ಜಾಹೀರಾತಿನಲ್ಲಿ ರಾಜ್ಯ ಸರಕಾರದ ದುರುದ್ದೇಶ: ಖಂಡಿಸಿ ಸಾಹಿತಿಗಳಿಂದ ಸಿಎಂಗೆ ಬಹಿರಂಗ ಪತ್ರ
‘ಇತಿಹಾಸ ತಿರುಚುವ ದುಷ್ಕೃತ್ಯದ ಮುಂದುವರೆದ ಭಾಗ'
ಬೆಂಗಳೂರು, ಆ.14: ‘ವಾರ್ತಾ ಇಲಾಖೆಯಿಂದ ಪತ್ರಿಕೆಗಳಿಗೆ ಬಿಡುಗಡೆ ಮಾಡಿರುವ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ-75'ರ ಜಾಹೀರಾತಿನಲ್ಲಿ ರಾಜ್ಯ ಸರಕಾರದ ದುರುದ್ದೇಶ ಪೂರಿತ ನಡೆಗಳನ್ನು ತೀವ್ರವಾಗಿ ಖಂಡಿಸಿದ್ದು, ಸಿಎಂ ಕೂಡಲೇ ರಾಜ್ಯದ ಜನತೆ ಕ್ಷಮೆಯಾಚಿಸಬೇಕು' ಎಂದು ಆಗ್ರಹಿಸಿ ಹಿರಿಯ ಸಾಹಿತಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರಿಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ.
ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ರಾಜೇಂದ್ರ ಚೆನ್ನಿ,ಡಾ.ವಿಜಯಾ, ಡಾ.ಜಿ.ರಾಮಕೃಷ್ಣ, ಡಾ.ಬಂಜಗೆರೆ ಜಯಪ್ರಕಾಶ್, ಡಾ.ಹಿ.ಶಿ.ರಾಮಚಂದ್ರೆ ಗೌಡ, ಡಾ.ಕಾಳೆಗೌಡ ನಾಗವಾರ, ಕೆ.ಎಸ್.ವಿಮಲಾ, ಡಾ.ವಸುಂಧರಾ ಭೂಪತಿ, ಬಿ.ಶ್ರೀಪಾದ ಭಟ್, ಡಾ.ಎನ್.ಗಾಯತ್ರಿ, ಡಾ.ಆರ್.ಪೂರ್ಣಿಮಾ ಸೇರಿದಂತೆಹಲವು ಮಂದಿ ಚಿಂತಕರು, ಸರಕಾರಿ ಜಾಹೀರಾತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಜವಾಹರ್ ಲಾಲ್ ನೆಹರೂ ಅವರ ಫೋಟೋ ಕೈಬಿಟ್ಟಿರುವುದಕ್ಕೆ ಆಕ್ಷೇಪಿಸಿದ್ದಾರೆ.
