ಅಪಾಯದ ಅಂಚಿನಲ್ಲಿ ಜಾಲಿಕೋಡಿ ಕಾಲ್ಸೇತುವೆ; ಪ್ರಾಣಭೀತಿಯಲ್ಲಿರುವ ಗ್ರಾಮಸ್ಥರು
ಪಂಚಾಯತ್ ಕಚೇರಿಗೆ ಬೀಗ ಜಡಿದು ಪ್ರತಿಭಟಿಸುವ ಎಚ್ಚರಿಕೆ
ಭಟ್ಕಳ, ಜೂ. 28: ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜಾಲಿಕೋಡಿ ಮಜಿರೆಯಲ್ಲಿನ ಕಾಲುಸಂಕವೂ (ಕಾಲ್ಸೇತು) ಅಪಾಯಕಾರಿ ರೀತಿಯಲ್ಲಿದ್ದು, ಇಲ್ಲಿನ ಸ್ಥಳಿಯರು ಮಳೆಗಾಲದಲ್ಲಿ ಈ ಭಾಗದ ಗ್ರಾಮಸ್ಥರು ಪ್ರಾಣಭೀತಿಯನ್ನು ಎದುರಿಸುವಂತಾಗಿದೆ.
ಕಾಲು ಸಂಕದ ಅಕ್ಕಪಕ್ಕ ಹಾಕಲಾಗುವ ತಡೆಕಂಬ(ಕಟ್ಟೆ)ವನ್ನು ನಿರ್ಮಾಣವಾದ ದಿನದಿಂದಲೂ ಹಾಕದೇ 10 ವರ್ಷ ಕಳೆದಿದ್ದು, ಈಗ ಅಪಾಯಕಾರಿ ಕಾಲುಸಂಕಕ್ಕೆ ಇಲ್ಲಿನ ಸ್ಥಳಿಯರು ಶೀಘ್ರದಲ್ಲಿ ಪಂಚಾಯತ್ ತಡೆಕಂಬ (ಕಟ್ಟೆ)ವನ್ನು ಹಾಕಿಕೊಡಬೇಕೆಂದು ಆಗ್ರಹಿಸುತ್ತಿದ್ದಾರೆ.
ಕಳೆದ 10ವರ್ಷದ ಹಿಂದೆ ಇಲ್ಲಿನ ಸ್ಥಳಿಯ ನಿವಾಸಿಗರು ಇಲಾಖೆ ಹಾಗೂ ಪಂಚಾಯತ್ ಎದುರು ಸೇರಿ ಪತ್ರಿಭಟಿಸಿ ಜಾಲಿಕೋಡಿಯಲ್ಲಿ ಜನರು ತಿರುಗಾಡುವ ಕಾಲು ಸಂಕವನ್ನು ನಿರ್ಮಿಸಿಕೊಂಡಿದ್ದರು. ಪ್ರತಿಭಟನೆಗೆ ಹೆದರಿ ಜಾಲಿ ಪಂಚಾಯತ್ ಹಾಗೂ ಇಲಾಖೆ ಅಂದು ಕಾಲುಸಂಕವನ್ನು ನಿರ್ಮಾಣ ಮಾಡಿಕೊಟ್ಟಿತ್ತು. ಆದರೆ ನಿರ್ಮಾಣದ ವೇಳೆ ಬೇಜವಾಬ್ದಾರಿ ಕಾಮಗಾರಿ ನಡೆಸಿ ಕಾಲು ಸಂಕದಲ್ಲಿ ತಿರುಗಾಡಲು ಹಾಕಲಾಗುವ ತಡೆಕಂಬ (ಕಟ್ಟೆ)ವನ್ನೇ ನಿರ್ಮಿಸದೇ ಕೇವಲ ಸರಳುಗಳನ್ನು ಹಾಕಿ ಹಾಗೆ ಬಿಟ್ಟಿದ್ದರು. ಬಳಿಕ ಅದನ್ನು ಕಿಡಿಗೇಡಿಗಳು ಕಿತ್ತು ಇನ್ನಷ್ಟು ಅಪಾಯಕಾರಿ ಕಾಲುಸಂಕವನ್ನಾಗಿಸಿದ್ದರು. ಈ ಬಗ್ಗೆ ಇಲ್ಲಿನ ಸ್ಥಳಿಯರು ಅಂದಿನಿಂದ ಪಂಚಾಯತಗೆ ಅಸಮರ್ಪಕ ಕಾಲು ಸಂಕ ನಿರ್ಮಾಣ ಮಾಡಿಕೊಡುವಂತೆ ಮನವಿಯನ್ನು ಸಲ್ಲಿಸಿದ್ದರು ಎಂದು ಈ ವೇಳೆ ಸ್ಥಳೀಯರು ತಿಳಿಸಿದ್ದಾರೆ.
