ನಂದಿನಿ ಸಂಸ್ಥೆ ಕುರಿತಂತೆ ನಿರ್ಮಲಾ ಸೀತಾರಾಮನ್ರಿಗೆ 14 ಪ್ರಶ್ನೆಗಳು
ದೇಶದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಬೆಂಗಳೂರಿನಲ್ಲಿ ಸಭೆಯೊಂದನ್ನು ನಡೆಸಿದ್ದಾರೆ. ಆ ಸಭೆಯಲ್ಲಿ ಚುನಾವಣಾ ಪ್ರಚಾರವನ್ನು ಮಾಡಿಕೊಂಡು ಹೋಗಿದ್ದರೆ ನಮಗೇನೂ ತಕರಾರುಗಳು ಇರುತ್ತಿರಲಿಲ್ಲ, ಆದರೆ ಕರ್ನಾಟಕಕ್ಕೆ ಚಿನ್ನದ ಕಿರೀಟವನ್ನೆ ತೊಡಿಸಿದ್ದೇವೆಂದು ಆತ್ಮದ್ರೋಹದ ಮಾತನಾಡಿದ್ದಾರೆ. ಕರ್ನಾಟಕಕ್ಕೆ ಅಮುಲ್ ಬಂದಿದ್ದು ರಾಜ್ಯದ ರೈತರ ನೆರವಿಗೆ ಎಂಬಂತೆ ಮಾತನಾಡಿದ್ದಾರೆ.
ಬಿಜೆಪಿಯು ಮೊದಲಿನಿಂದಲೂ ಕರ್ನಾಟಕ ದ್ರೋಹಿ ರಾಜಕಾರಣವನ್ನೇ ಮಾಡಿಕೊಂಡು ಬಂದಿದೆ. ಅದರಲ್ಲೂ ಮೋದಿ, ಅಮಿತ್ ಶಾ ಜೋಡಿಯು ಬಿಜೆಪಿಯ ಚುಕ್ಕಾಣಿ ಹಿಡಿದ ಮೇಲಂತೂ ಕರ್ನಾಟಕದ ಆರ್ಥಿಕತೆಯನ್ನು ಹುರಿದು ಮುಕ್ಕುತ್ತಿದ್ದಾರೆ. ಇವರಿಬ್ಬರ ತಾಳಕ್ಕೆ ನಿರ್ಮಲಾ ಸೀತಾರಾಮನ್ ಆಗಾಗ ತಂಬೂರಿ ನುಡಿಸುತ್ತಾರೆ.
ನಿರ್ಮಲಾ ಸೀತಾರಾಮನ್ ಅವರಿಗೆ ಹತ್ತಾರು ಬಾರಿ ಪ್ರಶ್ನೆಗಳನ್ನು ಕೇಳಿದ್ದೇನೆ ಆದರೂ ಅವರು ಹೇಳಿದ ಸುಳ್ಳುಗಳನ್ನೇ ಹೇಳಿಕೊಂಡು ಓಡಾಡಿದ್ದಾರೆ. ರಾಜ್ಯಕ್ಕೆ ಕೇಂದ್ರದ ಕೊಡುಗೆಗಳೇನು? ಆರ್ಥಿಕತೆ, ಅಭಿವೃದ್ಧಿಯ ವಿಚಾರದಲ್ಲಿ ಕರ್ನಾಟಕದ ಬೆನ್ನಿಗೆ ಎಷ್ಟು ಸಾರಿ ಮೋದಿ ಅಮಿತ್ ಶಾ ಸರಕಾರ ಇರಿದಿದೆ ಎಂಬುದರ ಗಾಯದ ಗುರುತುಗಳು ಹೇಳುತ್ತಿವೆ. ಈಗ ನಿರ್ಮಲಾ ಸೀತಾರಾಮನ್ ಅವರು ಅಮುಲ್ ಹಾಲಿಗೆ ರಾಯಭಾರಿತನ ಮಾಡಲು ಬಂದಿದ್ದಾರೆ. ಮೊದಲು ಹಲವು ಪ್ರಶ್ನೆಗಳಿಗೆ ಉತ್ತರ ನೀಡಬೇಕು.
