ಮಧ್ಯಪ್ರದೇಶ: ಬಿಜೆಪಿಗೆ ಸೇರಿದ ಬೆನ್ನಲ್ಲೇ ಉಲ್ಟಾ ಹೊಡೆದ ಛಿಂದ್ವಾರಾ ಮೇಯರ್
ಕಾಂಗ್ರೆಸ್ ಅಭ್ಯರ್ಥಿ ನಕುಲನಾಥ್ರನ್ನು ಬೆಂಬಲಿಸಲು ಮತದಾರರಿಗೆ ಆಗ್ರಹ
PC : PTI
ಛಿಂದ್ವಾರಾ: ಭಾರೀ ಕುತೂಹಲ ಸೃಷ್ಟಿಸಿರುವ ಮಧ್ಯಪ್ರದೇಶದ ಛಿಂದ್ವಾರಾ ಲೋಕಸಭಾ ಕ್ಷೇತ್ರದಲ್ಲಿ ಶುಕ್ರವಾರ ಮತದಾನ ನಡೆದಿದ್ದು, ಇದೇ ವೇಳೆ ಇತ್ತೀಚಿಗಷ್ಟೇ ಬಿಜೆಪಿಗೆ ಸೇರಿದ್ದ ನಗರದ ಮೇಯರ್ ವಿಕ್ರಮ ಅಹಕೆ ಅವರು ಕಾಂಗ್ರೆಸ್ ಅಭ್ಯರ್ಥಿ ನಕುಲನಾಥ್ ಅವರನ್ನು ಬೆಂಬಲಿಸುವಂತೆ ಜನರನ್ನು ಆಗ್ರಹಿಸಿದ ವಿದ್ಯಮಾನ ನಡೆದಿದೆ.
‘ಬಿಜೆಪಿಗೆ ಸೇರಿದ ಬೆನ್ನಲ್ಲೇ ನನಗೆ ಉಸಿರುಗಟ್ಟಿದ ಅನುಭವವಾಗಿತ್ತು. ಛಿಂದ್ವಾರಾವನ್ನು ಅಭಿವೃದ್ಧಿ ಪಡಿಸಿದವರೊಂದಿಗೆ ನಾನು ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು ನನಗೆ ಅನಿಸಿದೆ ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಹೇಳಿರುವ ಅಹಕೆ,ಶಿಕ್ಷಣ ಕ್ಷೇತ್ರವಾಗಿರಲಿ,ಜನರಿಗೆ ಚಿಕಿತ್ಸೆ ಕೊಡಿಸುವುದಾಗಲಿ ಅಥವಾ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಿರಲಿ,ನಕುಲನಾಥ ಕ್ಷೇತ್ರದ ಏಳಿಗೆಗೆ ಸದಾ ಬದ್ಧರಾಗಿದ್ದರು ಎಂದು ತಿಳಿಸಿದ್ದಾರೆ.
ಅಹಕೆ ಎ.೧ರಂದು ಭೋಪಾಲದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ ಯಾದವ ಮತ್ತು ಪಕ್ಷದ ರಾಜ್ಯಾಧ್ಯಕ್ಷ ವಿಷ್ಣುದತ್ತ ಶರ್ಮಾ ಅವರ ಉಪಸ್ಥಿತಿಯಲ್ಲಿ ಬಿಜೆಪಿಯನ್ನು ಸೇರಿದ್ದರು.
ಮಧ್ಯಪ್ರದೇಶವು 29 ಲೋಕಸಭಾ ಸ್ಥಾನಗಳನ್ನು ಹೊಂದಿದ್ದು, 2019ರಲ್ಲಿ ಕಾಂಗ್ರೆಸ್ ಛಿಂದ್ವಾರಾ ಕ್ಷೇತ್ರದಲ್ಲಿ ಮಾತ್ರ ಗೆದ್ದಿತ್ತು. ಮಾಜಿ ಮುಖ್ಯಮಂತ್ರಿ ಹಾಗೂ ನಕುಲನಾಥ್ರ ತಂದೆ ಕಮಲನಾಥ್ ಈ ಕ್ಷೇತ್ರದಿಂದ ಒಂಭತ್ತು ಸಲ ಆಯ್ಕೆಯಾಗಿದ್ದರು.