ಈ ಹಿಂದೆ ಇದ್ದ ಜಾಲಿ ಗ್ರಾಮ ಪಂಚಾಯತ್ ಈಗ ಮೇಲ್ದರ್ಜೆಗೆರಿಸಿ ಪಟ್ಟಣ ಪಂಚಾಯತ ಆಗಿದ್ದು ಇಲ್ಲಿನ ಜನರು ಇನ್ನೂ ಕಾಲು ಸಂಕದ ಮೇಲೆ ಭಯದಲ್ಲಿಯೇ ತಿರುಗಾಡುವಂತಾಗಿದೆ. ಕಾಲುಸಂಕ ಆಚೆ ಕಡೆಯಲ್ಲಿ ಒಂದು ಅಂಗನವಾಡಿ ಕೇಂದ್ರವಿದ್ದು, ಚಿಕ್ಕ ಮಕ್ಕಳು ಪ್ರತಿನಿತ್ಯ ಇದೇ ಕಾಲು ಸಂಕದ ಮಾರ್ಗವಾಗಿ ಮನೆಗೆ ತೆರಳುತ್ತಾರೆ. ಸಾಮಾನ್ಯವಾಗಿ ದೊಡ್ಡವರಿಗೆ ಅಪಾಯಕಾರಿ ಕಾಲು ಸಂಕದಲ್ಲಿ ತಿರುಗಾಟುವುದ ಕಷ್ಟ ಸಾಧ್ಯವಾಗಿದ್ದು, ಇನ್ನು ಚಿಕ್ಕ ಮಕ್ಕಳು ಹೇಗೆ ತಾನೇ ಸಂಚರಿಸಲು ಸಾಧ್ಯ ಎನ್ನುವುದು ಸ್ಥಳಿಯರ ಪ್ರಶ್ನೆಯಾಗಿದೆ.
ಸ್ಥಳಿಯ ನಿವಾಸಿ ಅನಂತ ಮಂಜು ನಾಯ್ಕ ಮಾತನಾಡಿದ್ದು ‘ ಈ ಹಿಂದೆ ಈ ಕಾಲು ಸಂಕ ನಿರ್ಮಾಣದ ವೇಳೆಯಲ್ಲಿ ಸ್ಥಳಿಯರೆಲ್ಲ ಸೇರಿ ಪಂಚಾಯತ್ ಎದುರು ಪ್ರತಿಬಟನೆ ಮಾಡಿ ಆ ಮೂಲಕ ಕಾಲುಸಂಕ ನಿರ್ಮಾಣ ಮಾಡಿದ್ದರು. ಆದರೆ ಮೇಲ್ದರ್ಜೇಗೇರಿದ ನಂತರ ಪಂಚಾಯತ್ನಿಂದ ಕಾಲು ಸಂಕದ ತಡೆ ಕಂಬವನ್ನು ನಿರ್ಮಿಸಲು 10 ವರ್ಷವಾದರೂ ಆಗದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ಭಾಗದ ಜನರಿಗೆ ಕಾಲು ಸಂಕವೇ ಮಾರ್ಗವಾಗಿದ್ದು, ಈ ಬಗ್ಗೆ ಮತ್ತೆ ಪಂಚಾಯತ್ ವಿರುದ್ಧ ಪ್ರತಿಭಟನೆ ಮಾಡುವದರೊಳಗೆ ಪಂಚಾಯತ್ ಎಚ್ಚೆತ್ತು ಸಂಕದ ತಡೆ ಕಂಬವನ್ನು ನಿರ್ಮಿಸಿಕೊಡ ಬೇಕೆಂದುಆಗ್ರಹಿಸಿದರು.
ಪಂಚಾಯತ್ಗೆ ಮನವಿ ಮಾಡಿ ರೋಸಿ ಹೋದ ಸ್ಥಳಿಯರು ಇನ್ನು ಕೊನೆಯ ಅಸ್ತ್ರವಾಗಿ ಪಟ್ಟಣ ಪಂಚಾಯತಗೆ ಬೀಗ ಜಡಿದು ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.