► 1. ಜಾನುವಾರುಗಳ ಬಗ್ಗೆ ಮಾತನಾಡುವ ಬಿಜೆಪಿಯು ಕರ್ನಾಟಕದ ಜಾನುವಾರುಗಳ ಅಭಿವೃದ್ಧಿಗೆ ಏನು ಮಾಡಿದೆ? ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಜಾನುವಾರುಗಳಿಗೆ ಸಂಬಂಧಪಟ್ಟಂತೆ ಎರಡು ಮುಖ್ಯ ಕಾರ್ಯಕ್ರಮಗಳಿವೆ. ರಾಷ್ಟ್ರೀಯ ಜಾನುವಾರು ಮಿಷನ್ ಮತ್ತು ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಯೋಜನೆ. ಇವುಗಳಿಗೆ ನಿರ್ಮಲಾ ಸೀತಾರಾಮನ್ ಅವರ ಸರಕಾರ ಎಷ್ಟು ಹಣ ಕೊಡುತ್ತದೆ ಎಂದು ಹೇಳಿತ್ತು? ಮಾರ್ಚ್ 2023ರ ಅಂತ್ಯಕ್ಕೆ ರಾಜ್ಯಕ್ಕೆ ಬಿಡುಗಡೆ ಮಾಡಿದ ಅನುದಾನ ಎಷ್ಟು?
► 2. ರಾಷ್ಟ್ರೀಯ ಜಾನುವಾರು ಮಿಷನ್ಗೆ ಮೋದಿ ಸರಕಾರ ಕರ್ನಾಟಕಕ್ಕೆ 9.7 ಕೋಟಿ ರೂ. ಕೊಡುತ್ತದೆೆ ಎಂದು ಹೇಳಿತ್ತು, ಆದರೆ ನಯಾ ಪೈಸೆಯನ್ನೂ ಕೊಡಲಿಲ್ಲ ಯಾಕೆ?
► 3. ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಯೋಜನೆಗೆ 25.44 ಕೋಟಿ ರೂ. ಒದಗಿಸುವುದಾಗಿ ಮೋದಿ ಸರಕಾರ ಹೇಳಿತ್ತು, ಆದರೆ ಬಿಡುಗಡೆ ಮಾಡಿದ್ದು 4.66 ಕೋಟಿ ರೂ.ಗಳೆಂದು ಬೊಮ್ಮಾಯಿ ಸರಕಾರದ ದಾಖಲೆಗಳು ಹೇಳುತ್ತಿವೆ. ರಾಜ್ಯದ ಜಾನುವಾರುಗಳಿಗೆ ಅತ್ಯಂತ ಗಂಭೀರವಾದ ಚರ್ಮಗಂಟು ರೋಗ ಬಂದಿತ್ತು, ಆದರೂ ನಿರ್ಮಲಾ ಸೀತಾರಾಮನ್ ಅವರು ಹಣ ಬಿಡುಗಡೆ ಮಾಡಲಿಲ್ಲ. ಇದನ್ನು ಕರ್ನಾಟಕಕ್ಕೆ ಮಾಡಿದ ದ್ರೋಹ ಎಂದು ಕರೆಯದೆ ಇನ್ನೇನು ಹೇಳಬೇಕು?
