ಶಿಕ್ಷಣ, ಆರೋಗ್ಯ, ಉದ್ಯೋಗ ಮೂಲಭೂತ ಹಕ್ಕಾಗಲಿ: ನ್ಯಾ.ಎಚ್.ಎನ್.ನಾಗಮೋಹನ್ದಾಸ್
ಬೆಂಗಳೂರು, ಎ.21: ಸಂವಿಧಾನದ ಮೂಲಭೂತ ಹಕ್ಕುಗಳ ಪಟ್ಟಿಯಲ್ಲಿ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗವನ್ನು ಸೇರಿಸುವ ಮೂಲಕ ದೇಶದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ನೀತಿಗಳನ್ನು ಜನಪರವಾಗಿ ರೂಪಿಸಬೇಕಾದ ಅಗತ್ಯವಿದೆ ಎಂದು ನಿವೃತ್ತ ನ್ಯಾ.ಎಚ್.ಎನ್.ನಾಗಮೋಹನ್ದಾಸ್ ಅಭಿಪ್ರಾಯಿಸಿದ್ದಾರೆ.
ರವಿವಾರ ದಲಿತ ಹಕ್ಕುಗಳ ಸಮಿತಿ, ಸಮಾಜವಾದಿ ಕ್ರಾಂತಿ ಶತಮಾನೋತ್ಸವ ಸಮಿತಿ ನಗರದ ಸೆನೆಟ್ ಸಭಾಂಗಣದಲ್ಲಿ ‘ಸಮಾಜವಾದಿ ಕ್ರಾಂತಿ ಮತ್ತು ಸಾಮಾಜಿಕ ನ್ಯಾಯ’ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರಕಾರಗಳಿಗೆ ಆರ್ಥಿಕ ಹೊರೆ ಇಲ್ಲದಿರುವ ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಆಚರಣೆ, ಪ್ರಯಾಣಿಸುವ, ವಾಸಿಸುವ ಸ್ವಾತಂತ್ರಗಳನ್ನು ಹಕ್ಕಾಗಿ ನೀಡಿ, ಮನುಷ್ಯನೊಬ್ಬ ಸ್ವಾಭಿಮಾನದಿಂದ ಬದುಕಲು ಅಗತ್ಯವಾಗಿರುವ ಉದ್ಯೋಗ, ಆರೋಗ್ಯ ಹಾಗೂ ಶಿಕ್ಷಣವನ್ನು ಹಕ್ಕುಗಳ ಪಟ್ಟಿಯಿಂದ ಕೈಬಿಡುವ ಮೂಲಕ ಸರಕಾರ ತನ್ನ ಜವಾಬ್ದಾರಿಯಿಂದ ನುಣಿಚಿಕೊಳ್ಳುವಂತಾಗಿದೆ. ಹೀಗಾಗಿ ಇವುಗಳನ್ನು ಹಕ್ಕುಗಳ ಪಟ್ಟಿಯಲ್ಲಿ ಸೇರಿಸುವ ಮುಂದಾಗಬೇಕು ಎಂದು ಅವರು ಹೇಳಿದರು.
ಮಿತಿಮೀರಿದ ಖಾಸಗೀಕರಣ: ದೇಶದಲ್ಲಿ ಪ್ರಾರಂಭವಾಗಿರುವ ಖಾಸಗಿ ಕ್ಷೇತ್ರವು ತನ್ನ ಕಬಂಧ ಬಾಹುಗಳನ್ನು ಚಾಚುತ್ತಿರುವುದನ್ನು ನೋಡಿದರೆ ಭಯ ಹುಟ್ಟಿಸುತ್ತದೆ. ನೀರು, ವಸತಿ, ಆರೋಗ್ಯ, ಶಿಕ್ಷಣ ಸೇರಿದಂತೆ ತೀರ ಅಗತ್ಯವಾದ ಎಲ್ಲವೂ ಖಾಸಗೀಕರಣಗೊಂಡಿವೆ. ಇದನ್ನು ನೋಡುತ್ತಾ ಹೋದರೆ ವಿಧಾನಸಭೆ, ಲೋಕಸಭೆಯು ಕೂಡ ಮುಂದೊಂದು ದಿನ ಖಾಸಗಿಕರಣಗೊಳ್ಳುತ್ತದೆ ಎಂಬುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಅವರು ಹೇಳಿದರು.
