ಯುವತಿಯ ಹತ್ಯೆ: ಉತ್ತರಾಖಂಡ ಬಿಜೆಪಿ ನಾಯಕನ ಪುತ್ರನ ಬಂಧನ
ಪುಲ್ಕಿತ್ ಆರ್ಯ (Photo: Twitter)
ಹರಿದ್ವಾರ: ಉತ್ತರಾಖಂಡದ (Uttarakhand) ಪೌರಿ ಜಿಲ್ಲೆಯ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯೊಬ್ಬಳನ್ನು ಹತ್ಯೆಗೈದ ಪ್ರಕರಣದಲ್ಲಿ ಬಿಜೆಪಿಯ(BJP) ಹಿರಿಯ ನಾಯಕ ವಿನೋದ್ ಆರ್ಯ(Vinod Arya) ಅವರ ಪುತ್ರ ಪುಲ್ಕಿತ್ ಆರ್ಯ (Pulkit Arya) ಸಹಿತ ಇಬ್ಬರು ಸಿಬ್ಬಂದಿಯನ್ನೂ ಬಂಧಿಸಲಾಗಿದೆ.
ಯುವತಿಯ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಸಮೀಪದ ನೀರಿನ ಕಾಲುವೆಯಾದ ಚೀಲಾ ಕಾಲುವೆಯಲ್ಲಿ ಹುಡುಕಾಟ ನಡೆಯುತ್ತಿದ್ದು, ಹತ್ಯೆಯ ಉದ್ದೇಶವನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ndtv.com ವರದಿ ಮಾಡಿದೆ. ಯುವತಿ ಕಳೆದೊಂದು ವಾರದಿಂದ ನಾಪತ್ತೆಯಾಗಿದ್ದಳು.
ಪ್ರಸ್ತುತ ಸರ್ಕಾರದಲ್ಲಿ ಯಾವುದೇ ಹುದ್ದೆಯಿಲ್ಲದ, ಆದರೆ, ರಾಜ್ಯ ಸಚಿವ ಸ್ಥಾನಮಾನದ ಹುದ್ದೆಯನ್ನು ಹೊಂದಿರುವ ವಿನೋದ್ ಆರ್ಯ ಕುಟುಂಬಕ್ಕೆ ಪ್ರಕರಣದಲ್ಲಿ ಸಂಬಂಧವಿದೆಯೆಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ವೈರಲ್ ಆದ ನಂತರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದರು ಎಂದು ವರದಿಯಾಗಿದೆ.
ವಿನೋದ್ ಆರ್ಯ ಈ ಮೊದಲು ಸಚಿವರಾಗಿ ಸೇವೆ ಸಲ್ಲಿಸಿದ್ದರು ಮತ್ತು ಕುಮ್ಹರ್ (ಕುಂಬಾರ) ಸಮುದಾಯದ ಸರ್ಕಾರಿ ಸಂಸ್ಥೆಯಾದ ಉತ್ತರಾಖಂಡ್ ಮಟಿ ಕಲಾ ಮಂಡಳಿಯ ಅಧ್ಯಕ್ಷರಾಗಿದ್ದರು.
ಪುಲ್ಕಿತ್ ಆರ್ಯ ಮಾತ್ರವಲ್ಲದೆ, ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಎಂಬವರನ್ನು ಬಂಧಿಸಲಾಗಿದೆ ಎಂದು ಪೌರಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಚಂದ್ರ ಸುಯಲ್ ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಗೌತಮ್ ಅದಾನಿಯ ಹಿರಿಯ ಸಹೋದರ ವಿನೋದ್ ಶಾಂತಿಲಾಲ್ ಅತ್ಯಂತ ಶ್ರೀಮಂತ ಅನಿವಾಸಿ ಭಾರತೀಯ