► 4. ಚರ್ಮಗಂಟು ಕಾಯಿಲೆ, ಪಶು ಆಹಾರಗಳ ಬೆಲೆ ಏರಿಕೆ, ಹಸು-ಎಮ್ಮೆಗಳನ್ನು ಸಾಕಲು ಸರಕಾರಗಳು ಕೊಡುತ್ತಿರುವ ಕಿರುಕುಳಗಳಿಂದ ರೈತರು ಜಾನುವಾರು ಸಾಕಣೆಯ ಕುರಿತು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಪ್ರತೀ ದಿನ ಸುಮಾರು 25-30 ಲಕ್ಷ ಲೀಟರುಗಳಷ್ಟು ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ರೈತರಿಗೆ ಪ್ರತಿದಿನ 8-10 ಕೋಟಿ ರೂ. ಗಳಷ್ಟು ನಷ್ಟ ಸಂಭವಿಸುತ್ತಿದೆ. ಆದರೂ ಮೋದಿ ಸರಕಾರವಾಗಲಿ, ಬೊಮ್ಮಾಯಿ ಸರಕಾರವಾಗಲಿ ರೈತರಿಗೆ ನಯಾಪೈಸೆಯಷ್ಟೂ ಪರಿಹಾರ ಕೊಡಲಿಲ್ಲ ಯಾಕೆ?
► 5. ಹಿಂಡಿ ಸೇರಿದಂತೆ ಜಾನುವಾರು ಆಹಾರ, ಪಶು ಚಿಕಿತ್ಸೆಗೆ ಬಳಸುವ ಔಷಧಗಳಿಗೆ ವಿಪರೀತ ಜಿಎಸ್ಟಿ ವಿಧಿಸಲಾಗುತ್ತಿದೆ. ಅದನ್ನು ನಿಲ್ಲಿಸಿ ಎಂದು ನಾನು ಅನೇಕ ತಿಂಗಳುಗಳಿಂದ ಒತ್ತಾಯಿಸುತ್ತಿದ್ದೇನೆ, ಆದರೂ ನಿರ್ಮಲಾ ಸೀತಾರಾಮನ್ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಯಾಕೆ?
► 6. ಕರ್ನಾಟಕದಲ್ಲಿ ನಿರಂತರ ಪ್ರವಾಹ ಬಂದು ಜಾನುವಾರು ಮರಣ ಹೊಂದಿದವು. ರೈತರಿಗೆ ವಿಪರೀತ ನಷ್ಟವಾಯಿತು. ಆದರೆ ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಹಣ ಬಿಡುಗಡೆ ಮಾಡಿ ಎಂದು ಮೆಮೊರಾಂಡಮ್ ಕೊಟ್ಟರೆ ಕೇಳಿದ ಅರ್ಧದಷ್ಟು ಹಣವನ್ನೂ ಯಾಕೆ ಬಿಡುಗಡೆ ಮಾಡಲಿಲ್ಲ?
► 7. ಚಿಕ್ಕಬಳ್ಳಾಪುರದ ಗೋಶಾಲೆಯೊಂದಕ್ಕೆ ಮೇವು ಸರಬರಾಜು ಮಾಡಿದ್ದಕ್ಕೆ ಹಣ ಬಿಡುಗಡೆ ಮಾಡಲು ಶೇ.40ಕ್ಕೂ ಹೆಚ್ಚು ಲಂಚ ಕೇಳಿದರೆಂದು ಪತ್ರಿಕೆಗಳಲ್ಲಿ ವರದಿಯಾಯಿತು, ಆದರೂ ಬಿಜೆಪಿ ಸರಕಾರಗಳು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಏಕೆ?
► 8. ನಾನು ಮುಖ್ಯಮಂತ್ರಿಯಾಗಿದ್ದಾಗ ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಪ್ರತೀ ಲೀಟರಿಗೆ 5 ರೂ.ಗೆ ಹೆಚ್ಚಿಸಿದ್ದೆ ಆದರೆ ಬಿಜೆಪಿ ಸರಕಾರ ಒಂದೇ ಒಂದು ರೂ.ಯನ್ನೂ ಹೆಚ್ಚಿಸಲಿಲ್ಲ ಯಾಕೆ?
