ಹುಬ್ಬಳ್ಳಿ: ರೈತರಿಂದ ಪ್ರತಿಭಟನೆ, 'ಗೋ ಬ್ಯಾಕ್ ಅಮಿತ್ ಶಾ' ಘೋಷಣೆ
ಹುಬ್ಬಳ್ಳಿ: ಮಹದಾಯಿ ಯೋಜನೆ ಹಾಗೂ ಕೃಷ್ಣಾ ನೀರಾವರಿ ಯೋಜನೆ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಹೋರಾಟ ಸಮಿತಿ ಸದಸ್ಯರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಶನಿವಾರ ಬೆಳಿಗ್ಗೆ ನಗರದ ದುರ್ಗಬೈಲ್ ಬಳಿ ಜಮಾಯೊಸಿದ ಪ್ರತಿಭಟನಾಕಾರರು , ''ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿರುವುದು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಅಲ್ಲ. ಅದು ನೆಪಮಾತ್ರವಾಗಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಹಣ ಹಂಚಲು ಅವರು ಬರುತ್ತಿದ್ದಾರೆ. ಅವರು ಬರುವ ವಿಮಾನವನ್ನು ಚುನಾವಣಾಧಿಕಾರಿಗಳು ಪರಿಶೀಲಿಸಬೇಕು'' ಎಂದು ಒತ್ತಾಯಿಸಿದರು.
'ಗೋ ಬ್ಯಾಕ್ ಅಮಿತ್ ಶಾ' ಘೋಷಣೆ:
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ನಗರಕ್ಕೆ ಆಗಮಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಭಾವಚಿತ್ರ ಸುಟ್ಟು, 'ಗೋ ಬ್ಯಾಕ್ ಅಮಿತ್ ಶಾ' ಎಂದು ಘೋಷಣೆ ಕೂಗಿದರು.