಾರೆ.
* ಯುಪಿಎ ಸರಕಾರ ಭ್ರಷ್ಟಾಚಾರವೆಸಗಿತ್ತು ಎಂದು ಹೇಳಿಕೆ ನೀಡಿದ್ದೀರಿ. ನೀವು ಅಧಿಕಾರಕ್ಕೆ ಬಂದು 8 ವರ್ಷಗಳು ಮುಗಿದು ಹೋದವು. ಈ ಎಂಟು ವರ್ಷಗಳಲ್ಲಿ ಯುಪಿಎ ಸರಕಾರದಲ್ಲಿದ್ದಾಗ ಭ್ರಷ್ಟಾಚಾರ ಎಸಗಿದ್ದಾರೆಂದು ಎಷ್ಟು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಶಿಕ್ಷೆ ನೀಡಿದ್ದೀರಿ? ಎಷ್ಟು ಪ್ರಕರಣ ದಾಖಲಿಸಿದ್ದೀರಿ? ಎಷ್ಟು ಪ್ರಕರಣಗಳು ನ್ಯಾಯದಲ್ಲಿ ವಿಚಾರಣೆ ನಡೆದಿವೆ? ಹೇಳಿ. ನಿಮ್ಮದೇ ಸರಕಾರವಿದೆ. ನೀವೀಗ ಆಡಳಿತ ಪಕ್ಷದ ಸದಸ್ಯರು, ನೀವು ಕಣ್ಣು ಮಿಟುಕಿಸಿದ ಕೂಡಲೇ ಹಗಲು ರಾತ್ರಿ ನಿದ್ರೆ ಬಿಟ್ಟು ಕುಣಿಯುವ ಐಟಿ, ಈ.ಡಿ., ಸಿಬಿಐಗಳಿವೆ. ಆದರೂ ಯುಪಿಎ ಸರಕಾರದಲ್ಲಿ ಭ್ರಷ್ಟಾಚಾರ ನಡೆದಿತ್ತು ಎಂದು ವಿರೋಧ ಪಕ್ಷದಲ್ಲಿ ಇರುವವರಂತೆ ಮಾತನಾಡುತ್ತಿದ್ದೀರೇ ಹೊರತು ಏನನ್ನೂ ಮಾಡಿದ್ದು ಕಾಣೆವು. ಇದರರ್ಥ ನಿಮಗೆ ಬೇಕಾದ ಸಿಎಜಿ, ಐಟಿ, ಈ.ಡಿ.ಗಳಲ್ಲಿದ್ದ ಜನರ ಮೂಲಕ ಯುಪಿಎ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿ ಅಧಿಕಾರಕ್ಕೆ ಬಂದಿದ್ದೀರೇ ಹೊರತು ಯುಪಿಎ ಸರಕಾರ ನೈಜವಾಗಿ ಭ್ರಷ್ಟಾಚಾರ ಎಸಗಿರಲಿಲ್ಲ. * ನೀವು ಹೇಳಿರುವ ಜೀವನ ಜ್ಯೋತಿ ಬಿಮಾ ಯೋಜನೆ, ಸುರಕ್ಷಾ ಯೋಜನೆ, ಜನಧನ್ ಯೋಜನೆ ಮುಂತಾದವುಗಳೆಲ್ಲ ಮಕಾಡೆ ಮಲಗಿವೆ. ನಿಮ್ಮ ಈ ಯೋಜನೆಗಳು ಎಷ್ಟು ಹುಸಿಯಾದವು ಎಂಬುದು ಕೋವಿಡ್ ಸಂದರ್ಭದಲ್ಲಿ ಪ್ರೂವ್ ಆಗಿದೆ. ಮರಣ ಹೊಂದಿದ 30 ದಿನಗಳ ಒಳಗೆ ದಾಖಲೆ ಸಮೇತ ಕ್ಲೇಮು ಸಲ್ಲಿಸಬೇಕೆಂದಿದೆ. ಮರಣ ಪ್ರಮಾಣ ಪತ್ರ ಪಡೆಯುವುದಕ್ಕೆ ಎಷ್ಟು ದಿನ ತೆಗೆದುಕೊಂಡರು ಎಂಬುದು ನಿಮ್ಮ ಅರಿವಿಗೆ ಬಂದಿದೆಯೆ? ಜನಧನ್ ಯೋಜನೆಗೆ ತೆರೆದ ಖಾಲಿ ಅಕೌಂಟುಗಳಿಗೆ 3 ತಿಂಗಳಿಗೊಮ್ಮೆ ಬ್ಯಾಂಕುಗಳು ರೂ. 