ನಮ್ಮ ದೇಶದ ಶೇ.50ರಷ್ಟು ಸಂಪತ್ತು ಶೇ.1ರಷ್ಟಿರುವ ಬಂಡವಾಳಶಾಹಿಗಳ ವಶದಲ್ಲಿದೆ. ಇನ್ನು ಶೇ.20ರಷ್ಟು ಸಂಪತ್ತು ಶೇ.9ರಷ್ಟಿರುವ ಆಗರ್ಭ ಶ್ರೀಮಂತರ ಕೈಲಿದ್ದರೆ, ಇನ್ನು ಉಳಿದ ಶೇ.30ರಷ್ಟು ಶೇ.90ರಷ್ಟಿರುವ ಜನಸಾಮಾನ್ಯರಲ್ಲಿ ಹಂಚಿಕೆಯಾಗಿದೆ. ಆ ಮೂಲಕ ಬಡವ-ಶ್ರೀಮಂತರ ನಡುವೆ ಸಾಕಷ್ಟು ಅಂತರವಿದ್ದು, ಇದನ್ನು ಸರಿದೂಗಿಸಬೇಕಾದರೆ ಸಮಾಜವಾದವೊಂದೇ ಪರಿಹಾರವೆಂದು ಅವರು ಹೇಳಿದರು.
ಹೈಕೋರ್ಟ್ನ ನಿವೃತ್ತ ನ್ಯಾ.ಎ.ಜೆ.ಸದಾಶಿವ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ರಲ್ಲಿದ್ದ ಆತ್ಮಬಲ ನಮ್ಮೆಲ್ಲರಿಗೂ ಸ್ಫೂರ್ತಿಯಾಗಬೇಕು. ದಲಿತರ ಮನೆಯಲ್ಲಿ ಹುಟ್ಟಿದ ವ್ಯಕ್ತಿಯೊಬ್ಬ ವಿಶ್ವಕ್ಕೆ ಮಾದರಿಯಾದ ಬದುಕನ್ನು ನಡೆಸಿರುವುದನ್ನು ನೋಡಿದರೆ ಪ್ರತಿಯೊಬ್ಬರು ಅಂಬೇಡ್ಕರ್ ರೀತಿಯ ಜ್ಞಾನ ಸಂಪತ್ತನ್ನು ಪಡೆಯ ಬಹುದಾಗಿದೆ. ಅದಕ್ಕಾಗಿ ನಿರಂತರವಾದ ಶ್ರಮದ ಅಗತ್ಯವಿದೆ ಎಂದು ಅವರು ಹೇಳಿದರು.
ನಿವೃತ್ತ ನ್ಯಾ.ಎಚ್.ಎನ್.ನಾಗಮೋಹನ ದಾಸ್ ರಚಿತ ‘ಜಾಗತಿಕ ಧುರೀಣ ಅಂಬೇಡ್ಕರ್’ ಕೃತಿಯನ್ನು ನಿವೃತ್ತ ನ್ಯಾ.ಎ.ಜೆ.ಸದಾಶಿವ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಸಮುದಾಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ಸಮುದಾಯದ ರಾಜ್ಯಧ್ಯಕ್ಷ ಅಚ್ಯುತ್, ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ, ಪ್ರಾಧ್ಯಾಪಕಿ ಡಾ.ಅನುಸೂಯ ಕಾಂಬ್ಳೆ ಮತ್ತಿತರರಿದ್ದರು.
‘ಒಳ ಮೀಸಲಾತಿ ವರದಿಯನ್ನು ಸರಕಾರ ಬಿಡುಗಡೆ ಮಾಡುವುದು ಅನುಮಾನ ಎಂದೆನಿಸುತ್ತದೆ. ವರದಿಯನ್ನು ಸರಕಾರಕ್ಕೆ ಸಲ್ಲಿಸಿ ಏಳು ವರ್ಷಗಳು ಕಳೆಯುತ್ತಾ ಬಂದಿವೆ. ಇಲ್ಲಿಯವರೆಗೂ ಅದರಲ್ಲಿ ಏನಿದೆ ಎಂಬುದನ್ನು ಯಾರೂ ಗಮನಿಸದಾಗಿದೆ. ಇದು ಅತ್ಯಂತ ಬೇಸರದ ಸಂಗತಿ. ಪರಿಶಿಷ್ಟ ಜಾತಿಯಲ್ಲಿ ಅಸ್ಪ್ರಶ್ಯ ಜಾತಿಗಳ ಜೊತೆಗೆ ಸ್ಪ್ರಶ್ಯ ಜಾತಿಗಳು ಸೇರಿವೆ. ಇದರಿಂದ ಮೀಸಲಾತಿಯ ಸೌಲಭ್ಯಗಳನ್ನು ಸ್ಪ್ರಶ್ಯ ವರ್ಗವೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಒಳಮೀಸಲಾತಿಯ ವರದಿಯನ್ನು ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ’
-ಎ.ಜೆ.ಸದಾಶಿವ ನಿವೃತ್ತ ನ್ಯಾಯಮೂರ್ತಿ