‘ಪತ್ರಿಕೆಗಳ ಜಾಹೀರಾತಿನಲ್ಲಿ ದುರುದ್ದೇಶಪೂರ್ವಕವಾಗಿ ಸ್ವಾತಂತ್ರ್ಯ ಹೋರಾಟಗಾರ ಜವಾಹರ್ ಲಾಲ್ ನೆಹರೂ(Jawaharlal Nehru) ಹೆಸರನ್ನು ಪ್ರಮುಖ ಪಟ್ಟಿಯಿಂದ ಕೈಬಿಟ್ಟಿರುವುದು ಆಘಾತಕಾರಿ ಸಂಗತಿ. ನೆಹರೂರನ್ನು ಇತಿಹಾಸದ ಪುಟಗಳಿಂದ ಅಳಿಸುವಂತಹ ಕೀಳು ಮಟ್ಟದ ರಾಜಕಾರಣಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಅಂಬೇಡ್ಕರ್ ‘ಸತ್ಯವು ಇತಿಹಾಸದ ತಾಯಿ' ಎನ್ನುತ್ತಾರೆ. ಆದರೆ,ನಿಮ್ಮ ಬಿಜೆಪಿ ಸರಕಾರವು ಸುಳ್ಳನ್ನು ಇತಿಹಾಸ ಎಂದು ನಂಬಿಸಲು ಹೆಣಗುತ್ತಿರುವುದಕ್ಕೆ ನೆಹರೂಗೆ ಮಾಡಿದ ಅವಮಾನವೇ ಸಾಕ್ಷಿಯಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
‘ಇತಿಹಾಸವನ್ನು ವರ್ತಮಾನದಲ್ಲಿ ರಚಿಸಬಾರದು, ಎನ್ನುವ ಪ್ರಾಥಮಿಕ ಪಾಠವನ್ನು ಕಲಿಯದ ಬಿಜೆಪಿ ಸರಕಾರವು ಸಂಸದೀಯವಲ್ಲದ, ನೋಂದಣಿಯೂ ಆಗಿರದ ಆರೆಸ್ಸೆಸ್(RSS) ಸಿದ್ದಾಂತಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿರುವುದು ಅಸಂವಿಧಾನಿಕವಾಗಿದೆ. ಈಗಾಗಲೇ ಕರ್ನಾಟಕದಲ್ಲಿ ಮರು ಪರಿಷ್ಕರಣೆಯ ಹೆಸರಲ್ಲಿ ಪಠ್ಯಪುಸ್ತಕಗಳನ್ನು ಮತೀಯವಾದೀಕರಣಗೊಳಿಸಿ, ಮಾಡಿದ ಇತಿಹಾಸ ತಿರುಚುವ ದುಷ್ಕೃತ್ಯದ ಮುಂದುವರೆದ ಭಾಗ ಇದಾಗಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
‘ಬ್ರಿಟಿಷರ ವಿರುದ್ಧ ಯುದ್ಧ ಮಾಡಿದ ರಾಜ್ಯದ ಮಹನೀಯರ ಪಟ್ಟಿಯಲ್ಲಿ ಟಿಪ್ಪು ಹೆಸರು ಕಣ್ಮರೆಯಾಗಿರುವುದು. ಇದು ಬಿಜೆಪಿಯ ಪೂರ್ವಗ್ರಹ ಪೀಡಿತ ದೃಷ್ಟಿಕೋನ ಎಂದೇ ಕರೆಯಬೇಕಾಗುತ್ತದೆ. ರಾಜ್ಯದ ಜನರ ತೆರಿಗೆ ಹಣವನ್ನು ಆರೆಸ್ಸೆಸ್ ಸಿದ್ದಾಂತದ ಪ್ರಚಾರಕ್ಕೆ ಮತ್ತು ತನ್ನ ಸ್ವಹಿತಾಸಕ್ತಿಗೆ ಬಿಜೆಪಿ ಸರಕಾರ ದುರ್ಬಳಕೆ ಮಾಡಿಕೊಂಡಿದೆ. ವಾರ್ತಾ ಇಲಾಖೆಯು ಇಲ್ಲಿ ಗುರುತರ ಅಪರಾಧವನ್ನು ಎಸಗಿದ್ದು, ಇಲಾಖೆಯ ಮುಖ್ಯಸ್ಥರೂ ಇದಕ್ಕೆ ಹೊಣೆಗಾರಾಗಿದ್ದಾರೆ' ಎಂದು ಅವರುಗಳು ಎಚ್ಚರಿಸಿದ್ದಾರೆ.
