ಕಳೆದ 2-3 ವರ್ಷಗಳಲ್ಲಿ ನಾಯಕನಾಗಿ ರೋಹಿತ್ ಶರ್ಮಾ ಕೂಡ ಐಪಿಎಲ್ ಗೆದ್ದಿಲ್ಲ | ಹಾರ್ದಿಕ್ ಪಾಂಡ್ಯ ಬೆಂಬಲಕ್ಕೆ ನಿಂತ ವೀರೇಂದ್ರ ಸೆಹ್ವಾಗ್
ರೋಹಿತ್ ಶರ್ಮಾ ,ಹಾರ್ದಿಕ್ ಪಾಂಡ್ಯ , ವೀರೇಂದ್ರ ಸೆಹ್ವಾಗ್ | PC : PTI
ಹೊಸದಿಲ್ಲಿ: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ತನ್ನ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ಕಳಪೆ ಪ್ರದರ್ಶನ ನೀಡುತ್ತಿರುವ ಕಾರಣ ಹಾರ್ದಿಕ್ ಪಾಂಡ್ಯ ಎಲ್ಲೆಡೆಯಿಂದ ತೀವ್ರ ಟೀಕೆಗೆ ಗುರಿಯಾಗುತ್ತಿದ್ದಾರೆ. ಪಾಂಡ್ಯ ಅವರ ಬೆಂಬಲಕ್ಕೆ ನಿಂತಿರುವ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಕಳೆದ 2-3 ವರ್ಷಗಳಲ್ಲಿ ನಾಯಕನಾಗಿದ್ದುಕೊಂಡು ರೋಹಿತ್ ಶರ್ಮಾ ಕೂಡ ಐಪಿಎಲ್ ಟ್ರೋಫಿ ಜಯಿಸಿರಲಿಲ್ಲ ಎಂದಿದ್ದಾರೆ.
ನನ್ನ ಪ್ರಕಾರ ಹಾರ್ದಿಕ್ ಪಾಂಡ್ಯ ಒತ್ತಡದಲ್ಲಿಲ್ಲ. ಕಳೆದ ವರ್ಷ ಕೂಡ ಮುಂಬೈ ಇಂಡಿಯನ್ಸ್ ಇದೇ ರೀತಿಯ ಪರಿಸ್ಥಿತಿ ಎದುರಿಸಿತ್ತು. ಈ ಮೊದಲು ನಾಯಕನಾಗಿದ್ದುಕೊಂಡು ರೋಹಿತ್ ಶರ್ಮಾ ರನ್ ಗಳಿಸಿರಲಿಲ್ಲ. ರೋಹಿತ್ 2-3 ವರ್ಷಗಳಿಂದ ಐಪಿಎಲ್ ಟ್ರೋಫಿ ಜಯಿಸಿಲ್ಲ. ನಾವು ಈ ಹಿಂದೆಯೂ ಇದೇ ರೀತಿಯ ಪರಿಸ್ಥಿತಿಯಲ್ಲಿದ್ದೆವು ಎಂದು ಮುಂಬೈ ಇಂಡಿಯನ್ಸ್ ಆಟಗಾರರಿಗೂ ಗೊತ್ತಿದೆ ಎಂದು ಕ್ರಿಕ್ಬಝ್ಗೆ ಸೆಹ್ವಾಗ್ ತಿಳಿಸಿದ್ದಾರೆ.
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ 2020ರಲ್ಲಿ ಕೊನೆಯ ಬಾರಿ ಐಪಿಎಲ್ ಟ್ರೋಫಿ ಜಯಿಸಿತ್ತು.
ಪಾಂಡ್ಯ ಮುಂಬೈ ಇಂಡಿಯನ್ಸ್ಗೆ ವಾಪಸಾದ ನಂತರ ಕಳಪೆ ಪ್ರದರ್ಶನ ಹಾಗೂ ತನ್ನ ವರ್ತನೆಗೆ ಸಂಬಂಧಿಸಿ ತೀವ್ರ ಟೀಕೆ ಎದುರಿಸುತ್ತಿದ್ದಾರೆ. ಯಶಸ್ವಿ ನಾಯಕ ರೋಹಿತ್ ಶರ್ಮಾರ ಬದಲಿಗೆ ತಂಡದ ಚುಕ್ಕಾಣಿ ಹಿಡಿದಿರುವ ಪಾಂಡ್ಯ ಸ್ಟೇಡಿಯಮ್ನಲ್ಲಿ ನೆರೆದಿದ್ದ ಪ್ರೇಕ್ಷಕರಿಂದ ಹಿಡಿದು ಸಾಮಾಜಿಕ ಜಾಲತಾಣದಲ್ಲೂ ಗೇಲಿಗೆ ಒಳಗಾಗಿದ್ದಾರೆ.
ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ಈ ವರ್ಷದ ಐಪಿಎಲ್ನಲ್ಲಿ ಆಡಿರುವ 8 ಪಂದ್ಯಗಳ ಪೈಕಿ 5ರಲ್ಲಿ ಸೋತಿದೆ. ಸೋಮವಾರ ರಾತ್ರಿ ರಾಜಸ್ಥಾನ ರಾಯಲ್ಸ್ ವಿರುದ್ಧ 9 ವಿಕೆಟ್ಗಳಿಂದ ಹೀನಾಯವಾಗಿ ಸೋಲುಂಡಿದೆ.
ಅಂಕಿ-ಅಂಶಗಳ ಪ್ರಕಾರ ಪಾಂಡ್ಯ ಪ್ರಸಕ್ತ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಅವರು ಆಡಿರುವ 8 ಪಂದ್ಯಗಳಲ್ಲಿ ಕೇವಲ 151 ರನ್ ಗಳಿಸಿದ್ದು, ಅರ್ಧಶತಕ ಗಳಿಸುವಲ್ಲಿಯೂ ವಿಫಲರಾಗಿದ್ದಾರೆ. ಬೌಲಿಂಗ್ನಲ್ಲೂ ಕೂಡ ನಿರಾಸೆಗೊಳಿಸಿರುವ ಪಾಂಡ್ಯ ಪ್ರತಿ ಓವರ್ಗೆ ಸುಮಾರು 11 ರನ್ ನೀಡಿ ಕೇವಲ 4 ವಿಕೆಟ್ಗಳನ್ನು ಪಡೆದಿದ್ದಾರೆ.