150ಕ್ಕೂ ಹೆಚ್ಚು ಶುಲ್ಕ ವಿಧಿಸುತ್ತವೆ. * ಜನರಿಗೆ ಸಾಲ ಕೊಡುವುದು, 1-2 ಲಕ್ಷ ವಿಮೆಯನ್ನು 140 ಕೋಟಿಯವರೆಗೆ ಇರುವ ಜನಸಂಖ್ಯೆಯಲ್ಲಿ 4-5 ಕೋಟಿ ಜನರಿಗೆ ಮಾಡಿಸುವುದು ದೊಡ್ಡ ಸಂಗತಿಯಲ್ಲ. ಈ ಯೋಜನೆಗಳ ವೈಫಲ್ಯಗಳ ಕುರಿತು ಗಂಟೆಗಟ್ಟಲೆ ಮಾತನಾಡಬಹುದಾಗಿದೆ. ಅಕೌಂಟು ತೆರೆಯುವ ಯೋಜನೆಗಳೆಲ್ಲ ಜನರನ್ನು ಲೂಟಿ ಮಾಡುವ ತಂತ್ರವೇ ಹೊರತು, ಜನರಿಗೆ ಅನುಕೂಲ ಮಾಡಿಕೊಡುವ ಯೋಜನೆಗಳಲ್ಲ. ರೂ. 19-20 ಲಕ್ಷ ಕೋಟಿಗಳನ್ನು ಸಂಗ್ರಹಿಸುವ ರಾಜ್ಯಕ್ಕೆ 741 ಕೋಟಿ, 144 ಕೋಟಿ ಕ್ಲೇಮುಗಳಾಗಿವೆ ಎಂದು ಬರೆಯುವುದೇ ಅವಮಾನಕಾರ ಸಂಗತಿ.
ರಾಜ್ಯ-ಕೇಂದ್ರಗಳಲ್ಲಿ ಆಡಳಿತ ನಡೆಸುತ್ತಿರುವ ಡಬಲ್ ಇಂಜಿನ್ ಬಿಜೆಪಿ ಸರಕಾರಗಳು ಯುವಜನರು, ಮಹಿಳೆಯರು, ಪರಿಶಿಷ್ಟ ಸಮುದಾಯಗಳ ಜನರಿಗೆ ಮಾಡಿರುವ ದ್ರೋಹಗಳದ್ದೇ ದೊಡ್ಡ ಕತೆಯಿದೆ. * ಮೋದಿಯವರ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಭಾರತವನ್ನು ಚೀನಾದ ಗುಲಾಮಗಿರಿಗೆ ತಳ್ಳಲಾಗಿದೆ. ಜೋಶಿಯವರು ಕಲ್ಲಿದ್ದಲು ಸಚಿವರಾಗಿ ತಮ್ಮನ್ನು ತಾವು ಅದಾನಿ, ಅಂಬಾನಿ ಮುಂತಾದವರ ಗುಲಾಮಗಿರಿಗೆ ತೆತ್ತುಕೊಂಡಿದ್ದೀರಿ. ದೇಶದ ಭೀಕರ ಕಲ್ಲಿದ್ದಲಿನ ಬಿಕ್ಕಟ್ಟಿಗೆ ಇದೇ ಕಾರಣ.
* ಕಳೆದ ವರ್ಷ ಚೀನಾಕ್ಕೆ ಭಾರತವು ರಫ್ತು ಮಾಡಿದ್ದು 2.19 ಲಕ್ಷ ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು. ಆಮದು ಮಾಡಿಕೊಂಡದ್ದು ರೂ. 7.68 ಲಕ್ಷ ಕೋಟಿ ಮೌಲ್ಯದ ಉತ್ಪನ್ನಗಳನ್ನು. ಒಂದೇ ವರ್ಷದಲ್ಲಿ 5.5 ಲಕ್ಷ ಕೋಟಿಗಳಷ್ಟು ಭಾರತೀಯರ ಸಂಪತ್ತು ಅನಾಮತ್ತಾಗಿ ಚೀನಾದ ಪಾಲಾಯಿತು. ಚೀನಾ ಭಾರತದ ಸಾವಿರಾರು ಕಿ.