► 9. ಆಸ್ಟ್ರೇಲಿಯ, ನ್ಯೂಝಿಲ್ಯಾಂಡ್ಗಳ ಜೊತೆ ಹಾಲು ಮತ್ತಿತರ ಹೈನು ಪದಾರ್ಥಗಳ ವ್ಯಾಪಾರ ಮಾಡಲು ಕಾರ್ಪೊರೇಟ್ ಬಂಡವಾಳಿಗರ ಜೊತೆ ಆರ್ಸಿಇಪಿ ಎಂಬ ಒಪ್ಪಂದ ಮಾಡಿಕೊಳ್ಳಲು ಮೋದಿ ಸರಕಾರ ಮಾತುಕತೆ ಮಾಡಿದ್ದು/ಈಗಲೂ ಕೆಲವು ಕಾರ್ಪೊರೇಟ್ ಹಿತಾಸಕ್ತಿಗಳು ಪ್ರಯತ್ನಿಸುತ್ತಿರುವುದು ಸುಳ್ಳೆ?
► 10. ಸಹಕಾರ ವ್ಯವಸ್ಥೆಯು ಸಂವಿಧಾನದ ಪ್ರಕಾರ ರಾಜ್ಯ ಸರಕಾರಗಳ ವ್ಯಾಪ್ತಿಗೆ ಒಳಪಟ್ಟಿದ್ದು, ಅದರೆ ಕೇಂದ್ರದಲ್ಲಿ ಸಹಕಾರ ಇಲಾಖೆಯನ್ನು ಸ್ಥಾಪಿಸಿ ಅಮಿತ್ ಶಾ ಅವರನ್ನು ಮಂತ್ರಿ ಮಾಡಿದ್ದರ ಹಿಂದಿನ ಮರ್ಮ ಏನು?
► 11. ಅಮಿತ್ ಶಾ ಅವರು 2022ರ ಡಿಸೆಂಬರ್ನಲ್ಲಿ ಬಹುರಾಜ್ಯಗಳ ಸಹಕಾರಿಗಳ ನಿರ್ವಹಣೆ ಮತ್ತು ನಿಯಂತ್ರಣಗಳ ಬಗ್ಗೆ ಮಸೂದೆ ತಂದಿದ್ದು ಯಾಕೆ? ನಮ್ಮ ರಾಜ್ಯದ ಹಾಲು ಮುಂತಾದ ಸಹಕಾರಿ ಸಂಘಗಳನ್ನು ನಾಶ ಮಾಡುವುದು ತಾನೆ ಇದರ ಹಿಂದಿನ ಉದ್ದೇಶ?
► 12. 2022ರ ಡಿಸೆಂಬರಿನಲ್ಲಿ ಮಂಡ್ಯದ ಗೆಜ್ಜಲಗೆರೆಯಲ್ಲಿ ಅಮುಲ್-ನಂದಿನ ವಿಲೀನದ ಪ್ರಸ್ತಾಪವನ್ನು ಅಮಿತ್ ಶಾ ಅವರು ಮಾಡಿದ್ದು ಯಾಕೆ?
► 13. ನಂದಿನಿ ಮೊಸರಿನ ಮೇಲೆ ‘ದಹಿ’ ಎಂದು ಹಿಂದಿಯಲ್ಲಿ ಮುದ್ರಿಸಲು ಆದೇಶ ಹೊರಡಿಸಿದ್ದು ಏಕೆ? ಬೆಂಗಳೂರಿನಲ್ಲಿ ಹಾಲು ಮತ್ತು ಹಾಲಿನ ಕೃತಕ ಅಭಾವ ಸೃಷ್ಟಿಯಾಗಲು ಕಾರಣವೇನು?
► 14. ನಂದಿನಿಯಲ್ಲಿ ನಡೆಸುತ್ತಿರುವ ನೇಮಕಾತಿಗೂ ಗುಜರಾತಿನ ಕಂಪೆನಿಯೆ ಏಕೆ ಬೇಕು?
ಮೊದಲು ಈ ಪ್ರಶ್ನೆಗಳಿಗೆ ಉತ್ತರ ಕೊಟ್ಟು ನಂತರ ನಮ್ಮ ನಂದಿನಿಯ ಬಗ್ಗೆ ಮಾತನಾಡಲಿ.