ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯ ಸಾವಿಗೆ ಕಾರಣವಾಗಿದ್ದ ಪತಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ಬೆಂಗಳೂರು: ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯ ಸಾವಿಗೆ ಕಾರಣವಾಗಿದ್ದ ವ್ಯಕ್ತಿಗೆ ಬೆಂಗಳೂರಿನ 71ನೆ ಸಿಸಿಎಚ್ ನ್ಯಾಯಾಲಯ 10 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
ಮಧುಗಿರಿ ಮೂಲದ ರಾಮ್ ಪ್ರಸಾದ್ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಈತನ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ವಿ.ಪಕಾಶ್ ಶಿಕ್ಷೆ ವಿಧಿಸಿ ಅದೇಶಿಸಿದ್ದಾರೆ.
ಎಂಎಸ್ಸಿ-ಬಿಎಡ್ ಓದಿದ್ದ ಮಂಡ್ಯದ ಲಾವಣ್ಯ ಎಂಬುವರನ್ನು ರಾಮಪ್ರಸಾದ್ ಪ್ರೀತಿಸಿ ವಿವಾಹವಾಗಿದ್ದ. ಮದುವೆಯ ಆರಂಭದ ದಿನಗಳಲ್ಲಿ ಪತ್ನಿಯೊಂದಿಗೆ ಮಂಡ್ಯದಲ್ಲೇ ವಾಸವಿದ್ದ ರಾಮಪ್ರಸಾದ ನಂತರ ವಾಸ್ತವ್ಯವನ್ನು ಬೆಂಗಳೂರಿಗೆ ವರ್ಗಾಯಿಸಿದ್ದ.
2015ರ ಜೂ.11ರಂದು ಪತಿ ರಾಮಪ್ರಸಾದ್ ಮನೆಯಲ್ಲಿದ್ದ ವೇಳೆಯೇ ಲಾವಣ್ಯ ನೇಣಿಗೆ ಕೊರಳೊಡ್ಡಿದ್ದರು. ಈ ಸಂಬಂಧ ಲಾವಣ್ಯ ತಂದೆ ಅಮೃತಹಳ್ಳಿ ಪೆÇಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನಲ್ಲಿ, ರಾಮಪ್ರಸಾದ್ ಹೆಚ್ಚಿನ ವರದಕ್ಷಿಣೆ ತರುವಂತೆ ಲಾವಣ್ಯಗೆ ಕಿರುಕುಳ ನೀಡುತ್ತಿದ್ದ. ಇದಲ್ಲದೇ ಮೇಲ್ಜಾತಿಗೆ ಸೇರಿರುವ ರಾಮಪ್ರಸಾದ್ ಮತ್ತು ಕುಟುಂಬದವರು ತಮ್ಮ ಮಗಳಿಗೆ ಜಾತಿ ನಿಂದನೆ ಮಾಡಿದ್ದಾರೆ, ಈ ಕಾರಣಕ್ಕೆ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಾವಿಗೂ ಮುನ್ನ ಲಾವಣ್ಯ ಡೈರಿಯಲ್ಲಿ ಪತಿಯ ಕಿರುಕುಳ, ಮಾನಸಿಕ ಹಿಂಸೆ, ದೈಹಿಕ ಕಿರುಕುಳ ಕುರಿತಂತೆ ದಾಖಲಿಸಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದರು.
ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 498(ಎ), 304(ಬಿ), 109 ಆರ್/ಡಬ್ಯ್ಲೂ 34 ಹಾಗೂ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3(2)(ವಿ) ಅಡಿ ಎಫ್ಐಆರ್ ದಾಖಲಿಸಿ, ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅಭಿಯೋಜನೆ ಪರ ವಿಶೇಷ ಸರಕಾರಿ ಅಭಿಯೋಜಕ ವಿ. ಶ್ರೀರಾಮ ವಾದ ಮಂಡಿಸಿದ್ದರು.