ಮೀಟರುಗಳಷ್ಟು ಭೂಪ್ರದೇಶವನ್ನು ಕಬಳಿಸಿದೆ. ಚೀನಾದ ದಾಳಿಯಲ್ಲಿ ನಮ್ಮ ಅನೇಕ ಯೋಧರು ಹುತಾತ್ಮರಾದರು. ಆದರೂ ಅವರೊಂದಿಗೆ ವ್ಯಾಪಾರ ಮಾಡಿಕೊಂಡು ಭಾರತವನ್ನು ಬಡತನದ ದವಡೆಗೆ ತಳ್ಳುವ ಮಹಾನ್ ಕಾರ್ಯಕ್ಕೆ ವಿಶ್ವಗುರು ಎನ್ನಲಾಗುತ್ತದೆಯೇ? ಎಂದು ಜೋಶಿಯವರು ಹೇಳಬೇಕು. ಇದನ್ನು ಗುಲಾಮಗಿರಿ ಎನ್ನದೆ ಬೇರೇನನ್ನಬೇಕು. * ರೂ. 33,913 ಕೋಟಿ ಮೌಲ್ಯದ ರಸ್ತೆ ಯೋಜನೆಗಳನ್ನು ಕರ್ನಾಟಕಕ್ಕೆ ನೀಡಲಾಗಿದೆ ಎಂದು ಜೋಶಿಯವರು ಮಾಧ್ಯಮಗಳಿಗೆ ಹೇಳಿದ್ದಾರೆ. ಅವರು ಕಳೆದ ವರ್ಷದ ಬಜೆಟ್ ನೋಡಬೇಕು. ಮೋದಿ ಸರಕಾರ 2021ರ ಬಜೆಟ್ನಲ್ಲಿ ಒಂದೇ ವರ್ಷ ತಮಿಳುನಾಡಿಗೆ ರೂ. 1.03 ಲಕ್ಷ ಕೋಟಿಯಷ್ಟು ಅನುದಾನ ನೀಡಿದೆ. ಕೇರಳ ರಾಜ್ಯಕ್ಕೂ ಬೃಹತ್ ಮಟ್ಟದ ಅನುದಾನಗಳನ್ನು ಕೊಡಲಾಯಿತು. ಆದರೆ ಕರ್ನಾಟಕಕ್ಕೆ 2014ರಿಂದ 2023ರ ಮಾರ್ಚ್ ವರೆಗೆ 33,913 ಕೋಟಿ ರೂ. ನೀಡುವುದಾಗಿ ಹೇಳುತ್ತಿದ್ದಾರೆ. 19-20 ಲಕ್ಷ ಕೋಟಿ ರೂ. ಸಂಪನ್ಮೂಲ ಸಂಗ್ರಹಿಸುವ ರಾಜ್ಯಕ್ಕೆ ಕೇಂದ್ರ ಕೊಡುತ್ತಿರುವ ಈ ಅನುದಾನ ಅವಮಾನಕರವೆನ್ನಿಸುತ್ತಿಲ್ಲವೆ?
* ಶ್ರೀಮಾನ್ ಜೋಶಿಯವರೇ ನಿಮ್ಮ ಸರಕಾರದ ದ್ರೋಹಗಳ ಪಟ್ಟಿ ಮುಗಿಯುವುದೇ ಇಲ್ಲ. ದೇಶದ ಆರ್ಥಿಕ ಪರಿಸ್ಥಿತಿ ವಿಪರೀತ ಹದಗೆಟ್ಟಿದೆ. ದೇಶದಲ್ಲಿ ಸಂತೋಷವೆಂಬುದು ತುಂಬಿ ತುಳುಕಾಡುತ್ತಿದ್ದರೆ ಅದು ನಿಮ್ಮ ಸರಕಾರಗಳ ಮಂತ್ರಿಗಳಲ್ಲಿ, ನಿಮ್ಮ ತಾಳಕ್ಕೆ ಕುಣಿಯುವ ಅಧಿಕಾರಿಗಳಲ್ಲಿ ಹಾಗೂ 100 ಜನ ಕಾರ್ಪೊರೇಟ್ ಬಂಡವಾಳಿಗರಲ್ಲಿ, ಹೆಚ್ಚೆಂದರೆ ಶೇ.1ರಷ್ಟು ಜನರಲ್ಲಿ ಮಾತ್ರ. ಆದರೂ ಶೇ. 30ರಷ್ಟು ಅಮಾಯಕ ಜನರು ನಿಮ್ಮ ದ್ವೇಷ, ಎಕ್ಸ್ಕ್ಲೂ ಸಿವ್ ರಾಜಕಾರಣ, ಉನ್ಮಾದಕಾರಿ ಮಾತುಗಳ ಕಾರಣಕ್ಕೆ ಮತ ನೀಡುತ್ತಿದ್ದಾರೆ. ವಾಸ್ತವಾಂಶ ಅರ್ಥವಾದ ಕೂಡಲೇ ನೀವು ಶಾಶ್ವತವಾಗಿ ಅಧಿಕಾರದಿಂದ ಹೊರಗಿರುತ್ತೀರಿ ಎಂಬುದು ತಿಳಿದಿರಲಿ. * ನಾನು ಹೇಳುತ್ತಿರುವ ಪ್ರತಿ ಸಂಗತಿಯನ್ನೂ ದಾಖಲೆಯನ್ನು