ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ಕರ್ನಾಟಕ ಅಂಡರ್-14 ಕ್ರಿಕೆಟ್ ತಂಡದ ನಾಯಕ
ಬೆಂಗಳೂರು, ಜ.19: ಭಾರತದ ಬ್ಯಾಟಿಂಗ್ ದಂತಕತೆ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಅಂತರ್ವಲಯ ಟೂರ್ನಿಯಲ್ಲಿ ಕರ್ನಾಟಕದ ಅಂಡರ್-14 ಕ್ರಿಕೆಟ್ ತಂಡದ ನಾಯಕನಾಗಿ ಆಯ್ಕೆಯಾಗುವ ಮೂಲಕ ತನ್ನ ತಂದೆಯ ಹೆಜ್ಜೆಯನ್ನು ಅನುಸರಿಸಿದ್ದಾರೆ.
ಅನ್ವಯ್ ತನ್ನ ವಯಸ್ಸಿಗೆ ಉತ್ತಮ ಬ್ಯಾಟರ್ ಆಗಿದ್ದು, ಕಠಿಣ ಪರಿಶ್ರಮ ಹಾಗೂ ಬ್ಯಾಟ್ನೊಂದಿಗೆ ಸ್ಥಿರತೆಗೆ ತಕ್ಕ ಫಲ ಪಡೆದಿದ್ದಾರೆ. ಅನ್ವಯ್ ಕರ್ನಾಟಕದ ಪರ ಜೂನಿಯರ್ ಕ್ರಿಕೆಟ್ ಆಡಲಿದ್ದು, ತನ್ನ ತಂಡದ ನಾಯಕನಾಗಿ ನೇಮಿಸಲ್ಪಟ್ಟಿದ್ದಾರೆ.
ಕುತೂಹಕಾರಿ ವಿಚಾರವೆಂದರೆ ಅನ್ವಯ್ ತನ್ನ ತಂದೆಯಂತೆಯೇ ವಿಕೆಟ್ಕೀಪರ್ ಆಗಿದ್ದಾರೆ. ರಾಹುಲ್ ದ್ರಾವಿಡ್ ನಿರ್ದಿಷ್ಟ ಸಮಯದ ವರೆಗೆ ಭಾರತದ ಏಕದಿನ ಹಾಗೂ ಟೆಸ್ಟ್ ತಂಡದ ಪೂರ್ಣಾಕಾಲಿಕ ವಿಕೆಟ್ಕೀಪರ್ ಆಗಿದ್ದರು. ಭಾರತವು ಉತ್ತಮ ವಿಕೆಟ್ಕೀಪಿಂಗ್ಗಾಗಿ ಪರದಾಡುತ್ತಿದ್ದಾಗ ಜವಾಬ್ದಾರಿ ವಹಿಸಿಕೊಂಡಿದ್ದರು. ಧೋನಿ ಆಗಮನದ ಬಳಿಕ ಅವರು ಬ್ಯಾಟರ್ ಆಗಿ ಉಳಿದರು.
ದ್ರಾವಿಡ್ ಅವರ ಹಿರಿಯ ಪುತ್ರ ಸಮಿತ್ ಕೂಡ ಕ್ರಿಕೆಟ್ನಲ್ಲಿ ಹೆಸರು ಗಳಿಸಲು ಎದುರು ನೋಡುತ್ತಿದ್ದು 2019-20ರ ಋತುವಿನಲ್ಲಿ ಅಂಡರ್-14 ಮಟ್ಟದಲ್ಲಿ ಎರಡು ಬಾರಿ ದ್ವಿಶತಕ ಸಿಡಿಸಿದ್ದರು.
Anvay Dravid, #RahulDravid ‘s younger son to lead #Karnataka U-14 team in the inter zonal tournament (South Zone) pic.twitter.com/ynvwtbLN6G
— Manuja (@manujaveerappa) January 19, 2023