ಪ್ರೊ.ಗಣಪತಿ ಭಟ್
ಉಡುಪಿ: ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಕೆ.ಗಣಪತಿ ಭಟ್ ಆ. 30 ರಂದು ನಿಧನರಾದರು. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಸುದೀರ್ಘ ಕಾಲ ಸೇವೆಸಲ್ಲಿಸಿದ್ದ ಪ್ರೊ.ಭಟ್, 2002ರಿಂದ 2004 ರವರೆಗೆ ಎಂಜಿಎಂ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿದ್ದರು.
ದ.ಕ.ಜಿಲ್ಲೆಯ ಬೆಳ್ಳಾರೆ ನೆಟ್ಟಾರು ಸಮೀಪದ ಕುರಿಯದವರಾದ ಗಣಪತಿ ಭಟ್ ಸಜ್ಜನ, ಸ್ನೇಹಮಯಿ, ಕಠಿಣ ಶ್ರಮಜೀವಿ ಹಾಗೂ ಪ್ರಾಮಾಣಿಕರಾಗಿ ಹೆಸರುವಾಸಿಯಾಗಿದ್ದರು. ನಿವೃತ್ತಿಯ ನಂತರ ಹವ್ಯಕ ವಲಯದ ಗುರಿಕಾರರಾಗಿಯೂ ಸೇವೆಸಲ್ಲಿದರು. ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದ ಇವರು 'ಪಂಜ ಸೀಮಾದರ್ಶನ' ಪುಸ್ತಕ ಬರೆದಿದ್ದಾರೆ.
ಉತ್ತಮ ಕ್ರೀಡಾಪಟುವಾಗಿದ್ದ ಇವರು ಟೇಬಲ್ ಟೆನಿಸ್ ಆಟಗಾರರಾಗಿದ್ದರು. ಕೆ.ಗಣಪತಿ ಭಟ್ ಒಬ್ಬ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಇಂದು ಎಂಜಿಎಂ ಕಾಲೇಜಿನಲ್ಲಿ ಅಗಲಿದ ವಿಶ್ರಾಂತ ಪ್ರಾಂಶುಪಾಲರಿಗೆ ಶೃದ್ದಾಂಜಲಿ ಸಲ್ಲಿಸಲಾಯಿತು. ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಅಗಲಿದ ಕೆ.ಗಣಪತಿ ಭಟ್ರವರ ಸೇವೆಯನ್ನು ಸ್ಮರಿಸಿ ನುಡಿನಮನ ಗೌರವ ನೀಡಿದರು. ಕಾಲೇಜಿನ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.