ಆಧರಿಸಿಯೇ ನೀಡುತ್ತಿದ್ದೇನೆ. ನಾನು ಸುಳ್ಳು ಹೇಳಿದ್ದೇನೆಂದು ಆರೋಪಿಸಿ ಹುಸಿ ಮಾತುಗಳನ್ನು ಗಾಳಿಗೆ ತೂರಬೇಡಿ. ಒಂದು ಸಮಗ್ರ ಶ್ವೇತಪತ್ರವನ್ನು 1999 ರಿಂದ ಈ ವರೆಗೆ ಕೇಂದ್ರ ಸರಕಾರದಿಂದ ಅಧಿಕೃತವಾಗಿ ಹೊರಡಿಸಬೇಕೆಂದು ಒತ್ತಾಯಿಸುತ್ತೇನೆ. * ಮೋದಿಯವರ ಸರಕಾರಕ್ಕೆ ನಿಜಕ್ಕೂ ಧಮ್ ಇದ್ದರೆ ಯುಪಿಎ ಸರಕಾರದ ಕಾಲಕ್ಕೆ ನಿಂತು ಹೋಗಿರುವ ಎನ್ಎಸ್ಎಸ್ಒ ಸರ್ವೇಗಳನ್ನು ಕೂಡಲೇ ಮಾಡಿಸಬೇಕು. ಸಚಿವರಾಗಿ ನೀವು ಅದರ ಜವಾಬ್ದಾರಿ ಹೊರಬೇಕು. 2018 ರಲ್ಲಿ ಮಾಡಿದ ಸರ್ವೇ ವರದಿಯನ್ನು ಬಿಡುಗಡೆ ಮಾಡಿಸಬೇಕು. ಯುಪಿಎ ಸರಕಾರದ ಅವಧಿಯಲ್ಲಿ ಸಿಎಜಿ ಆಡಿಟ್ ವರದಿಗಳೆಷ್ಟನ್ನು ಪ್ರತೀ ವರ್ಷ ಮಾಡಲಾಗುತ್ತಿತ್ತು? ಈಗ ಎಷ್ಟು ಮಾಡಲಾಗುತ್ತಿದೆ? ತಾವು ಭ್ರಷ್ಟರಲ್ಲದಿದ್ದರೆ, ಜನರ ಬದುಕು ಸುಧಾರಣೆಯಾಗಿದ್ದರೆ ಈ ಕೆಲಸಗಳನ್ನು ತಾವು ಮೊದಲು ಮಾಡಬೇಕೆಂದು ಒತ್ತಾಯಿಸುತ್ತೇನೆ. ಮೋದಿಯವರ ನೇತೃತ್ವದ ಬಿಜೆಪಿ ಸರಕಾರದಲ್ಲಿ ಕಾರ್ಪೊರೇಟ್ ಭ್ರಷ್ಟಾಚಾರ ಯಾವ ಮಟ್ಟದ್ದು ಎಂದು ಭವಿಷ್ಯತ್ತು ದೇಶಕ್ಕೆ ವಿವರಿಸುತ್ತದೆ. ಈಗಾಗಲೇ ಶ್ರೀಲಂಕಾ, ಆಸ್ಟ್ರೇಲಿಯ ಮುಂತಾದ ಕಡೆ ಅದಾನಿ ಕಂಪೆನಿಗೆ ಯಾವ ಅನುಕೂಲ ಮಾಡಿಕೊಡಲು ಸರಕಾರ ಏನೇನೆಲ್ಲ ಮಾಡಿದೆ ಎಂಬುದೆಲ್ಲ ಮುಂದಿನ ದಿನಗಳಲ್ಲಿ ಬೆಳಕಿಗೆ ಬರಲಿದೆ. ಸತ್ತ ಇಲಿಯ ವಾಸನೆಯನ್ನು ಬಹಳ ಕಾಲ ಬಚ್ಚಿಡಲಾಗದು.
ಶ್ರೀಮಾನ್ ಜೋಶಿಯವರೇ, ನನ್ನನ್ನು ಹೀಗಳೆಯುವ ಮೊದಲು ತಾವು ಆರೆಸ್ಸೆಸ್, ಮೋದಿ, ಅಮಿತ್ ಶಾ ಅವರ ಗುಲಾಮಗಿರಿಯಿಂದ ಹೊರಬರಬೇಕು. ಹಾಗೆಯೇ ಅದಾನಿ, ಅಂಬಾನಿಗಳ ಗುಲಾಮಗಿರಿಯಿಂದಲೂ ಹೊರಬರಬೇಕು. ಆ ಮೂಲಕ ನೀವು ಕನ್ನಡದ ಸ್ವಾಭಿಮಾನವನ್ನು ಎತ್ತಿ ಹಿಡಿದು ರಾಜ್ಯದ ಭವ್ಯ ಸ್ವಾಭಿಮಾನದ ಪರಂಪರೆಯನ್ನು ಉಳಿಸಬೇಕೆಂದು ಕೋರುತ್ತೇನೆ.