‘ಕೂಡಲೇ ರಾಜ್ಯದ ಜನತೆಯ ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ತಪ್ಪು ನಡೆಗಾಗಿ ಸಾರ್ವಜನಿಕರ ಕ್ಷಮೆ ಯಾಚಿಸಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಣಕಿಸುವ, ನೆಹರೂ, ಡಾ.ಅಂಬೇಡ್ಕರ್ಗೆ ಅವಮಾನ ಮಾಡುವ ಈ ಸ್ವಾತಂತ್ರ್ಯ ಆಚರಣೆಯ ಜಾಹೀರಾತನ್ನು ಹಿಂಪಡೆಯಬೇಕು. ಈ ಜಾಹೀರಾತಿಗೆ ಸರಕಾರ ವೆಚ್ಚ ಮಾಡಿದ ಹಣವೆಷ್ಟು ಎಂದು ಸಾರ್ವಜನಿಕರಿಗೆ ತಿಳಿಸಬೇಕು. ಈ ಪ್ರಮಾದ ಎಸಗಿದವರು ಈ ರೀತಿ ಅಪವ್ಯಯವಾಗಿರುವ ಸಾರ್ವಜನಿಕರ ಹಣವನ್ನು ಮರಳಿ ಖಜಾನೆಗೆ ಭರ್ತಿಮಾಡಬೇಕು' ಎಂದು ಒತ್ತಾಯಿಸಿದ್ದಾರೆ.
‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಂಡ್ಕರ್ ಫೋಟೋವನ್ನು ಕೆಳಗಿನ ಕೊನೆಯ ಸಾಲಿಗೆ ಸೇರಿಸಿ ನಿಮ್ಮೊಳಗಿರುವ ವೈದಿಕಶಾಹಿತನವನ್ನು ಮೆರೆದಿದ್ದೀರಿ. ಸತತವಾಗಿ 3 ವರ್ಷಗಳ ಕಾಲ ಸಂವಿಧಾನ ರಚನೆಯಲ್ಲಿ ತೊಡಗಿಕೊಂಡು ವಿಶ್ವವೆ ಮೆಚ್ಚಿದ ಸಂವಿಧಾನ ನೀಡಿದ ಬಾಬಾ ಸಾಹೇಬರಿಗೆ ನೀವು ಮಾಡಿದ ಅಪಚಾರವಿದು. ಅದನ್ನು ನಾವು ಖಂಡಿಸುತ್ತೇವೆ. ಹಾಗೆಯೇ ಬ್ರಿಟಿಷರಿಗೆ 3 ಬಾರಿ ಕ್ಷಮಾಪಣೆ ಪತ್ರ ಬರೆದುಕೊಟ್ಟ, ‘ಜೈಲಿನಿಂದ ಬಿಡುಗಡೆಯಾದರೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವುದಿಲ್ಲ' ಎಂದು ಮುಚ್ಚಳಿಕೆ ಬರೆದುಕೊಟ್ಟ ಸಾವರ್ಕರ್ರನ್ನು ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಸೇರಿಸಿದ್ದೂ, ಅಲ್ಲದೆ ಅದಕ್ಕೆ ಅಗ್ರಸ್ಥಾನ ಕಲ್ಪಿಸಿರುವುದು ದುರುದ್ದೇಶ ಪೂರಿತ. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಬಾರದೆಂದು ಹಿಂದೂ ಮಹಾಸಭಾದ ಕಾರ್ಯಕರ್ತರಿಗೆ ಆದೇಶಿಸಿದ ಸಾವರ್ಕರ್, ಗಾಂಧಿ ಹತ್ಯೆಯ ಆರೋಪಿಗಳಲ್ಲಿ ಒಬ್ಬರಾಗಿದ್ದೂ, ಸಾಕ್ಷಿ ಪುರಾವೆಗಳಿಲ್ಲ ಎಂದು ಖುಲಾಸೆಯಾದವರು. ಹಾಗಾಗಿ ಅವರು ಯಾವ ಮಾನದಂಡಗಳಿಂದಲೂ ಸ್ವಾತಂತ್ರ ಹೋರಾಟಗಾರರಲ್ಲ' ಎಂದು ಸಾಹಿತಿಗಳು ಕಿಡಿಕಾರಿದ್ದಾರೆ.
ಇದನ್ನೂ ಓದಿ: ನೆಹರೂ ಫೋಟೋ ಉದ್ದೇಶಪೂರ್ವಕವಾಗಿಯೇ ಕೈಬಿಟ್ಟಿದ್ದೇವೆ: ಬಿಜೆಪಿ ಪ್ರಧಾನ ಕಾರ್ಯದರ್ಶಿ