ಮೊದಲ ಟ್ವೆಂಟಿ-20: ಭಾರತಕ್ಕೆ 107 ರನ್ ಗುರಿ ನೀಡಿದ ದಕ್ಷಿಣ ಆಫ್ರಿಕಾ
ಏಳು ವಿಕೆಟ್ ಹಂಚಿಕೊಂಡ ಅರ್ಷದೀಪ್ ಸಿಂಗ್, ದೀಪಕ್ ಚಹಾರ್, ಹರ್ಷಲ್ ಪಟೇಲ್
ತಿರುವನಂತಪುರ, ಸೆ.28: ಶಿಸ್ತುಬದ್ದ ಬೌಲಿಂಗ್ ದಾಳಿ ನಡೆಸಿದ ಭಾರತದ ಬೌಲರ್ಗಳಾದ ಅರ್ಷದೀಪ್ ಸಿಂಗ್(3-32), ದೀಪಕ್ ಚಹಾರ್(2-24) ಹಾಗೂ ಹರ್ಷಲ್ ಪಟೇಲ್(2-26) ದಕ್ಷಿಣ ಆಫ್ರಿಕಾವನ್ನು 20 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 106 ರನ್ಗೆ ನಿಯಂತ್ರಿಸಿದರು.
ಗ್ರೀನ್ಫೀಲ್ಡ್ ಇಂಟರ್ನ್ಯಾಶನಲ್ ಕ್ರೀಡಾಂಗಣದಲ್ಲಿ ಟಾಸ್ ಜಯಿಸಿದ ಭಾರತವು ದಕ್ಷಿಣ ಆಫ್ರಿಕಾವನ್ನು ಮೊದಲು ಬ್ಯಾಟಿಂಗ್ಗೆ ಇಳಿಸಿತು.
2.3ನೇ ಓವರ್ನಲ್ಲಿ 9 ರನ್ ಗಳಿಸುವಷ್ಟರಲ್ಲಿ ದಕ್ಷಿಣ ಆಫ್ರಿಕಾವು ಅಗ್ರ ಕ್ರಮಾಂಕದ ಐವರು ಬ್ಯಾಟರ್ಗಳನ್ನು ಕಳೆದುಕೊಂಡಿತು. ನಾಯಕ ಟೆಂಬಾ ಬವುಮಾ(0), ಕ್ವಿಂಟನ್ ಡಿಕಾಕ್(1), ರೊಸ್ಸೌ(0), ಡೇವಿಡ್ ಮಿಲ್ಲರ್(0) ಹಾಗೂ ಟ್ರಿಸ್ಟನ್ ಸ್ಟಬ್ಸ್(0) ಅವರು ಅರ್ಷದೀಪ್ ಹಾಗೂ ದೀಪಕ್ ಚಹಾರ್ ದಾಳಿಗೆ ಕಂಗಾಲಾಗಿ ವಿಕೆಟ್ ಕೈಚೆಲ್ಲಿದರು.
ಆಗ ವೇಯ್ನ ಪಾರ್ನೆಲ್(24 ರನ್, 37 ಎಸೆತ)ಹಾಗೂ ಮರ್ಕ್ರಮ್(25)6ನೇ ವಿಕೆಟಿಗೆ 33 ರನ್ ಸೇರಿಸಿ ತಂಡವನ್ನು ಭಾರೀ ಕುಸಿತದಿಂದ ಮೇಲೆತ್ತಿದರು. ಈ ಇಬ್ಬರು ಔಟಾದ ಬಳಿಕ ಅಗ್ರ ಸ್ಕೋರರ್ ಕೇಶವ ಮಹಾರಾಜ್(41 ರನ್, 35 ಎಸೆತ, 5 ಬೌಂಡರಿ, 2 ಸಿಕ್ಸರ್)ಬಾಲಂಗೋಚಿ ಕಾಗಿಸೊ ರಬಾಡ(ಔಟಾಗದೆ 7)ಅವರೊಂದಿಗೆ 8ನೇ ವಿಕೆಟಿಗೆ 33 ರನ್ ಸೇರಿಸಿ ದಕ್ಷಿಣ ಆಫ್ರಿಕಾದ ಸ್ಕೋರನ್ನು 100ರ ಗಡಿ ದಾಟಿಸಿದರು.