ಮೊಬೈಲ್ ಸದ್ಭಳಕೆ ಉಪಕಾರಿ, ದುರ್ಬಳಕೆ ಅಪಾಯಕಾರಿ: ಡಾ.ಕಿರಣ್
ಉಡುಪಿ, ಸೆ.24: ಮೊಬೈಲ್ನಿಂದ ಹಲವು ಸಾಧನ, ಸಲಕರಣೆಗಳು ಮನುಷ್ಯ ಸಂಪರ್ಕದಿಂದ ದೂರಾಗಿದೆ. ನಾವು ಎಂದಿಗೂ ಮೊಬೈಲ್ ಗುಲಾಮ ನಾಗಬಾರದು. ಮೊಬೈಲ್ ಸದ್ಭಳಕೆ ಉಪಕಾರಿ, ದುರ್ಬಳಕೆ ಅಪಾಯಕಾರಿ ಯಾಗಿದೆ. ಯಾವುದೇ ಕಾರಣಕ್ಕೂ ದುರ್ಬಳಕೆಗೆ ಬಲಿಯಾಗಬಾರದು ಎಂದು ಮಣಿಪಾಲ ಕೆಎಂಸಿ ಮೂಳೆ ಚಿಕಿತ್ಸಾ ವಿಭಾಗ ಪ್ರಾಧ್ಯಾಪಕ ಡಾ.ಕಿರಣ್ ಆಚಾರ್ಯ ಹೇಳಿದ್ದಾರೆ.
ಚಾಣಕ್ಯ ಪ್ರಕಾಶನದ ವತಿಯಿಂದ ಡಾ.ಪಿ.ವಿ.ಭಂಡಾರಿ, ಸೌಜನ್ಯಾ ಶೆಟ್ಟಿ, ವಿದ್ಯಾಶ್ರೀ ಎಂ.ಎಸ್. ರಚಿತ ಮೊಬೈಲ್ ಫೋನ್ ಎಫೆಕ್ಟ್: ನೀವೆಷ್ಟು ಸ್ಮಾರ್ಟ್ ? ಕೃತಿಯನ್ನು ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್ ಎ.ಬಾಳಿಗಾ ಸಭಾಂಗಣದಲ್ಲಿ ಶನಿವಾರ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮಾನಸಿಕ ಆರೋಗ್ಯ ವಿಭಾಗದ ಪ್ರಾಧ್ಯಾಪಕ ಡಾ.ಶ್ರೀನಿವಾಸ ಭಟ್ ಯು. ‘ನಡವಳಿಕೆ ಸಮಸ್ಯೆ’ ಕುರಿತು ವಿಶೇಷ ಉಪನ್ಯಾಸ ನೀಡಿ, ಮೊಬೈಲ್ ಅವಲಂಬನೆ ಅತಿರೇಕದ, ನಿಯಂತ್ರಣ ಮಾಡಲಾಗದ ಸಮಸ್ಯೆಯಾಗುತ್ತಿದೆ. ಮಕ್ಕಳನ್ನು ಮೊಬೈಲ್ ಚಟದಿಂದ ಹೊರತರಲು ಯತ್ನಿಸುವ ಹೆತ್ತವರು ಮೊದಲು ತಾವೇ ಪರ್ಯಾಯ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸಬೇಕು. ತಂತ್ರಜ್ಞಾನ ಬೆಳೆದಂತೆ ನಿಜ ಜೀವನವನ್ನು ಮರೆತು ಕೃತಕ ಜಗತ್ತಿನಲ್ಲಿ ಜೀವನದ ಉದ್ದೇಶ ವ್ಯರ್ಥವಾಗಬಾರದು ಎಂದರು.
ಅಧ್ಯಕ್ಷತೆಯನ್ನು ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ.ಭಂಡಾರಿ ವಹಿಸಿದ್ದರು. ಆಸ್ಪತ್ರೆ ಆಡಳಿತಾಧಿಕಾರಿ ಸೌಜನ್ಯಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮನಶಾಸ್ತ್ರಜ್ಞ ನಾಗರಾಜ್ ಮೂರ್ತಿ ಪುಸ್ತಕ ಪರಿಚಯ ಮಾಡಿದರು. ಸುರೇಶ್ ಎಸ್.ನಾವೂರು ಕಾರ್ಯಕ್ರಮ ನಿರೂಪಿಸಿ ದರು. ವಿದ್ಯಾಶ್ರೀ ಎಂ.ಎಸ್.ವಂದಿಸಿದರು.